ಅಪಾಯಕಾರಿ ನುಡಿಗಳ ಹಿಂದೆ...
ಎನ್ಆರ್ಸಿ, ಸಿಎಎ ವಿರುದ್ಧದ ಪ್ರತಿಭಟನೆಗಳು ಆರಂಭವಾದ ಬಳಿಕ ರಾಜ್ಯ ಬಿಜೆಪಿ ನಾಯಕರ ನಾಲಗೆ ಪುರುಸೊತ್ತಿಲ್ಲದೆ ಹರಿದಾಡುತ್ತಿವೆ. ಸಚಿವ ಸಿ.ಟಿ.ರವಿ ಗೋಧ್ರಾ ಹತ್ಯಾಕಾಂಡವನ್ನು ನೆನಪಿಸಿದರೆ, ಸುರೇಶ್ ಅಂಗಡಿ ‘ಕಂಡಲ್ಲಿ ಗುಂಡು’ ಹಾರಿಸುವ ಮಾತನ್ನಾಡುತ್ತಾರೆ. ಸಚಿವ ಗೋವಿಂದ ಕಾರಜೋಳ, ಮಂಗಳೂರಿನ ಗೋಲಿಬಾರ್ನಲ್ಲಿ ಬಲಿಯಾದ ಇಬ್ಬರಿಗೆ ದೇಶದ್ರೋಹದ ಪಟ್ಟ ಕೊಟ್ಟಿದ್ದಾರೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಪಂಕ್ಚರ್ ಹಾಕುವವರ ‘ಎದೆ ಸೀಳಿ’ ಅಕ್ಷರ ಹುಡುಕಲು ಹೊರಟರೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ‘ಗಲಭೆ ಸೃಷ್ಟಿಸುವವರನ್ನು ಗುಂಡಿಕ್ಕಿ ಕೊಲ್ಲು’ವಂತೆ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕೇ ಬೇಡವೇ ಎಂಬುದು ಹಲವರ ಗೊಂದಲವಾಗಿರಬಹುದು. ಸದ್ಯದ ಇತರ ಸಂದರ್ಭಗಳಿಗೆ ಹೋಲಿಸಿದರೆ ಸದ್ಯದ ಪರಿಸ್ಥಿತಿಯಲ್ಲಿ ಇವು ನಿರ್ಲಕ್ಷಿಸಿ ಸುಮ್ಮನಾಗುವ ಹೇಳಿಕೆಗಳಲ್ಲ.
ರಾಜಕೀಯ ನಾಯಕರು ಜನರನ್ನು ಪ್ರತಿನಿಧಿಸುವವರು. ಅವರ ಸ್ಥಾನಗಳಿಗೆ ಒಂದು ಅವುಗಳದ್ದೇ ಆದ ಗೌರವವಿದೆ. ಹಿಂದೆಂದೋ ಅದೇ ಸ್ಥಾನಗಳಲ್ಲಿ ಧೀಮಂತ ರಾಜಕಾರಣಿಗಳು ನಿಂತಿರಬಹುದು. ಜನರ ಮುಂದೆ ಮುಕ್ತವಾಗಿ ‘‘ಗಲಭೆ ಸೃಷ್ಟಿಸುವವರನ್ನು ಗುಂಡಿಟ್ಟು ಕೊಲ್ಲಿ’’ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಈ ಎಲ್ಲ ನಾಯಕರ ಹೇಳಿಕೆಗಳು ಹತ್ಯೆಗೆ ಹಾತೊರೆಯುವ ಮನಸ್ಥಿತಿಯಿಂದ ಕೂಡಿದೆ. ಯಾವ ಕರುಣೆಯನ್ನೂ ತೋರದೆ, ನಿರ್ದಯಿ ಮನಸ್ಥಿತಿಯಿಂದಲೇ ಇಂತಹ ಹೇಳಿಕೆಗಳನ್ನು ನೀಡುತ್ತಾರಲ್ಲ ಎಂಬುದು ಅಚ್ಚರಿ ಹುಟ್ಟಿಸಿದರೂ, ಸಂಪೂರ್ಣವಾಗಿ ಬಿಜೆಪಿ ಮೇಲಿನ ಭರವಸೆ, ಇಂತಹ ನಾಯಕರ ಮೇಲಿನ ವಿಶ್ವಾಸವನ್ನು ಈ ಹೇಳಿಕೆಗಳು ಕೊಂದುಹಾಕಿವೆ. ಸಚಿವ ಗೋವಿಂದ ಕಾರಜೋಳ, ಮಂಗಳೂರಿನಲ್ಲಿ ಹತ್ಯೆಯಾದ ಇಬ್ಬರನ್ನು ದೇಶದ್ರೋಹ ಪ್ರಕರಣದಲ್ಲಿ ಭಾಗಿಯಾದವರು ಎಂದಿದ್ದಾರೆ.
ದೇಶದ್ರೋಹ ಎಂಬುದು ನಾಲಗೆಯ ತುದಿಯಲ್ಲಿ ಇರುವ ನಾಲ್ಕು ಪದಗಳಷ್ಟೇ ಅಲ್ಲ ಎಂಬ ಪರಿಜ್ಞಾನ ಈ ಸಚಿವರಿಗೆ ಇಲ್ಲದಿರುವುದು ದುರಂತ. ಇವರೆಲ್ಲರೂ ಕೇವಲ ಸ್ಥಾನಗಳನ್ನು ಅಲಂಕರಿಸಿ ಕೂತಿದ್ದಾರೆಯೇ ಹೊರತು ಪ್ರಬುದ್ಧ ರಾಜಕಾರಣಿಯಾಗಿ ಬೆಳೆಯುತ್ತಲೂ ಇಲ್ಲ, ಬೆಳೆಯಲೂ ಇಲ್ಲ. ದೇಶದ್ರೋಹಿ ಚಟುವಟಿಕೆ ಎಂದರೆ ಏನು? ಯಾವುದು, ಹೇಗೆ ದೇಶದ್ರೋಹ ಎನಿಸುತ್ತದೆ? ಇವು ಯಾವುದನ್ನೂ ವಿಮರ್ಶಿಸದೆ, ಅವಲೋಕಿಸದೆ ಏಕಾಏಕಿ ದೇಶದ್ರೋಹದ ಪಟ್ಟ ಕಟ್ಟುವ ಇಂತಹ ನಾಯಕರ ಹುಚ್ಚುತನ, ಸ್ವಸ್ಥ ಸಮಾಜದಲ್ಲಿ ಉಂಟುಮಾಡುವ ಪರಿಣಾಮ ದೊಡ್ಡದು. ಮೋದಿ ಬೆಂಬಲಿಸದವರು ದೇಶದ್ರೋಹಿಗಳು ಎಂಬ ಮಾತುಗಳನ್ನು ಈ ಹಿಂದೆ ಒಬ್ಬರು ಹೇಳಿದ್ದರು. ಮೋದಿ ಸರಕಾರದ ನಡೆಯನ್ನು ಬೆಂಬಲಿಸದವರನ್ನೂ ಇವರು ದೇಶದ್ರೋಹಿಗಳು ಎಂದು ಕರೆಯುತ್ತಾರೆ. ಇದು ಬಿಜೆಪಿಗೆ ಅಂಟಿಕೊಂಡ ಅಮಲೋ, ಹುಚ್ಚುತನವೋ ಅಥವಾ ಅವರ ಬೌದ್ಧಿಕ ಪರಿಧಿಯ ಸಣ್ಣತನವೋ ತಿಳಿಯುತ್ತಿಲ್ಲ. ಯುವ ಸಂಸದ ತೇಜಸ್ವಿ ಸೂರ್ಯ ಸುಖಾಸುಮ್ಮನೆ ಹೇಳಿಕೆ ನೀಡಿ ಕೈಸುಟ್ಟುಕೊಂಡಿದ್ದಾರೆ. ‘‘ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದ ಪಂಕ್ಚರ್ ಹಾಕುವವರು ಸಿಎಎ ವಿರುದ್ಧ ಪ್ರತಿಭಟನೆಗೆ ಬಂದಿದ್ದಾರೆ’’ ಎಂಬ ಅವರ ಹೇಳಿಕೆಯಲ್ಲಿ ನನ್ನನ್ನು ಆತಂಕಗೊಳಿಸಿದ್ದು ‘ಎದೆ ಸೀಳಿದರೆ’ ಎಂಬ ಸಂಗತಿ! ಅಷ್ಟಕ್ಕೂ ಎದೆ ಸೀಳುವ ಕಲ್ಪನೆ ಈ ತೇಜಸ್ವಿಗೆ ಹೇಗೆ ಬಂತು? ಇದು ಸಾಹಿತ್ಯದ ಭಾಷೆ ಎನ್ನಬೇಕೋ ಅಥವಾ ಭೀಕರ ಸಾಹಿತ್ಯವೆನ್ನಬೇಕೋ? ತೇಜಸ್ವಿ ಸೂರ್ಯ ಆಡಿದ ಈ ಮಾತೂ ಕೂಡಾ ಹತ್ಯೆಯ ಹತ್ತಿರ, ನೆತ್ತರ ಕಮಟು ವಾಸನೆಯ ಸುತ್ತ ಸುಳಿಯುವಂಥದ್ದೇ ಅಲ್ಲವೇ?
ಸುರೇಶ್ ಅಂಗಡಿ ತಮ್ಮ ಹೇಳಿಕೆಯನ್ನು ಸಮರ್ಥಿಸುತ್ತಾರೆ. ಇವರೆಲ್ಲ ಹಿಂಸೆಯನ್ನು ಇಷ್ಟೊಂದು ಇಷ್ಟಪಡುವವರು ಎಂಬುದು ಇದುವರೆಗೆ ಏಕೆ ಗೊತ್ತಾಗಲಿಲ್ಲ? ಇವರ ಹೇಳಿಕೆಗಳ ಹಿಂದಿರುವ ಉದ್ದೇಶ, ಹುನ್ನಾರವಾದರೂ ಏನು? ಇಂಗ್ಲಿಷ್ ಪತ್ರಿಕೆ, ವೆಬ್ಸೈಟ್ಗಳ ಮೂಲಕ ಇವರ ಹೇಳಿಕೆ ಕೇಂದ್ರಕ್ಕೆ ತಲುಪಿ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಲಿ ಎಂದೇ? ಅಥವಾ ಇವರ ಚಾಳಿಯೇ ಇದುವೇ? ಸಿ.ಟಿ. ರವಿ ಗೋಧ್ರಾ ಹತ್ಯಾಕಾಂಡವನ್ನು ನೆನಪು ಮಾಡುವಂತೆ ಹೇಳುವ ಅಗತ್ಯವೇನಿತ್ತು? ಅಂಥದ್ದೇನು ನಡೆದಿತ್ತು ಆ ಹೊತ್ತಿನಲ್ಲಿ? ಶಾಸಕ ಖಾದರ್ ಹೇಳಿಕೆಗೂ ಮೊದಲೇ ಪ್ರತಿಭಟನೆಯ ನಿರ್ಧಾರ ತೆಗೆದುಕೊಂಡವರು ಇತರ ಸಂಘಟನೆಗಳು. ಅಲ್ಲದೆ ರಾಜ್ಯ, ದೇಶದಾದ್ಯಂತ ಸಿಎಎ, ಎನ್ಆರ್ಸಿ ವಿರುದ್ಧದ ಪ್ರತಿಭಟನೆಗಳಿಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿಗರು ದೂರುತ್ತಿದ್ದಾರೆ. ಇದಕ್ಕಿಂತ ದೊಡ್ಡ ಮೂರ್ಖತನ ಬೇರಿಲ್ಲ.
ಕಾಂಗ್ರೆಸ್ಗೆ ಇಷ್ಟೊಂದು ಹೋರಾಟದ ಶಕ್ತಿ ಇದ್ದಿದ್ದರೆ, ರಾಜ್ಯದಲ್ಲೂ ದೇಶದಲ್ಲೂ ಇಂದು ಕಾಂಗ್ರೆಸ್ ಅಧಿಕಾರ ಹಿಡಿದಿರುತ್ತಿತ್ತು. ಕಾಂಗ್ರೆಸ್ ನಿದ್ದೆಯಿಂದ ಎಚ್ಚೆತ್ತುಕೊಳ್ಳುವ ಮೊದಲೇ ದೇಶದ ಬೀದಿ ಬೀದಿಯೂ ಜನರಿಂದ ತುಂಬಿ ತುಳುಕಿತ್ತು. ಮಂಗಳೂರಿನ ಪರಿಸ್ಥಿತಿಯೂ ಹೀಗೆಯೇ ಆಗಿದ್ದು. ಅಲ್ಲಿ ಯಾವುದೇ ನಾಯಕನ ಕಾರಣಕ್ಕೆ ಜನರು ಬೀದಿಗೆ ಬಂದಿಲ್ಲ. ತಮ್ಮ ಪೌರತ್ವವನ್ನು ಪ್ರಶ್ನಿಸಲು ಹೊರಟ ಕೇಂದ್ರದ ಮೇಲಿನ ಸಿಟ್ಟಿನಿಂದ ಬಂದಿದ್ದಾರೆ. ಹಿಂಸೆಯನ್ನು ಪ್ರೋತ್ಸಾಹಿಸುವ, ಪ್ರಚೋದಿಸುವ ಈ ರಾಜಕೀಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು? ಇಂತಹ ಹೇಳಿಕೆಗಳನ್ನು ಇವರ ಬಾಯಿಂದ ಕೇಳುತ್ತಲೇ ಇರಬೇಕಾದ ಪರಿಸ್ಥಿತಿ ನಮ್ಮದೇ? ಇವರೇನು ಜನರ ನಡುವ ವಿಷದ ಬೀಜವನ್ನೂ ಭಯದ ಬೀಜವನ್ನೂ ಏಕಕಾಲದಲ್ಲಿ ಬಿತ್ತುತ್ತಿದ್ದಾರೆಯೇ? ಸಿಕ್ಕಸಿಕ್ಕದ್ದಕ್ಕೆಲ್ಲ ಗುಂಡಿಟ್ಟು ಕೊಲ್ಲುವ ಸಂಸ್ಕೃತಿ ಇವರ ನಾಲಗೆ ತುದಿಗೆ ತಲುಪಿದ್ದು ಎಲ್ಲಿಂದ? ಗೋಡ್ಸೆಯನ್ನು ಇಲ್ಲಿ ತಂದಿಟ್ಟು, ಇವರ ಪರಂಪರೆಯ ಹಿನ್ನೆಲೆಯಾಗಿಸಬೇಕೆ? ಅಥವಾ ಗಾಂಧಿ ಕೊಂದವನನ್ನು ದೇಶಪ್ರೇಮಿಯಾಗಿಸುವ ಇವರಿಂದ ನಾವು ದೇಶದ್ರೋಹದ ಪಟ್ಟ ಪಡೆಯುವುದು ಸಾಮಾನ್ಯ ಎಂದು ಸುಮ್ಮನಿರಬೇಕೆ? ಏನೇ ಆದರೂ ಇಂತಹ ಹೇಳಿಕೆಗಳು ಇನ್ನಷ್ಟು ಹೆಚ್ಚಾಗದಂತೆ, ಸಮಾಜದ ಸ್ವಸ್ಥತೆ ಕೆಡದಂತೆ ಎಚ್ಚರ ವಹಿಸುವುದು ಅಗತ್ಯ. ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಖಾದರ್ ವಿರುದ್ಧ ಎಫ್ಐಆರ್ ದಾಖಲಿಸಿದಂತೆಯೇ ಈ ನಾಯಕರ ಮೇಲೂ ಎಫ್ಐಆರ್ ದಾಖಲಾಗಬೇಕಿದೆ.