"ಬಿಜೆಪಿ-ಜೆಜೆಪಿ ಮೈತ್ರಿ ಗುರ್ಗಾಂವ್ ಮಾಲ್ನಲ್ಲಿ ಅಂತಿಮಗೊಳಿಸಲಾಗಿತ್ತು"
ರಾಜೀನಾಮೆ ಸಲ್ಲಿಸಿ ಹೇಳಿಕೆ ನೀಡಿದ ಜೆಜೆಪಿ ಉಪಾಧ್ಯಕ್ಷ
ಜೆಜೆಪಿ ನಾಯಕ ಹಾಗೂ ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ
ಹೊಸದಿಲ್ಲಿ: ಹರ್ಯಾಣದಲ್ಲಿ ಬಿಜೆಪಿಯ ಮಿತ್ರ ಪಕ್ಷ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ)ಯಲ್ಲಿ ಒಡಕುಂಟಾಗುವ ಸಂಭಾವ್ಯತೆ ಎದ್ದು ಕಾಣುತ್ತಿದ್ದು ಪಕ್ಷದ ಉಪಾಧ್ಯಕ್ಷ ಹಾಗೂ ಶಾಸಕ ರಾಮ್ ಕುಮಾರ್ ಗೌತಮ್, ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
"ಹರ್ಯಾಣ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದರೂ ಚುನಾವಣೆ ನಂತರ ಪಕ್ಷದ ಅಧ್ಯಕ್ಷರು ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಗುರ್ಗಾಂವ್ನ ಮಾಲ್ ಒಂದರಲ್ಲಿ ಬಿಜೆಪಿ ಜತೆ ಮೈತ್ರಿಯನ್ನು ಅಂತಿಮಗೊಳಿಸಿದರು,'' ಎಂದು ಗೌತಮ್ ಕಿಡಿ ಕಾರಿದ್ದಾರೆ.
"ನನ್ನನ್ನು ಸಚಿವನನ್ನಾಗಿ ಮಾಡಿಲ್ಲ ಎಂಬುದಕ್ಕೆ ಬೇಸರವಿಲ್ಲ ಆದರೆ ಯಾರ ಗಮನಕ್ಕೂ ತಾರದೆ ಮೈತ್ರಿಯನ್ನು ಅಂತಿಮಗೊಳಿಸಿದ್ದು ನಂತರ ತಿಳಿದು ಬೇಸರವಾಯಿತು,'' ಎಂದು ಬಿಜೆಪಿ-ಜೆಜೆಪಿ ಮೈತ್ರಿ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
"ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ, ಪಕ್ಷವು ಹರ್ಯಾಣದ ಕೆಲ ಭಾಗಗಳಲ್ಲಿ ಮಾತ್ರ ತನ್ನ ಪ್ರಭಾವ ಹೊಂದಿರುವ ಹೊರತಾಗಿಯೂ ನನ್ನನ್ನು ಅದರ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿಸಲಾಗಿತ್ತು,'' ಎಂದು ಅವರು ಹೇಳಿಕೊಂಡಿದ್ದಾರೆ.
ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಕ್ಯಾಪ್ಟನ್ ಅಭಿಮನ್ಯು ಅವರನ್ನು ಗೌತಮ್ ನರ್ನೋಡ್ ಕ್ಷೇತ್ರದಿಂದ ಸೋಲಿಸಿದ್ದರು.