ಉಡುಪಿ, ದ.ಕ.ಜಿಲ್ಲೆ ಪಂಚಾಯತ್ರಾಜ್ ಜನಪ್ರತಿನಿಧಿಗಳಿಗೆ ಹೊಳಪು ಕ್ರೀಡಾಕೂಟ: ಟ್ರೋಫಿ, ಟೀ ಶರ್ಟ್ ಅನಾವರಣ
![ಉಡುಪಿ, ದ.ಕ.ಜಿಲ್ಲೆ ಪಂಚಾಯತ್ರಾಜ್ ಜನಪ್ರತಿನಿಧಿಗಳಿಗೆ ಹೊಳಪು ಕ್ರೀಡಾಕೂಟ: ಟ್ರೋಫಿ, ಟೀ ಶರ್ಟ್ ಅನಾವರಣ ಉಡುಪಿ, ದ.ಕ.ಜಿಲ್ಲೆ ಪಂಚಾಯತ್ರಾಜ್ ಜನಪ್ರತಿನಿಧಿಗಳಿಗೆ ಹೊಳಪು ಕ್ರೀಡಾಕೂಟ: ಟ್ರೋಫಿ, ಟೀ ಶರ್ಟ್ ಅನಾವರಣ](https://www.varthabharati.in/sites/default/files/images/articles/2019/12/26/225244-1577372075.jpg)
ಉಡುಪಿ, ಡಿ.26: ಕೋಟತಟ್ಟು ಗ್ರಾಪಂ ಹಾಗೂ ಕಾರಂತ ಪ್ರತಿಷ್ಠಾನ ಕೋಟ ಇವರ ಆಶ್ರಯದಲ್ಲಿ ಡಿ.28ರಂದು ಕೋಟ ವಿವೇಕ ಸಂಸ್ಥೆಯ ಮೈದಾನದಲ್ಲಿ ನಡೆಯುವ ಉಡುಪಿ, ದ.ಕ ಜಿಲ್ಲೆಯ ಪಂಚಾಯತ್ರಾಜ್ ಜನಪ್ರತಿನಿಧಿಗಳ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸ್ಪರ್ಧೆ ‘ಹೊಳಪು-2019’ ಕಾರ್ಯಕ್ರಮದ ಪ್ರಶಸ್ತಿ ವಿಜೇತರ ಟ್ರೋಫಿ ಹಾಗೂ ಕ್ರೀಡಾಪಟುಗಳಿಗೆ ನೀಡುವ ಟೀ ಶರ್ಟ್ ಮತ್ತು ಕ್ಯಾಪ್ಗಳ ಬಿಡುಗಡೆ ಕಾರ್ಯಕ್ರಮ ಗುರುವಾರ ಸಂಜೆ ಕೋಟ ವಿವೇಕ ಕಾಲೇಜಿನಲ್ಲಿ ನಡೆಯಿತು.
ರಾಜ್ಯದ ಮುಜರಾಯಿ, ಬಂದರು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಟ್ರೋಫಿಗಳ ಅನಾವರಣ ಮತ್ತು ಕ್ರೀಡೋತ್ಸವದ ಗೌರವ ಕಾರ್ಯದರ್ಶಿ ಆನಂದ್ ಸಿ.ಕುಂದರ್ ಟೀಶರ್ಟ್ ಮತ್ತು ಕ್ಯಾಪ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಎಲ್ಲಾ 388 ಗ್ರಾಪಂಗಳ ಸದಸ್ಯರು, 8 ತಾಪಂ, 2 ಜಿಪಂ ಹಾಗೂ 15 ನಗರ ಸ್ಥಳೀಯ ಸಂಸ್ಥೆಗಳ ಸುಮಾರು 6000ಕ್ಕೂ ಅಧಿಕ ಜನಪ್ರತಿ ನಿಧಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸಹ ಭಾಗವಹಿಸಲಿದ್ದಾರೆ. ಗ್ರಾಪಂ ಗಳು ಹಾಗೂ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಆಗಮಿಸುವ ಜನಪ್ರತಿನಿಧಿಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಕೈಗೊಂಡಿದ್ದು, ಪಾರ್ಕಿಂಗ್ಗೆ ಸ್ಥಳ ಗುರುತಿಸಲಾಗಿದೆ. ಎಲ್ಲಾ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಕ್ರೀಡಾಕೂಟದಲ್ಲಿ ಬಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ, ಜಿಪಂ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್ ಹಾಗೂ ಕ್ರೀಡಾಕೂಟದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಚಿವರ ಆಪ್ತ ಸಹಾಯಕ ಹರೀಶ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ನರೇಂದ್ರ ಕುಮಾರ್ ಕೋಟ ವಂದಿಸಿದರು.