ಔಷಧೀಯ ಸಸ್ಯಗಳ ಸಂರಕ್ಷಣೆಯ ಕಾಳಜಿ "ಅನಂತ ಔಷಧಿ ವನ"
ಸುಂದರ ಅನಂತ ಔಷಧಿ ವನ ಉದ್ಘಾಟನೆ
![ಔಷಧೀಯ ಸಸ್ಯಗಳ ಸಂರಕ್ಷಣೆಯ ಕಾಳಜಿ ಅನಂತ ಔಷಧಿ ವನ ಔಷಧೀಯ ಸಸ್ಯಗಳ ಸಂರಕ್ಷಣೆಯ ಕಾಳಜಿ ಅನಂತ ಔಷಧಿ ವನ](https://www.varthabharati.in/sites/default/files/images/articles/2019/12/26/225260-1577374304.jpg)
ಬಂಟ್ವಾಳ, ಡಿ. 26: ಸಾಮಾಜಿಕ ಅರಣ್ಯ ಇಲಾಖೆಯ ಬಂಟ್ವಾಳ ವಲಯ ನೆಟ್ಲ ಮುಡ್ನೂರು ಸಸ್ಯಕ್ಷೇತ್ರದ ಅನಂತಾಡಿಯಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಸುಂದರ ಅನಂತ ಔಷಧಿ ವನ ಇದೀಗ ಉದ್ಘಾಟನೆಗೆ ಸಜ್ಜಾಗಿದೆ.
ಡಿ. 27ರಂದು ಬೆಳಿಗ್ಗೆ 9.30 ಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸುವರು. ಹಚ್ಚ ಹಸಿರಿನಿಂದ ಕಂಗೂಳಿಸುತ್ತಿರುವ ಔಷಧಿ ವನವು 2019ನೇ-20 ಸಾಲಿನ ಉದ್ಯೋಗಖಾತ್ರಿ ಯೋಜನೆ ಹಾಗೂ ಇಲಾಖಾ ಅನುದಾನ ನೆರವಿನೊಂದಿಗೆ ನಿರ್ವಹಿಸಲಾಗಿದ್ದು, 3ವಿವಿಧ ಬಗೆಯ ವನಗಳು ಶಿವನ ವಿಗ್ರಹ, ನಾಗಬನ, ನೈಸರ್ಗಿಕ ಕೆರೆ, ಸುಗಂಧ ದ್ರವ್ಯ ಗಿಡಗಳು ಹಾಗೂ ನೂರಕ್ಕೂ ಹೆಚ್ಚು ಔಷಧಿ ಸಸಿಗಳ ವೈವಿಧ್ಯತೆಗಳೊಂದಿಗೆ ಗಮನಸೆಳೆಯುತ್ತಿದೆ.
ಔಷಧೀಯ ಸಸ್ಯಗಳ ಸಂರಕ್ಷಣೆಯ ಕಾಳಜಿ
ಪ್ಯಾಷನ್ ಗಿಡಗಳ ಅಬ್ಬರದಿಂದ ನಶಿಸಿಹೋಗುತ್ತಿರುವ ಔಷಧೀಯ ಸಸ್ಯಗಳ ಸಂರಕ್ಷಣೆಯ ಉದ್ದೇಶದ ಜೊತೆಗೆ, ಸಸ್ಯಗಳ ಕುರಿತಾಗಿ ಮಾಹಿತಿ, ದಾಖಲೀಕರಣ ಹಾಗೂ ಜಾಗೃತಿ ಮೂಡಿಸುವುದೇ ಈ ಔಷಧಿ ವನದ ಮುಖ್ಯ ಕಾಳಜಿ .ಈ ಅನಂತ ಔಷಧಿ ವನವು ಶಿವ ಪಂಚಾಯತ್ ವನ, ರಾಶಿ ವನ, ನವಗ್ರಹ ವನ ಎಂಬ ಮೂರು ಬಗೆಯ ವನಗಳಿಂದ ಕಂಗೊಳಿಸುತ್ತಿದೆ.
ಏನಿದು ರಾಶಿವನ
ಹನ್ನೆರಡು ರಾಶಿಗಳನ್ನು ಪ್ರತಿನಿಧಿಸುವ ಹನ್ನೆರಡು ಜಾತಿಯ ಸಸ್ಯಗಳನ್ನು ಅಯಾ ರಾಶಿಗುಣವಾಗಿ ನೆಟ್ಟು ಬೆಳೆಸುವುದೇ ರಾಶಿವನ. ಅಯಾ ರಾಶಿಯ ವ್ಯಕ್ತಿಯು ತಮ್ಮ ರಾಶಿಗೆ ಬರುವಂತಹ ಗಿಡ ಅಥವಾ ಮರವನ್ನುನೆಟ್ಟು ಆರಾದಿಸುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಜನರದ್ದು. ಈ ಸಸ್ಯದ ಹೆಸರು ಮತ್ತು ಗುಣಗಳು ಕೂಡಾ ಜನರಿಗೆ ತಿಳಿಯಲ್ಪಡುತ್ತದೆ. ಹಾಗೆಯೇ ಪ್ರತಿಯೊಬ್ಬರೂ ಕೂಡಾ ಇದನ್ನು ಅನುಸರಿಸಿದರೆ ರಾಶಿವನ ಬೆಳೆಸಲ್ಪಡುವ ರಕ್ತ ಚಂದನ, ಸಪ್ತಪರ್ಣಿ, ಜನ್ನಿ, ಕಾಚು, ಹಲಸು, ಮಾವು, ಮುತ್ತುಗೆ, ಮುಂತಾದ ಸಸ್ಯರಾಶಿಯನ್ನು ನಾವು ಸಂರಕ್ಷಿಸಿದಂತಾಗುತ್ತದೆ.
ಶಿವ ಪಂಚಾಯತ್ ವನ
ಶಿವ ಪಂಚಾಯತ್ ವನದಲ್ಲಿ ನಾವು 5 ತರದ ದೇವತೆಯರನ್ನು ನಾವು ಕಾಣಬಹುದು. ಶಿವ, ವಿಷ್ಣು, ಸೂರ್ಯ, ಗಣೇಶ, ಹಾಗೂ ಅಂಬಿಕಾ. ಈ 5 ದೇವತೆಯರು ಐದು ತರಹದ ಸಸ್ಯವನ್ನು ಪ್ರತಿನಿಧಿಸುತ್ತಾರೆ. ಬಿಲ್ವ, ಅರಳಿ, ಕರವೀರ, ವೀತಾ, ಹಾಗೂ ಅಶೋಕ ಗಿಡಗಳನ್ನು ದಿಕ್ಕಿಗನುಗುಣವಾಗಿ ನೆಡಲಾಗಿದೆ.
ಇಂತಹ ಒಂದು ದೈವೀಕೃತ ವನವನ್ನು ಅನಂತ ಔಷಧಿ ವನದಲ್ಲಿ ನಿರ್ಮಿಸಲಾಗಿದೆ. ಈ ವನದಲ್ಲಿ ಮೇಲೆ ತಿಳಿಸಲಾದ ಸಸ್ಯಗಳ ಔಷಧಿ ಗುಣಗಳನ್ನು ತಿಳಿಯಬಹುದು. ದೇವರ ಅರಾಧನೆಯೊಂದಿಗೆ ಸಸ್ಯ ಸಂಕುಲದ ಸಂರಕ್ಷಣೆ ಇದರ ಮುಖ್ಯ ಉದ್ದೇಶವಾಗಿದೆ.
ನವಗ್ರಹ ವನ:
ಭೂ ಮಂಡಲದಲ್ಲಿ ಒಟ್ಟು ಒಂಬತ್ತು ಗ್ರಹಗಳಿವೆ ಎಂದು ಹಿಂದು ಧಾರ್ಮಿಕ ಅಚರಣೆಗಳಿಂದ ಹೇಳುತ್ತಾರೆ. ಈ ಒಂಬತ್ತು ಗ್ರಹಗಳು ಒಂದೊಂದು ಸಸ್ಯವನ್ನು ಪ್ರತಿನಿಧೀಕರಿಸುತ್ತದೆ. ಹಿಂದು ಧರ್ಮದ ನಂಬಿಕೆಗಳ ಪ್ರಕಾರ ಯಾರಿಗಾದರೂ ಯಾವುದಾದರೂ ಗ್ರಹಗಳಿಂದ ದೋಷ ಕಂಡು ಬಂದಲ್ಲಿ ಆ ಗ್ರಹಕ್ಕೆ ಒಳಪಡುವ ಸಸ್ಯವನ್ನು ಪೂಜಿಸಬಹುದು. ಇಂತಹ ಒಂದು ಸುಂದರ ನವಗ್ರಹವನವನ್ನು ಅನಂತ ಔಷಧಿ ವನದಲ್ಲಿ ನಿರ್ಮಿಸಲಾಗಿದೆ. ಈ ವನದಲ್ಲಿ ಒಂಬತ್ತು ಬಗೆಯ ಸಸ್ಯಗಳನ್ನು ದಿಕ್ಕಿಗನುಸಾರವಾಗಿ ನೆಡಲಾಗಿದೆ. ಮಾತ್ರವಲ್ಲದೇ ಅಯಾ ಸಸ್ಯಗಳ ಔಷಧೀಯ ಗುಣಗಳನ್ನು ವಿವರಿಸಲಾಗಿದೆ. ಉದಾಹರಣೆಗೆ ಸೂರ್ಯನಿಗೆ ಬಿಳಿ ಎಕ್ಕ ಗಿಡವನ್ನು, ಚಂದ್ರನಿಗೆ ಮುತ್ತುಗದ ಗಿಡವನ್ನು, ಮಂಗಳನಿಗೆ ಕಾಚುವಿನ ಗಿಡವನ್ನು ಹಾಗೆಯೇ ಉಳಿದ ಎಲ್ಲಾ ಗ್ರಹಗಳಿಗೆ ಒಂದೊಂದು ಸಸಿಗಳನ್ನು ನೆಡಲಾಗಿದೆ. ಪ್ರತೀ ಸಸ್ಯವು ಔಷಧೀಯ ಗುಣಗಳಿಂದ ಕೂಡಿದ್ದು ಇದು ಮಾನವನ ಜೀವನದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಎನ್ನುವ ಸಂದೇಶಗಳು ಇಲ್ಲಿವೆ.
ನಾಗಬನವೂ ಇದೆ
ನಾಗಬನಗಳಲ್ಲಿ ನಾಗಾರಾಧನೆ ಯ ಮೂಲಕ ಆ ಪ್ರದೇಶದ ಪ್ರಾಣಿ ಹಾಗೂ ಸಸ್ಯಗಳನ್ನುರಕ್ಷಿಸಲಾಗುತ್ತದೆ. ಹಲವು ಬಗೆಯ ಔಷಧೀಯ ಮರಗಿಡಗಳನ್ನು ಸಂರಕ್ಷಣೆಗೂ ಇದು ಕಾರಣವಾಗುತ್ತಿದೆ. ಉದಾಹರಣೆಗೆ ನಾಗಸಂಪಿಗೆ, ರೆಂಜಾಲ್, ಸಪ್ತಪರ್ಣಿ,
ಅರಳಿ ಮರ, ದೇವಕಣಗಿಲು, ತುಳಸಿ ಮುಂತಾದ ಸಸ್ಯರಾಶಿಗಳನ್ನು ನಾಗಬನಗಳಲ್ಲಿ ಬೆಳೆಸುವುದರಿಂದ ಇವುಗಳ ಸಂಖ್ಯೆಯನ್ನು ಕಾಪಾಡಿದಂತಾಗುತ್ತದೆ. ಅನಂತ ಔಷಧಿ ವನದಲ್ಲಿಯೂ ನಾಗಬನವಿದ್ದು ಇದರಿಂದ ಅಳಿವಿನಂಚಿನಲ್ಲಿರುವ ಹಲವು ಸಸ್ಯ ಪ್ರಭೇಧವನ್ನು ಇಲ್ಲಿ ಸಂರಕ್ಷಿಸಲಾಗುತ್ತದೆ.
ಉದ್ಯೋಗ ಖಾತ್ರಿಯ ನೆರವು
ಕೇಂದ್ರ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಾಗೂ ಅರಣ್ಯ ಇಲಾಖಾ ನೆರವನ್ನು ಪಡೆದು ನಿರ್ಮಿಸಲಾಗಿದ್ದು, ಗ್ರಾಮಸ್ಥರ ಪರೋಕ್ಷ ಸಹಭಾಗಿತ್ವವೂ ಇಲ್ಲಿ ಗಮನೀಯ.
ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬಗೆಯ ಔಷಧೀಯ ಸಸಿಗಳ ಮೂಲ ತಾಣವಾಗಿತ್ತು. ಆದರೆ ಅಭಿವೃದ್ಧಿ ಎಂಬ ಹೆಸರಿನಿಂದ ವಿವಿಧ ಸಸ್ಯ ಸಂಕುಲಗಳು ನಾಶವಾಗುತ್ತಿರುವುದು ನಮಗೆಲ್ಲ ಗೊತ್ತೆ ಇದೆ. ಅನ್ಯ ದೇಶದ ಸಸ್ಯತಳಿಗಳ ಮೇಲಿನ ಒಲವು ನಮ್ಮ ಸ್ಥಳೀಯ ಪ್ರಭೇಧಗಳನ್ನು ನಶಿಸುವಂತೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಔಷಧೀಯ ಸಸ್ಯಗಳ ಸಂರಕ್ಷಣೆಗೆ ಹೆಚ್ಚು ಒತ್ತುಕೊಟ್ಟು ನೆಟ್ಲಮುಡ್ನೂರಿನ ``ಅನಂತ ಔಷಧಿ ವನದಲ್ಲಿ'' ಗ್ರಾಮದಲ್ಲಿ ಸಿಗುವಂತಹ ಕಣ್ಮರೆಯಾಗುತ್ತಿರುವಂತೆ ಸಸ್ಯ ಪ್ರಭೇಧಗಳನ್ನು ಬೆಳೆಸಿ ಜನರಿಗೆ ಅದರ ಮಹತ್ವವನ್ನು ತಿಳಿಸುವ ಒಂದು ಪ್ರಯತ್ನವನ್ನು ಮಾಡಲಾಗಿದೆ. (ಉದಾಹರಣೆ : ಸರ್ಪಗಂಧಿ ಅಥವಾ ಗರುಡ ಪಾತಾಳ ಎಂದು ಹೇಳಲಾಗುವ ಉಪಯುಕ್ತ ಔಷಧಿ ಸಸ್ಯದ ಸಂಖ್ಯೆಯು ಕಡಿಮೆಯಾಗುತ್ತಾ ಬರುತ್ತಿದೆ ಹಾಗೂ ಈಶ್ವರ ಬಳ್ಳಿ ಕೂಡಾ ಕಾಡಿನ ನಾಶದೊಂದಿದೆ ತನ್ನ ಸಂಖ್ಯೆಯನ್ನು ಕಳೆದುಕೊಳ್ಳುತ್ತಿದೆ. ಇಂತಹ ಸಸ್ಯಗಳನ್ನು ಅನಂತ ಔಷಧಿ ವನದಲ್ಲಿ ಬೆಳೆಸಲಾಗಿದೆ. ಉತ್ರಾಣಿ, ದರ್ಬೆ, ಗರ್ಗ, ತ್ರಿಪರ್ಣಿ ಮುಂತಾದ ಸಸ್ಯಗಳು ಇನ್ನೂ ಹಲವು ತರದ ಸಸ್ಯಗಳನ್ನು ನಾವು ಅನಂತ ಔಷಧಿ ವನದಲ್ಲಿ ಕಾಣಬಹುದು.
ಅಂತರ್ಜಲ ಮಟ್ಟವನ್ನು ಕಾಪಾಡಲು ಇರುವ ದಾರಿಯೆಂದರೆ ತೊರೆಗಳಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವುದು, ಗಿಡಗಳನ್ನು ನೆಟ್ಟು ಬೆಳೆಸುವುದು. ಹಾಗೂ ಗುಡ್ಡ ಕಾಡು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವುದು. ಇಂಗು ಗುಂಡಿಗಳನ್ನು ಹೇಗೆ ನಿರ್ಮಿಸಬೇಕು ಇದರಿಂದ ಹೇಗೆ ನೀರಿ ಇಂಗಲು ಸಾದ್ಯ ಎನ್ನುವ ಪ್ರಶ್ನೆಗಳಿಗೆ ಉತ್ತರವಾಗಿ ``ಅನಂತ ಔಷಧಿವನದಲ್ಲಿ'' ಇಂಗು ಗುಂಡಿಗಳು ಹಾಗೂ ಕೆರೆಯನ್ನು ನಿರ್ಮಿಸಿ ಮಳೆಗಾಲದಲ್ಲಿ ಪೋಲಾಗುವ ನೀರನ್ನು ಇದರಲ್ಲಿ ಇಂಗಿಸಿ ಸಂರಕ್ಷಿಸಲಾಗುತ್ತಿದೆ.
''ಸಾಮಾನ್ಯ ಅರಣ್ಯ ಇಲಾಖೆ ಮಂಗಳೂರು ವಿಭಾಗದಿಂದ ಎಲ್ಲ ತಾಲೂಕುಗಳಲ್ಲಿ ಒಂದೊಂದು ಔಷಧಿವನ ನಿರ್ಮಾಣ ಮಾಡುವ ಉದ್ದೇಶವಿದೆ. ಅದೇ ರೀತಿಯಲ್ಲಿ ಬಂಟ್ವಾಳ ತಾಲೂಕಿನ ಕೆಲಿಂಜ ಎಂಬಲ್ಲಿ ಅನಂತ ಔಷಧಿವನವನ್ನು ನಿರ್ಮಿಸಲಾಗಿದೆ. ಉದ್ಯೋಗಖಾತರಿಯಲ್ಲಿ 11 ಲಕ್ಷ ರೂ., ಇಲಾಖೆಯಿಂದ 4 ಲಕ್ಷ ರೂ. ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಔಷಧಿಗಿಡಗಳನ್ನು ನೆಡಲಾಗಿದ್ದು, ಅನಂತಾಡಿಯಲ್ಲಿ ಸಸ್ಯಕ್ಷೇತ್ರವೂ ಇದೆ.
-ರಾಜೇಶ್ ಬಳಿಗಾರ, ವಲಯ ಅರಣ್ಯಾಧಿಕಾರಿ