ರೈಲು ಪ್ರಯಾಣಿಕರ ಜೇಬಿಗೆ ಕತ್ತರಿ ?
ಹೊಸದಿಲ್ಲಿ : ರೈಲು ಪ್ರಯಾಣ ದರ ಸದ್ಯದಲ್ಲೇ ಹೆಚ್ಚುವ ಬಗ್ಗೆ ವದಂತಿಗಳು ಹಬ್ಬಿರುವ ನಡುವೆಯೇ, ಪ್ರಯಾಣ ದರ ಮತ್ತು ಸರಕು ಸಾಗಾಣಿಕೆ ದರಗಳನ್ನು ಹೆಚ್ಚು ತಾರ್ಕಿಕವಾಗಿ ಪರಿಷ್ಕರಿಸುವ ಪ್ರಕ್ರಿಯೆ ನಡೆದಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಪ್ರಕಟಿಸಿದ್ದಾರೆ.
"ರೈಲು ಪ್ರಯಾಣದರ ಮತ್ತು ಸರಕು ಸಾಗಾಣಿಕೆ ದರವನ್ನು ತರ್ಕಬದ್ಧವಾಗಿ ಪರಿಷ್ಕರಿಸಲಿದ್ದೇವೆ. ಈ ಬಗ್ಗೆ ಯೋಚನೆ ನಡೆದಿದೆ. ಇದು ಸೂಕ್ಷ್ಮ ವಿಷಯವಾಗಿರುವುದರಿಂದ ಹೆಚ್ಚೇನನ್ನೂ ಹೇಳುವುದಿಲ್ಲ. ಸರಕು ಸಾಗಾಣಿಕೆ ದರ ಈಗಾಗಲೇ ಅಧಿಕ ಇರುವುದರಿಂದ, ರಸ್ತೆ ಮೂಲಕ ಸರಕು ಸಾಗಾಣಿಕೆ ಬದಲು ರೈಲಿನ ಮೂಲಕ ಸಾಗಾಣಿಕೆಗೆ ಆಕರ್ಷಿಸುವುದು ನಮ್ಮ ಉದ್ದೇಶ" ಎಂದು ಹೇಳಿದ್ದಾರೆ.
ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ರೈಲ್ವೆಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚು ಸರಕುಗಳನ್ನು ಆಕರ್ಷಿಸುವುದಷ್ಟೇ ಇದರಿಂದ ಹೊರಬರಲು ಇರುವ ಪರಿಹಾರ. ಆದರೆ ಇದಕ್ಕೆ ಅವಕಾಶ ಕಡಿಮೆ. ಆದ್ದರಿಂದ ಪ್ರಯಾಣ ದಳ ಹೆಚ್ಚಳವೊಂದೇ ತಕ್ಷಣಕ್ಕೆ ರೈಲ್ವೆ ಮುಂದಿರುವ ಅವಕಾಶ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ರೈಲ್ವೆ ವಕ್ತಾರರು ಹೇಳಿಕೆ ನೀಡಿ, "ದರ ಏರಿಕೆ ಪ್ರಸ್ತಾವ ಇಲ್ಲ. ದರವನ್ನು ಹೆಚ್ಚು ತರ್ಕಬದ್ಧವಾಗಿಸುವ ಯೋಚನೆ ಇದೆ. ಹಾಗೆಂದ ಮಾತ್ರಕ್ಕೆ ಅದು ದರ ಏರಿಕೆಯೇ ಆಗಬೇಕಿಲ್ಲ; ಇಳಿಕೆಯೂ ಆಗಬಹುದು" ಎಂದು ಹೇಳಿದ್ದಾರೆ.