ಪಕ್ಷ ವಿರೋಧಿ ಚಟುವಟಿಕೆ: ಬಿಬಿಎಂಪಿಯ 14 ಕಾಂಗ್ರೆಸ್ ಸದಸ್ಯರಿಗೆ ಶೋಕಾಸ್ ನೋಟಿಸ್
ಬೆಂಗಳೂರು, ಡಿ.27: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿ ಹಾಗೂ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಕಾಂಗ್ರೆಸ್ನ 14 ಬಿಬಿಎಂಪಿ ಸದಸ್ಯರುಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಬಿಎಂಪಿ ಸದಸ್ಯರುಗಳಾದ ಎಂ.ಕೆ.ಗುಣಶೇಖರ್, ನೇತ್ರಾವತಿ ಕೃಷ್ಣೇಗೌಡ, ರಾಜಣ್ಣ, ಆರ್ಯ ಶ್ರೀನಿವಾಸ್, ಜಯಪ್ರಕಾಶ್, ಎಚ್.ಜೆ.ನಾಗರಾಜ್, ಎಸ್. ವಾಸುದೇವ, ಬಿ.ಎನ್. ನಿತೀಶ್ ಪುರುಷೋತ್ತಮ, ಎಂ.ಎನ್.ಶ್ರೀಕಾಂತ್, ವಿ.ಸುರೇಶ್, ಶ್ರೀನಿವಾಸಮೂರ್ತಿ, ಜಿ.ಕೆ.ವೆಂಕಟೇಶ್, ಎಂ.ವೇಲು ನಾಯ್ಕರ್, ಜಿ.ಮೋಹನ್ಕುಮಾರ್ಗೆ ಪಕ್ಷ ವಿರೋಧಿ ಚಟುವಟಿಕೆ ಅಡಿಯಲ್ಲಿ ಶೋಕಾಸ್ ನೋಟಿಸ್ ನೀಡಲಾಗಿದೆ. ಈ 14 ಸದಸ್ಯರನ್ನೂ ಪೌರಾಡಳಿತ ಕರ್ನಾಟಕ ಸ್ಥಳೀಯ ಪ್ರಾಧಿಕಾರ(ಪಕ್ಷಾಂತರ ನಿಷೇಧ) ಅಧಿನಿಯಮದ ಅನ್ವಯ ಸದಸ್ಯತ್ವವನ್ನು ಅನರ್ಹಗೊಳಿಸಬೇಕು. ಅನರ್ಹತೆಯ ತೀರ್ಮಾನವಾಗುವವರೆಗೂ ಡಿ.30ರಂದು ನಡೆಯುವ ಪಾಲಿಕೆಯ 12 ಸ್ಥಾಯಿ ಸಮಿತಿಯ ಚುನಾವಣೆಯನ್ನು ಮುಂದೂಡಲು ಅಬ್ದುಲ್ ವಾಜಿದ್, ಬಿಬಿಎಂಪಿ ಆಯುಕ್ತರಿಗೆ ಪತ್ರದಲ್ಲಿ ತಿಳಿಸಿದ್ದಾರೆ.