ಗಣರಾಜ್ಯೋತ್ಸವ: ಕರ್ನಾಟಕದ ಅನುಭವ ಮಂಟಪ ಸ್ತಬ್ಧಚಿತ್ರ ಕೇಂದ್ರಬಿಂದು

ಬೆಂಗಳೂರು, ಡಿ.27: ನವದೆಹಲಿಯಲ್ಲಿ ಜನವರಿ 26ರಂದು ಜರುಗಲಿರುವ 2020ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಕರ್ನಾಟಕದ ಅನುಭವ ಮಂಟಪ ಸ್ತಬ್ಧಚಿತ್ರವು ಈ ಬಾರಿ ಎಲ್ಲರ ಮನಸೂರೆಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ ತಿಳಿಸಿದ್ದಾರೆ.
ಭಾರತವು ಸಂವಿಧಾನವನ್ನು ಅಳವಡಿಸಿಕೊಂಡು 70 ವರ್ಷಗಳು ಪೂರ್ಣಗೊಂಡು ಹಾಗೂ ಸ್ವತಂತ್ರ ಗಣರಾಜ್ಯವಾಗಿರುವ ಈ ಸಂದರ್ಭದಲ್ಲಿ ಅನುಭವ ಮಂಟಪ ಸ್ತಬ್ಧಚಿತ್ರವು ವಿಶೇಷ ಮಹತ್ವ ಪಡೆದಿದೆ. ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪ್ರದರ್ಶನಕ್ಕೆ ಕರ್ನಾಟಕ ಸ್ತಬ್ಧಚಿತ್ರವು ಸತತ ಹನ್ನೊಂದನೇ ಬಾರಿಗೆ ಆಯ್ಕೆಗೊಂಡಿದೆ ಎಂದು ತಿಳಿಸಿದರು.
ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಅನುಭವ ಮಂಟಪವು ಸಾಮಾಜಿಕ, ಧಾರ್ಮಿಕ, ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಮಾನವ ಸಮಾಜದ ಅಭಿವೃದ್ಧಿಗಾಗಿ ಆಧ್ಯಾತ್ಮಿಕ, ತತ್ವಶಾಸ್ತ್ರ ಆಧಾರದ ಮೇಲೆ ರಚಿತವಾದುದು. ಬಸವೇಶ್ವರರು ಹಾಕಿಕೊಟ್ಟ ಸಮಾನತೆ, ಸೋದರತೆ ಮತ್ತು ಸಹಭಾಗಿತ್ವದ ಹಾದಿಯಲ್ಲಿ ಸಮಾಜ ಮುನ್ನಡೆಸುವಂಥದು. ಇಂದಿಗೆ ಒಂಭತ್ತು ಶತಮಾನದ ಹಿಂದೆಯೇ ಸಾಮಾಜಿಕ ದೃಷ್ಟಿಕೋನವುಳ್ಳ ಆ ಮಹಾನ್ ಮಾನವತಾವಾದಿಯ ಸಾಧನೆ ಅಪಾರವಾದದ್ದು ಎಂದು ತಿಳಿಸಿದರು.







