ಕಾರು-ಬಸ್ ಮುಖಾಮುಖಿ ಢಿಕ್ಕಿ: ಕಾಲೇಜು ಪ್ರಾಂಶುಪಾಲ ಮೃತ್ಯು

ಮಂಗಳೂರು, ಡಿ. 28: ಸಮೀಪದ ವಾಮಂಜೂರು ಪರಾರಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಕಾರು ಮತ್ತು ಬಸ್ ಮುಖಾಮುಖಿ ಅಪಘಾತದಲ್ಲಿ ಕಾಲೇಜೊಂದರ ಪ್ರಾಂಶುಪಾಲರು ಸ್ಥಳದಲ್ಲೇ ಅಸುನೀಗಿದ್ದಾರೆ. ಬಸ್ಸಿನಲ್ಲಿದ್ದ ಸುಮಾರು 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕುಡುಪು ಪಾಲ್ದನೆ ನಿವಾಸಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವಿಭಾಗದ ಪ್ರಾಂಶುಪಾಲ ಡಾ.ವರ್ನನ್ ಬ್ರಾಯನ್ ಸಾಲ್ವದೋರ್ ಡಿಸಿಲ್ವಾ (53) ಮೃತರು.
ಗಾಯಾಳುಗಳ ಪೈಕಿ ಬಿ.ಫಾತಿಮಾ (52), ರಹಿದಾ ಬಾನು (38), ರಮೇಶ್ ಸಪಲಿಗ (47), ಶ್ರುತಿ (28), ಸುಜಾತಾ (45) ಅವರು ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ, ಕೆ. ರಘುರಾಮ್ (72), ಶಮೀಮ (40) ಅವರು ಮೂಡುಬಿದಿರೆ ಆಳ್ವಾಸ್ ಆಸ್ಪತ್ರೆಯಲ್ಲಿ ಹಾಗೂ ಅಶೋಕ್ (35), ರಾಜೇಶ್ (41), ವಿಜಯ್ (49), ಸಂದೀಪ್ (28), ಸುಂದರ ಕೆ. (40) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಬಸ್ ಪ್ರಯಾಣಿಕರು.
ಘಟನೆ ವಿವರ: ಪ್ರಾಂಶುಪಾಲರು ಸಂಜೆ 3:45ರ ಸುಮಾರಿಗೆ ಕಾಲೇಜಿನಿಂದ ಮಂಗಳೂರಿನ ಪಾಲ್ದನೆಯಲ್ಲಿರುವ ಮನೆ ಕಡೆಗೆ ತನ್ನ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಮಂಗಳೂರಿನಿಂದ ಮೂಡುಬಿದಿರೆ ಮಾರ್ಗವಾಗಿ ವೇಣೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಢಿಕ್ಕಿಯ ರಭಸಕ್ಕೆ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಮೂಡುಬಿದಿರೆ ಕಡೆ ಮುಖ ಮಾಡಿ ನಿಂತಿದೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಅದರೊಳಗೆ ಸಿಲುಕಿದ್ದ ಚಾಲಕ ಡಾ.ವರ್ನನ್ ಅವರ ದೇಹವನ್ನು ಹೊರ ತೆಗೆಯಲು ಸುಮಾರು ಅರ್ಧ ಗಂಟೆ ತಗುಲಿತ್ತು. ಅಲ್ಲದೆ, ಬಸ್ ರಸ್ತೆ ಮಧ್ಯೆ ಮಗುಚಿ ಬಿದ್ದಿದ್ದು, ಇದರ ಪರಿಣಾಮವಾಗಿ ಹಲವು ಪ್ರಯಾಣಿಕರು ಗಾಯಗೊಂಡರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೂಡಲೇ ನಗರದ ಬೇರೆ ಬೇರೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ನಡು ರಸ್ತೆಯಲ್ಲಿ ಬಿದ್ದ ಬಸ್ನ್ನು ಬಳಿಕ ಸಮೀಪದಲ್ಲಿಯೇ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆಯ ಬದಿಗೆ ಸರಿಸಿ ಇತರ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಡಾ.ವರ್ನನ್ ಅವರು 1995ರಿಂದ ಆಳ್ವಾಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಾರಂಭದಲ್ಲಿ ಮೈಕ್ರೋ ಬಯೋಲಜಿ ವಿಭಾಗದಲ್ಲಿದ್ದರು. ಬಳಿಕ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವಿಭಾಗ ರೂಪುಗೊಂಡಾಗ ಅದರ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು. ಅವರು ಪತ್ನಿ ಡಾ.ಉಷಾ ಡಿಸಿಲ್ವ ಹೆರಿಗೆ ಮತ್ತು ಪ್ರಸೂತಿ ತಜ್ಞರಾಗಿದ್ದಾರೆ.
ಡಾ.ವರ್ನನ್ ಅವರು ಉತ್ತಮ ಚಿಂತಕರಾಗಿದ್ದು, ರಾಸಾಯನ ಶಾಸ, ಕೃಷಿ, ದೇಶದ ಆಗು ಹೋಗುಗಳ ಕುರಿತಂತ ತಮ್ಮ ಆತ್ಮೀಯರ ಜತೆ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದರು. ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿರುವುಗಳಿಂದ ಕೂಡಿದ್ದ ರಸ್ತೆ
ಮಂಗಳೂರು-ಮೂಡುಬಿದಿರೆ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿದ್ದರೂ ಇನ್ನೂ ಅದರ ಅಗಲೀಕರಣ ಕಾಮಗಾರಿ ನಡೆದಿಲ್ಲ. ಈ ರಸ್ತೆ ಯಲ್ಲಿ ವಾಹನಗಳ ಓಡಾಟ ಹೆಚ್ಚಳವಾಗಿದ್ದು, ಅದಕ್ಕನುಗುಣವಾದ ರಸ್ತೆ ಇಲ್ಲ. ಸಿಂಗಲ್ ರಸ್ತೆ ಆಗಿದ್ದರೂ ವಾಮಂಜೂರಿನ ಕೆತ್ತಿಕಲ್ ನಿಂದ ಗುರುಪುರ ಸೇತುವೆ ತನಕ ಇಳಿಜಾರು ರಸ್ತೆ ಇದ್ದು, ಅನೇಕ ತಿರುವುಗಳಿಂದ ಕೂಡಿದೆ.
ಗುರುಪುರ ಕಡೆಗೆ ಮತ್ತು ಗುರುಪುರದಿಂದ ವಾಮಂಜೂರು ಕಡೆಗೆ ಚಾಲಕರು ವಾಹನಗಳನ್ನು ಅತಿ ವೇಗವಾಗಿ ಚಲಾಯಿಸುತ್ತಾರೆ. ಹೆಸರಿಗೆ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದರೂ ಹೆದ್ದಾರಿಯ ಗುಣ ಮಟ್ಟ ಈ ರಸ್ತೆಗೆ ಬಂದಿಲ್ಲ. ಹಾಗಾಗಿ ಅಪಘಾತಗಳು ಪದೇ ಪದೇ ನಡೆಯುತ್ತಲೇ ಇವೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.








