ಜ.5ರಿಂದ ಬಿಜೆಪಿಯಿಂದ ಸಿಎಎ ಕುರಿತು ಜಾಗೃತಿ ಮೂಡಿಸಲು ಪ್ರಚಾರಾಂದೋಲನ
ಹೊಸದಿಲ್ಲಿ,ಡಿ.28: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ದೇಶಾದ್ಯಂತ ತೀವ್ರಗೊಳ್ಳುತ್ತಿರುವ ಪ್ರತಿಭಟನೆಗಳಿಗೆ ತಿರುಗೇಟು ನೀಡಲು ಬಿಜೆಪಿ ನಾಯಕತ್ವವು ಕಾಯ್ದೆಯ ಕುರಿತು ತಪ್ಪುಗ್ರಹಿಕೆಗಳನ್ನು ನಿವಾರಿಸಲು ಮತ್ತು ಸಾರ್ವಜನಿಕ ಜೀವನದಲ್ಲಿ ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಜ.5ರಿಂದ 15ರವರೆಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೃಹತ್ ಪ್ರಚಾರಾಂದೋಲನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ಪಕ್ಷಾಧ್ಯಕ್ಷ ಅಮಿತ್ ಶಾ,ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಸುಮಾರು 50 ಹಿರಿಯ ನಾಯಕರು ಪ್ರಚಾರಾಂದೋಲನ ವನ್ನು ಉತ್ತೇಜಿಸಲು ಹಲವಾರು ನಗರಗಳಲ್ಲಿ ಬೃಹತ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜಾಗೃತಿ ಅಭಿಯಾನದಲ್ಲಿ ಆರೆಸ್ಸೆಸ್ ಕೂಡ ಬಿಜೆಪಿಯೊಂದಿಗೆ ಕೈಜೋಡಿಸುವ ಸಾಧ್ಯತೆಯಿದ್ದು, ಪ್ರಚಾರಾಂದೋಲನದ ಅಂತ್ಯದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಯೋಜಿಸಲಾಗಿದೆ. ಬೌದ್ಧರು, ದಲಿತರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳನ್ನು ತಲುಪಲು ವಿವಿಧ ಸಾರ್ವಜನಿಕ ಸಂಪರ್ಕ ಗುಂಪುಗಳನ್ನು ವಿಶೇಷವಾಗಿ ರಚಿಸಲೂ ಬಿಜೆಪಿ ಉದ್ದೇಶಿಸಿದೆ. ತನ್ಮೂಲಕ ಸುಮಾರು ಮೂರು ಕೋಟಿ ಕುಟುಂಬಗಳನ್ನು ತಲುಪುವ ಆಶಯವನ್ನು ಪಕ್ಷವು ಹೊಂದಿದೆ.
ಬಿಜೆಪಿ ಈ ಮೊದಲೂ ತನ್ನ ಕಾರ್ಯಕರ್ತರು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ಜಾಗೃತಿ ಅಭಿಯಾನಗಳನ್ನು ನಡೆಸಲು ಪ್ರಯತ್ನಿಸಿತ್ತು. ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ ಗಳು ಜನರನ್ನು ತಲುಪಲು ಮತ್ತು ಸಿಎಎ ಕುರಿತು ಸ್ಪಷ್ಟನೆ ನೀಡಲು ಹಲವಾರು ವಿವರಣಾತ್ಮಕ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದವು.