ಮಂಗಳೂರು ಗೋಲಿಬಾರ್ ಪ್ರಕರಣ : ಡಿ.31ರಂದು ಮಾನವ ಹಕ್ಕು ಆಯೋಗದಿಂದ ವಿಚಾರಣೆ ಆರಂಭ

ಮಂಗಳೂರು, ಡಿ. 28: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಮತ್ತು ಹಿಂಸಾಚಾರದಲ್ಲಿ ಪೊಲೀಸರು ಜನರ ಮೇಲೆ ದೌರ್ಜನ್ಯ ಎಸಗಿ ಮಾನವ ಹಕ್ಕು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಎಐಸಿಸಿಯ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕಿ ಲಾವಣ್ಯ ಬಲ್ಲಾಳ್ ಸೇರಿದಂತೆ ನಾಲ್ಕು ಮಂದಿ ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ಈಗಾಗಲೇ ಪ್ರಕರಣ ದಾಖಲಿಸಿದ್ದು, ಇದರ ವಿಚಾರಣೆ ಡಿ.31ರಿಂದ ಆರಂಭವಾಗಲಿದೆ.
ಲಾವಣ್ಯ ಬಲ್ಲಾಳ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮೂನಿಷ್ ಅಲಿ ಅಹ್ಮದ್, ರಕ್ಷಿತ್ ಶಿವರಾಮ್ ಡಿ.26ರಂದು ಆಯೋಗಕ್ಕೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆಯೋಗವು ಡಿ.31ರಂದು ಸಂಜೆ 3 ಗಂಟೆಗೆ ಪ್ರಥಮ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಧೀರೇಂದ್ರ ಹೀರಾಲಾಲ್ ಅಧ್ಯಕ್ಷತೆಯ ಮಾನವ ಹಕ್ಕು ಆಯೋಗದ ಪೂರ್ಣ ಪ್ರಮಾಣದ ಪೀಠ ಈ ವಿಚಾರಣೆ ನಡೆಸಲಿದೆ.
ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿಯ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕಿ ಲಾವಣ್ಯ ಬಲ್ಲಾಳ್, ಗಲಭೆ ಆರಂಭವಾದಾಗಿನಿಂದ ನಡೆದ ಘಟನೆಗಳ ಸಂಪೂರ್ಣ ತನಿಖೆಯಾಗಲು ಈ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಮುಖ್ಯಮಂತ್ರಿ ಮತ್ತು ನ್ಯಾಯಾಲಯಗಳ ಆದೇಶವನ್ನು ಉಲ್ಲಂಘಿಸಿ ಜನರ ಮೇಲೆ ಗೋಲಿಬಾರ್ ನಡೆಸಿ ಇಬ್ಬರ ಸಾವಿಗೆ ಕಾರಣವಾಗಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳಲು ಆಗ್ರಹಿಸಿ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸದೆ ಇದ್ದುದರಿಂದ ನಾವು ಪ್ರಕರಣವನ್ನು ದಾಖಲು ಮಾಡಿದ್ದೇವೆ. ಆಯೋಗದ ಅಧ್ಯಕ್ಷರನ್ನೂ ಭೇಟಿಯಾಗಿದ್ದು, ವೀಡಿಯೊ, ಫೋಟೊ ಸೇರಿದಂತೆ ಖಚಿತ ಮಾಹಿತಿ, ದಾಖಲೆಗಳೊಂದಿಗೆ ವಿಚಾರಣೆಗೆ ಬರಲು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ನಡೆದ ಕಲ್ಲು ಎಸೆತ ಕ್ರಮವನ್ನು ಸಮರ್ಥನೆ ಮಾಡುಕೊಳ್ಳುತ್ತಿಲ್ಲ. ಹಿಂಸಾಚಾರ, ಲಾಠಿಚಾರ್ಜ್ ಮತ್ತು ಗೋಲಿಬಾರ್ಗೆ ಸಂಬಂಧಪಟ್ಟಂತೆ ವಿವಿಧೆಡೆಯಿಂದ ಕಲೆ ಹಾಕಿದ ವೀಡಿಯೊ, ಫೋಟೊ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಿ ದ್ದೇವೆ ಎಂದುರ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷ ಸಾಕ್ಷಿಗಳು ಹೇಳಿಕೆ ನೀಡಲಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ. ಆಯೋಗದಿಂದ ಸಮಗ್ರ ತನಿಖೆ ನಡೆದು ನ್ಯಾಯ ಸಿಗಲಿದೆ ಎನ್ನುವುದು ನಮ್ಮ ನಂಬಿಕೆಯಾಗಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಮಾತನಾಡಿ, ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನೇತೃತ್ವದಲ್ಲಿ ನಡೆದ ಗೋಲಿಬಾರ್ ಪೂರ್ವ ನಿರ್ಧಾರಿತವಾಗಿತ್ತು. ಇಲ್ಲದಿದ್ದರೆ ಅಷ್ಟೊಂದು ಪೊಲೀಸರನ್ನು ಮೊದಲೇ ತರಿಸಿ ಇಟ್ಟುಕೊಂಡಿದ್ದೇಕೆ? ನಿರಾಯುಧರಾಗಿದ್ದ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದೇಕೆ ? ಈ ಲಾಠಿಚಾರ್ಜ್ಗೂ ನಂತರ ನಡೆದ ಗೋಲಿಬಾರ್ಗೂ ಸಂಬಂಧವಿದೆ ಎಂದು ಅವರು ಆರೋಪಿಸಿದರು.
ಘಟನೆಯಲ್ಲಿ 32 ಪೊಲೀಸರಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಅವರಲ್ಲಿ ಎಷ್ಟು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹೇಳಲಿ. ದ.ಕ. ಜಿಲ್ಲೆಯಲ್ಲಿ ಈ ಹಿಂದೆಯೂ ಇದಕ್ಕಿಂತ ದೊಡ್ಡ ಗಲಭೆಗಳಾಗಿವೆ. ಯಾವ ಪ್ರಕರಣದಲ್ಲಿ 11 ಮಂದಿಗೆ ಗುಂಡೇಟು ಹೊಡೆದ ನಿದರ್ಶನವಿದೆ ಎಂದು ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಿಶ್ವಾಸ್ದಾಸ್, ನಝೀರ್ ಬಜಾಲ್ ಮತ್ತಿತರರಿದ್ದರು.
ಪ್ರತ್ಯಕ್ಷ ಸಾಕ್ಷಿ ನಾನೇ: ಲುಕ್ಮಾನ್ ಬಂಟ್ವಾಳ
ಮಂಗಳೂರಿನಲ್ಲಿ ಗೋಲಿಬಾರ್ ನಡೆಯುವುದಕ್ಕೆ ಮೊದಲು ಮಧ್ಯಾಹ್ನ ಶಾಂತಿಯುತ ಪ್ರತಿಭಟನೆ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳ ತಿಳಿಸಿದ್ದಾರೆ.
ಅಂದು ಮಧ್ಯಾಹ್ನದ ನಮಾಝ್ ಮುಗಿಸಿ ಕಾರಿನಲ್ಲಿ ಬದ್ರಿಯಾ ಕಡೆಯಿಂದ ಸ್ಟೇಟ್ಬ್ಯಾಂಕ್ ಕಡೆಗೆ 2:30ರಿಂದ 2:40ರ ಸಮಯದಲ್ಲಿ ಬರುತ್ತಿದ್ದೆ. ಅಲ್ಲಿ ಕೇವಲ 40 ಮಂದಿ ಪ್ರತಿಭಟನಾಕಾರರು ಇದ್ದರು. ನಾನು ಕೂಡ ಅದೇ ದಾರಿಯಾಗಿ ಸಾಗುತ್ತಿದ್ದಾಗ ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿದರು. ಅಲ್ಲಿ ಕೇವಲ ಪ್ರತಿಭಟನಾಕಾರರು ಇದ್ದದ್ದಲ್ಲ, ಬಸ್ಸಿಗೆ ಕಾಯುತ್ತಿದ್ದ ಜನರು, ವಿದ್ಯಾರ್ಥಿಗಳೂ ಇದ್ದರು. ಯಾವುದೇ ಆಯುಧಗಳಿಲ್ಲದೆ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿದರು.
ಮಗುವನ್ನು ಹಿಡಿದು ಪತ್ನಿಯೊಂದಿಗೆ ಬಸ್ ಹತ್ತುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದು ಮಾತ್ರವಲ್ಲ, ಅವರ ಮೇಲೆ 307 ಕೇಸು ಕೂಡ ದಾಖಲಿಸಲಾಗಿದೆ. ಇಂಥ ಅನೇಕ ಪ್ರಕರಣಗಳ ವೀಡಿಯೊಗಳನ್ನು ಆಯೋಗಕ್ಕೆ ನೀಡಲಿದ್ದೇವೆ.
- ಲಾವಣ್ಯ ಬಲ್ಲಾಳ್, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕಿ








