ದೇಶದಲ್ಲಿ ಅಸಹನೆ, ಅಸಹಿಷ್ಣುತೆ: ಜಿ.ವಿ.ಆನಂದಮೂರ್ತಿ

ತುಮಕೂರು,ಡಿ.28: ದೇಶ ನಿರಾಶೆಯ ಕಂದರಲ್ಲಿ ಬಿದ್ದುಹೋಗಿದೆ. ಹಿಂಸೆ ವಿಜೃಂಭಿಸುತ್ತಿದೆ. ಸಾಮಾಜಿಕ ಕ್ಷೋಭೆ, ಅಸಹನೆ, ಅಸಹಿಷ್ಣುತೆ ತುಂಬಿ ತುಳುಕುತ್ತಿದೆ. ಯುವಕರು ಗುಂಪುಹತ್ಯೆ, ಹಲ್ಲೆ, ಹಿಂಸೆಯಂತಹ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಇಂತಹ ಹೊತ್ತಿನಲ್ಲಿ ಕುವೆಂಪು ವಿಧಾರಧಾರೆಗಳು ಈ ಸಮಸ್ಯೆಗಳಿಗೆ ಪರಿಹಾರಗಳಾಗಿವೆ ಎಂದು ಕಥೆಗಾರ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಜಿ.ವಿ. ಆನಂದಮೂರ್ತಿ ಅಭಿಪ್ರಾಯಪಟ್ಟರು.
ಕುವೆಂಪು ವೇದಿಕೆಯಿಂದ ತುಮಕೂರು ತಾಲೂಕು ನಾಗವಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕುವೆಂಪು ವಿಚಾರಧಾರೆ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಮತ್ತು ಯುವಜನರ ಆಲೋಚನಾಸಕ್ತಿ ಮತ್ತು ಮೆದುಗಳನ್ನು ಕೆಲವೇ ಜನರ ಗುಂಪು ಕಸಿದುಕೊಂಡಿದೆ. ಹೀಗಾಗಿ ಯುವಕರು ಕೋಮು-ಮತೀಯವಾದಿಗಳ ಕೀಲುಗೊಂಬೆಗಳಂತಾಗಿದ್ದಾರೆ. ಅಸಹನೆಯ ಬೆಂಕಿ ಹಬ್ಬಿಸುತ್ತಿದ್ದಾರೆ. ಭಾರತಕ್ಕೆ ಬೆಂಕಿ ಬಿದ್ದರೆ ನಮ್ಮನ್ನೇ ಸುಟ್ಟುಕೊಳ್ಳುತ್ತಿದ್ದೇವೆ ಎಂಬ ಪರಿಜ್ಞಾನವೇ ಇಲ್ಲದಂತಾಗಿರುವುದು ಶೋಚನೀಯ ಸಂಗತಿ ಎಂದು ಹೇಳಿದರು.
ಅನ್ಯಧರ್ಮವನ್ನು ಮುಂದಿಟ್ಟುಕೊಂಡು ಹಿಂಸೆಗೆ ಪ್ರಚೋದಿಸುವ ಕೆಲಸವಾಗುತ್ತಿದೆ. ಇಂತಹ ಹೊತ್ತಿನಲ್ಲಿ ಬುದ್ದ, ಕುವೆಂಪು ವಿಚಾರಗಳು ಯುವಕರನ್ನು ಜಾತಿ-ಧರ್ಮದ ಜ್ವಾಲೆಗಳಿಂದ ಹೊರತರಲು ಸಾಧ್ಯವಾಗುತ್ತದೆ. ಕುವೆಂಪು ವಿಚಾರ, ಸಾಹಿತ್ಯವನ್ನು ಓದುತ್ತ ಹೋದಂತೆ ನಮ್ಮಲ್ಲಿರುವ ಅಸಹನೆ, ದ್ವೇಷದ ಗುಣಗಳು ಹೋಗಿ ಮನುಷ್ಯನನ್ನು ಪ್ರೀತಿಸುವುದನ್ನು ಕಲ್ಲಿಸುತ್ತದೆ. ಕುವೆಂಪು ವಿಚಾರಗಳು, ಬುದ್ದನ ತತ್ವಗಳು, ವಿವೇಕಾನಂದ ನುಡಿಗಳು ಸಮಾಜದಲ್ಲಿ ಸಾಮರಸ್ಯವನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿವರಿಸಿದರು.
ಕುವೆಂಪು ಅವರ ಸಾಹಿತ್ಯವನ್ನು ಓದಿದಂತೆ ಅಲ್ಲಿ ಬುದ್ದ, ಅಂಬೇಡ್ಕರ್, ಗಾಂಧಿ, ವಿವೇಕಾನಂದ ಎಲ್ಲರೂ ಬಂದುಹೋಗುತ್ತಾರೆ. ಬುದ್ದನ ತತ್ವಗಳು ಕುವೆಂಪುರವರ ಅನಿಕೇನ ಪದ್ಯದಲ್ಲಿ ಮೂಡಿಬಂದಿವೆ.ಎಲ್ಲಿಯೂ ನಿಲ್ಲದಿರು ಎಂದರೆ ಮೊದಲು ಜ್ಞಾನದಾಹಿಯಬೇಕು ಎಂದು ಕುವೆಂಪು ಹೇಳುತ್ತಾರೆ. ಇಲ್ಲಿ ಗುರಿ ಮುಖ್ಯವಲ್ಲ. ನಿರಂತರ ಪಯಣ. ಹೀಗಾಗಿ ಕುವೆಂಪು ದರ್ಶನವನ್ನು ಅಂತರ್ಗತ ಮಾಡಿಕೊಂಡರರೆ ಬುದ್ದಿ ಚುರುಕಾಗುತ್ತದೆ. ನಮ್ಮ ಬುದ್ದಿಯನ್ನು ಅನ್ಯರ ಕೈಗೆ ಕೊಡದಂತೆ ನೋಡಿಕೊಳ್ಳಬೇಕು ಎಂಬುದು ಇಲ್ಲಿಯ ತತ್ವವಾಗಿದೆ ಎಂದರು.
ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವೆಂದರ ಕುವೆಂಪು. ಸರ್ವರಿಗೂ ಸಮಪಾಲ, ಸಮಬಾಳು ಎಂದರು. ಜಗತ್ತಿನ ಆದರ್ಶವೇ ಇದು. ಪ್ರಕ್ಷುಬ್ಧ ಭಾರತದಲ್ಲಿ ಇಂತಹ ಸಮಾನತೆ ಶಾಂತಿತೋಟದಂತಹ ಸಮಾಜ ನಿರ್ಮಾಣ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಒಳ್ಳೆಯ ಪುಸ್ತಕಗಳನ್ನು ಓದಬೇಕು. ಸುಳ್ಳು ಸುದ್ದಿಗಳನ್ನು ನಂಬದೆ, ಹಿಂಸೆಗೆ ಪ್ರಚೋದನೆಗೆ ಕಾರಣವಾಗಬಾರದು. ಯುವಕರು-ಯುವತಿಯರು ಸೌಹಾರ್ದಯುತವಾಗಿ ಜೀವನ ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.
ಹೆಣ್ಣುಮಕ್ಕಳು ಹೆಚ್ಚು ವಿದ್ಯಾಬ್ಯಾಸ ಮಾಡಿ ವಿಚಾರವಂತರಾದರೆ ನಮ್ಮ ಕುಟುಂಬ ಸಮಾಜ ಆರೋಗ್ಯವಾಗಿರುತ್ತದೆ. ಕೇವಲ ವಿದ್ಯಾವಂತರಾದರೆ ಸಾಲದು ವಿಚಾರವಂತರಾಗಬೇಕು.ಆಗ ಮೌಢ್ಯಕಂದಾಚಾರಗಳು, ಸಮಾಜಘಾತುಕ ಚಟುವಟಿಕೆಗಳು ಕಡಿಮೆಯಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಗವಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಸುಜಾತ ಎಸ್. ಜಂಬಗಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಮೂಡಿಸಿಕೊಳ್ಳಬೇಕು. ಹಿರಿಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕುವೆಂಪು ವೇದಿಕೆಯ ಅಧ್ಯಕ್ಷ ಜಿ.ಎಂ.ಶ್ರೀನಿವಾಸಯ್ಯ ಕುವೆಂಪು ವಿಚಾರಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.
ಜನಪರ ಚಿಂತಕ ಕೆ.ದೊರೈರಾಜ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಇಂಜಿನಿಯರ್ ರಾಮಚಂದ್ರ, ಶರತ್ ಚಂದ್ರ, ಉಪನ್ಯಾಸಕರಾದ ಬಿ.ಆರ್.ರೇಣುಕಮ್ಮ, ಸಂಗೀತ, ಚಾರುಲತ, ಹೊನ್ನಯ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಕೃಷ್ಣಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಎ.ಆರ್.ವನಿತ ಉಪನ್ಯಾಸಕ ಸುರೇಶ್ ಇತರರಿದ್ದರು.







