ಕುವೆಂಪು ವಿಶ್ವಮಾನವ ಸಂದೇಶ ಮೈಗೂಡಿಸಿಕೊಂಡಲ್ಲಿ ಶಾಂತ ಸಮಾಜ ನಿರ್ಮಾಣ ಸಾಧ್ಯ: ಡಾ.ಸುಬ್ಬರಾಯ

ಚಿಕ್ಕಮಗಳೂರು, ಡಿ.28: ರಾಷ್ಟ್ರಕವಿ ಕುವೆಂಪು ಅವರು 20ನೇ ಶತಮಾನ ಕಂಡ ವಿಶೇಷವಾದ ಕವಿ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಲಯದ ಕುಲಸಚಿವ ಡಾ.ಸಿ.ಕೆ.ಸುಬ್ರಾಯ ಹೇಳಿದರು.
ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ಶಿವಮೊಗ್ಗದ ಸಹ್ಯಾದ್ರಿ ರಂಗತರಂಗ ಹಾಗೂ ಕುವೆಂಪು ನಾಟಕೋತ್ಸವ ಸಮಿತಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಂಡಿರುವ 3 ದಿನಗಳ ಕಾಲದ ಕುವೆಂಪು ನಾಟಕೋತ್ಸವಕ್ಕೆ ಶುಕ್ರವಾರ ರಾತ್ರಿ ಚಾಲನೆ ನೀಡಿ ಮಾತನಾಡಿದ ಅವರು, ಕುವೆಂಪು ಅವರು ವಿಶೇಷವಾದ ಕವಿ, ಕಾದಂಬರಿಕಾರ, ಅವರ ಪಾಂಡಿತ್ಯವನ್ನು ಗಮನಿಸಿದರೆ ಭಗವಂತನ ಪ್ರೇರಣೆ ಅವರಿಗೆ ಇರಬೇಕೆಂದೆನಿಸುತ್ತದೆ, ಅವರ ವಿಶ್ವಮಾನವ ಸಂದೇಶವನ್ನು ಎಲ್ಲರೂ ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದರು.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ಹಾಗೂ ಲೇಖಕಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ಕುವೆಂಪು ಅವರ ಬರವಣಿಗೆಯಲ್ಲಿ ತತ್ವಾದರ್ಶಗಳಿವೆ. ಕುವೆಂಪು ಅವರ ವಿಶ್ವಮಾನವ ಸಂದೇಶ ಜನರ ಹೃದಯಲ್ಲಿ ನಿತ್ಯ ಮಂತ್ರವಾಗಬೇಕು, ಧ್ಯೇಯೋಕ್ತಿಯಾಗಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕುವೆಂಪು ಅವರ ಮನೆಗೆ ವರ್ಷಕ್ಕೆ 1.5 ಲಕ್ಷ ಜನ ಭೇಟಿ ನೀಡುತ್ತಾರೆ. ಈಗ ಅದು ಸಾಂಸ್ಕøತಿಕ ಕೇಂದ್ರವಾಗಿ ಬೆಳೆದಿದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನು 5 ಲಕ್ಷ ರೂ. ನಗದಿನೊಂದಿಗೆ ನೀಡುತ್ತಿದ್ದು, ಈ ವರ್ಷ ಪಂಜಾಬಿನ ಇಬ್ಬರು ಕವಿಗಳು ಇದನ್ನು ಪಡೆಯಲಿದ್ದಾರೆ. ಬೆಂಗಳೂರಿನ ಬಿಎಂಟಿಸಿ ಸಂಸ್ಥೆ ಕುವೆಂಪು ಪ್ರತಿಷ್ಠಾನಕ್ಕೆ 25 ಲಕ್ಷ ರೂ. ನೀಡಿದ್ದು, ಅದರ ಬಡ್ಡಿ ಹಣದಲ್ಲಿ ಕುವೆಂಪು ನಾಟಕೋತ್ಸವವನ್ನು ಎಲ್ಲೆಡೆ ನಡೆಸಲಾಗುತ್ತಿದೆ ಎಂದರು.
ಕುವೆಂಪು ನಾಟಕೋತ್ಸವ ಸಮಿತಿಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ನಾಟಕ ಅಕಾಡಮಿ ಸದಸ್ಯ ನಾಗರಾಜರಾವ್ ಕಲ್ಕಟ್ಟೆ, ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಸಹ್ಯಾದ್ರಿ ರಂಗತರಂಗದ ಗೌರವಾಧ್ಯಕ್ಷ ಕ್ರಾಂತೇಶ ಕದರ ಮಂಡಲಗಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಉಪಸ್ಥಿತರಿದ್ದರು. ರಾಷ್ಟ್ರಕವಿ ಕುವೆಂಪು ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ಸಮಾರಂಭದ ನಂತರ ಮೈಸೂರಿನ ರಂಗಾಯಣ ಕಲಾವಿದರಿಂದ ಕುವೆಂಪು ವಿರಚಿತ ಶೂದ್ರ ತಪಸ್ವಿ ನಾಟಕ ನಡೆಯಿತು.







