ಪೇಜಾವರ ಸ್ವಾಮೀಜಿ ನಿಧನಕ್ಕೆ ಕಂದಾಯ ಸಚಿವ ಆರ್.ಅಶೋಕ್ ಸಂತಾಪ
![ಪೇಜಾವರ ಸ್ವಾಮೀಜಿ ನಿಧನಕ್ಕೆ ಕಂದಾಯ ಸಚಿವ ಆರ್.ಅಶೋಕ್ ಸಂತಾಪ ಪೇಜಾವರ ಸ್ವಾಮೀಜಿ ನಿಧನಕ್ಕೆ ಕಂದಾಯ ಸಚಿವ ಆರ್.ಅಶೋಕ್ ಸಂತಾಪ](https://www.varthabharati.in/sites/default/files/images/articles/2019/12/29/225620-1577606176.jpg)
ಉಡುಪಿ : ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ನಿಧನಕ್ಕೆ ಕಂದಾಯ ಸಚಿವ ಆರ್.ಅಶೋಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಶ್ರೀಗಳ ನಿಧನದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಸಮಸ್ತ ಭಕ್ತರಿಗೆ ದು:ಖ ಭರಿಸುವ ಶಕ್ತಿಯನ್ನು ನೀಡುವಂತಾಗಲಿ’ ಎಂದು ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
‘ಉಡುಪಿ ಅಷ್ಟಮಠದ ಪೇಜಾವರ ಶ್ರೀಗಳು ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಡೀ ಜೀವನವನ್ನು ಲೋಕಕಲ್ಯಾಣಕ್ಕಾಗಿ, ದೀನದಲಿತರ ಕಲ್ಯಾಣಕ್ಕಾಗಿ ಮುಡುಪಾಗಿಟ್ಟಿದ್ದರು. ಶಾಂತಿ ಮತ್ತು ಪ್ರೀತಿ ಅವರ ಮಂತ್ರವಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಶ್ರೀಗಳ ಕನಸಾಗಿತ್ತು. ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದ ಶ್ರೀಗಳ ನಿಧನದಿಂದ ನಾಡಿಗೆ ಅಷ್ಟೇ ಅಲ್ಲದೆ, ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ.’ ಎಂದು ಆರ್.ಅಶೋಕ್ ಹೇಳಿದ್ದಾರೆ.
Next Story