'ಪಾಪ್ಯುಲರ್ ಫ್ರಂಟ್ ನಿಷೇಧ'ವೆಂಬ ಬಿಜೆಪಿಯ ಹತಾಶೆಯ ಪ್ರಯತ್ನ: ಮುಹಮ್ಮದ್ ಶಾಕಿಬ್
![ಪಾಪ್ಯುಲರ್ ಫ್ರಂಟ್ ನಿಷೇಧವೆಂಬ ಬಿಜೆಪಿಯ ಹತಾಶೆಯ ಪ್ರಯತ್ನ: ಮುಹಮ್ಮದ್ ಶಾಕಿಬ್ ಪಾಪ್ಯುಲರ್ ಫ್ರಂಟ್ ನಿಷೇಧವೆಂಬ ಬಿಜೆಪಿಯ ಹತಾಶೆಯ ಪ್ರಯತ್ನ: ಮುಹಮ್ಮದ್ ಶಾಕಿಬ್](https://www.varthabharati.in/sites/default/files/images/articles/2019/12/29/225627-1577611430.jpg)
ಬೆಂಗಳೂರು : ದೇಶಾದ್ಯಂತ ಬಿಜೆಪಿಯ ಸಂವಿಧಾನ ವಿರೋಧಿ ಆಡಳಿತ ವೈಖರಿಯಿಂದ ಜನರು ಆಕ್ರೋಶಗೊಂಡಿದ್ದು ನಿರಂತರವಾಗಿದ್ದ ಪ್ರತಿಭಟನೆಗಳು ಭಾರೀ ಜನಾಂದೋಲನವಾಗಿ ದೇಶಾದ್ಯಂತ ವ್ಯಾಪಿಸಿರುವುದರಿಂದ ಕಂಗೆಟ್ಟಿರುವ ಬಿಜೆಪಿ ಸರಕಾರವು ಪಾಪ್ಯುಲರ್ ಫ್ರಂಟ್ ಸಂಘಟನೆಯ ಮೇಲೆ ಸೇಡು ತೀರಿಸಿಕೊಳ್ಳುವ ದ್ವೇಷ ರಾಜಕಾರಣ ನಡೆಸುತ್ತಿದೆ ಎಂದು ಪಿಎಫ್ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಆರೋಪಿಸಿದ್ದಾರೆ.
ದೇಶದ ಆರ್ಥಿಕತೆಯ ಅಧಃಪತನ ಮತ್ತು ಸಂವಿಧಾನ ವಿರೋಧಿಯಾಗಿರುವ ಪೌರತ್ವ ಕಾಯ್ದೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತವು ಟೀಕೆಕೆ ಒಳಗಾಗಿದ್ದು ಪ್ರಜಾಪ್ರಭುತ್ವದ ಉಳಿವಿಗಾಗಿ ದೇಶದ ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಫ್ಯಾಷಿಷ್ಟ್ ಬಿಜೆಪಿಗೆ ಅನಿರೀಕ್ಷಿತ ಪ್ರತಿರೋಧವಾಗಿದೆ. ಜನಾಂದೋಲನವು ತನ್ನಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅದನ್ನು ಕುಗ್ಗಿಸುವುದಕ್ಕಾಗಿ ಬಿಜೆಪಿ ಸರಕಾರವು ಪಿಎಫ್ಐ ನಂತಹ ಸಾಮಾಜಿಕ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾಪ ನಡೆಸುತ್ತಿದೆ. ಇದು ದೇಶವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ ಜನರ ದೃಷ್ಟಿಯನ್ನು ಬೇರೆಡೆಗೆ ತಿರುಗಿಸುವ ಬಿಜೆಪಿಯು ಹಿಂದಿನಿಂದಲೂ ನಡೆಸುತ್ತಾ ಬಂದಿರುವ ಷಡ್ಯಂತ್ರದ ಭಾಗವಾಗಿದೆ ಎಂದು ಶಾಕಿಬ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಂವಿಧಾನಿಕ ಹಕ್ಕುಗಳಿಗಾಗಿ ಪ್ರತಿಭಟನಾ ನಿರತ ಜನಸಾಮಾನ್ಯರ ಮೇಲೆ ಬಿಜೆಪಿ ಸರಕಾರವು ಪೊಲೀಸ್ ಇಲಾಖೆಯನ್ನು ಛೂ ಬಿಟ್ಟಿದ್ದು ದೇಶಾದ್ಯಂತ 20ಕ್ಕೂ ಹೆಚ್ಚು ಮಂದಿ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ನೂರಾರು ಮಂದಿ ಮಾರಣಾಂತಿಕವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರ್ನಾಟಕದಲ್ಲೂ ಇಬ್ಬರು ಮುಸ್ಲಿಮ್ ಯುವಕರನ್ನು ಪೊಲೀಸರು ಗೋಲಿಬಾರ್ ಮೂಲಕ ಹತ್ಯೆಗೈದಿದ್ದಾರೆ. ಸಂತ್ರಸ್ತ ಸಮುದಾಯಕ್ಕೆ ನ್ಯಾಯ ಒದಗಿಸದೆ, ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಸಮಾಲೋಚನೆ ನಡೆಸದೆ ಕೇವಲ ಸಂಘಟನೆಯ ಮೇಲೆ ಬಿಜೆಪಿಯ ಜನಪ್ರತಿನಿಧಿಗಳು ಆರೋಪ ಹೊರಿಸುವುದರಲ್ಲೇ ಮಗ್ನವಾ ಗಿರುವುದು ಬೇಜವಾಬ್ದಾರಿಯ ಪರಮಾವಧಿಯಾಗಿದೆ. ಸರಕಾರವು ತನ್ನ ವೈಫಲ್ಯವನ್ನು ಮುಚ್ಚಿಹಾಕುವುದಕ್ಕಾಗಿ ಇಡೀ ಸರಕಾರಿ ಯಂತ್ರವನ್ನು ದುರುಪಯೋಗಪಡಿಸುತ್ತಿರುವುದು ಖಂಡನೀಯ. ಮಂಗಳೂರು ಘಟನೆಯ ತನಿಖೆಯನ್ನು ಸಿಐಡಿಗೆ ಒಪ್ಪಿಸಿರುವುದು ಪೂರ್ವಯೋಜಿತ ಷಡ್ಯಂತ್ರವಾಗಿದೆ. ಸರಕಾರದ ಹಿತಾಸಕ್ತಿಯ ಮೇರೆಗೆ ಸಿಐಡಿ ತನಿಖಾ ವರದಿ ಹೊರಬರುವುದು ಈವರೆಗಿನ ಸಂಪ್ರದಾಯದಂತಿದೆ. ಆದ್ದರಿಂದ ಮಂಗಳೂರು ಘಟನೆಯ ಸತ್ಯಾಸತ್ಯತೆ ಬಹಿರಂಗಗೊಂಡು ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕಾದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ. ಪೊಲೀಸ್ ಕ್ರೌರ್ಯದ ತನಿಖೆಯನ್ನು ಅದೇ ಇಲಾಖೆಯ ಇನ್ನೊಂದು ತಂಡದಿಂದ ತನಿಖೆ ನಡೆಸಿದರೆ ಖಂಡಿತವಾಗಿಯೂ ನ್ಯಾಯ ನಿರೀಕ್ಷಿಸಲಾಗದು. ಸಿಐಡಿ ಪೊಲೀಸರಿಂದ ತನಿಖೆ ಎಂಬುದು ಸರಕಾರದ ಕಾಟಾಚಾರದ ಕ್ರಮ ಆಗಿರುತ್ತದೆ. ಪ್ರಭುತ್ವದ ದೌರ್ಜನ್ಯದ ವಿರುದ್ಧ ಜನರು ಸ್ವಯಂಪ್ರೇರಿತರಾಗಿ ಜನಾಂದೋಲನಕ್ಕೆ ಇಳಿದಿರುವುದು ಜಾತ್ಯತೀತ ಭಾರತಕ್ಕೆ ಶುಭನಿರೀಕ್ಷೆಯಾಗಿದೆ ಎಂದು ಮುಹಮ್ಮದ್ ಶಾಕಿಬ್ ಆಶಾವಾದ ವ್ಯಕ್ತಪಡಿಸಿದ್ದಾರೆ.