‘ಅಮು’ ಕ್ಯಾಂಪಸ್ನಲ್ಲಿ ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆ ಮುಂದುವರಿಸಲಿರುವ ವಿದ್ಯಾರ್ಥಿಗಳು
ಅಲಿಗಡ (ಉ.ಪ್ರ),ಡಿ.29: ಸಿಎಎ ವಿರುದ್ಧ ಪ್ರತಿಭಟನೆಯನ್ನು ಕ್ಯಾಂಪಸ್ನಲ್ಲಿ ಶಾಂತಿಯುತವಾಗಿ ಮುಂದುವರಿಸುವುದಾಗಿ ಅಲಿಗಡ ಮುಸ್ಲಿಮ್ ವಿವಿ (ಅಮು)ಯ ವಿದ್ಯಾರ್ಥಿಗಳು ರವಿವಾರ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಸೋಮವಾರದಿಂದ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಬಾಬ್-ಎ-ಸೈಯದ್ ಗೇಟ್ ಬಳಿ ಧರಣಿ ನಡೆಸಲಿದ್ದಾರೆ ಎಂದು ಸಮನ್ವಯ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.
ತನ್ಮಧ್ಯೆ,ವಿದ್ಯಾರ್ಥಿಗಳಲ್ಲದ,ಆದರೂ ಪ್ರತಿಭಟನೆಯಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಅಲಿಗಡ ಪೊಲೀಸರು ವಿವಿಗೆ ಸೂಚಿಸಿದ್ದಾರೆ. ಹಿಂಸಾಚಾರಕ್ಕೆ ಕಾರಣವಾಗಿದ್ದ ಡಿ.15ರ ‘ಪ್ರತಿಭಟನೆಯ ರೂವಾರಿ’ ಗಳಾಗಿದ್ದ ಈ ವ್ಯಕ್ತಿಗಳು ಕ್ಯಾಂಪಸ್ ಪ್ರವೇಶಿಸಲು ಅವಕಾಶ ನೀಡಬಾರದು ಎಂದೂ ಪೊಲೀಸರು ವಿವಿ ಆಡಳಿತಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಚಳಿಗಾಲದ ರಜೆಯ ಬಳಿಕ ಜ.6ರಂದು ವಿವಿ ಪುನರಾರಂಭಗೊಳ್ಳಲಿದೆ.
ಹಿಂಸಾತ್ಮಕ ಪ್ರತಿಭಟನೆಗಾಗಿ 1000 ಅಪರಿಚಿತ ಅಮು ವಿದ್ಯಾರ್ಥಿಗಳ ವಿರುದ್ಧ ಡಿ.23ರಂದು ಎಫ್ಐಆರ್ ದಾಖಲಿಸಿರುವ ಕ್ಷಿಪ್ರ ಕ್ರಿಯಾ ಪಡೆ (ಆರ್ಎಎಫ್)ಯ ವಿಳಂಬಿತ ನಿರ್ಧಾರದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಅಮು ಶಿಕ್ಷಕರ ಸಂಘವು,ಇದು ದುರುದ್ದೇಶದ ಮತ್ತು ಪ್ರೇರಿತ ಕ್ರಮವಾಗಿದೆ ಹಾಗೂ ಅಲಿಗಡ ಎಸ್ಎಸ್ಪಿ ಆಕಾಶ ಕುಲಹರಿ ಅವರ ವಿಶ್ವಾಸ ನಿರ್ಮಾಣ ಪ್ರಯತ್ನಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದು ಎಫ್ಐಆರ್ನ ಉದ್ದೇಶವಲ್ಲ. ಯಾವುದೇ ಸಿಬ್ಬಂದಿ ಗಾಯಗೊಂಡಾಗ ಮತ್ತು ಗುಂಡು ಬಳಕೆಯಾದಾಗ ಸಂಬಂಧಿತ ಪೊಲೀಸ್ ಠಾಣೆಯಲ್ಲಿ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಆರ್ಎಎಫ್ ಕಮಾಂಡಂಟ್ ಪಿ.ಕೆ.ಕುಲ್ಧರ್ ಸುದ್ದಿಗಾರರಿಗೆ ತಿಳಿಸಿದರು.
ಸಂಬಂಧಿತ ಬೆಳವಣಿಗೆಯೊಂದರಲ್ಲಿ,ಕಳೆದ ವಾರ ಕ್ಯಾಂಪಸ್ಗೆ ತೆರಳಿದ್ದ ಸತ್ಯಶೋಧನಾ ಸಮಿತಿಯ ಸದಸ್ಯರಾದ ಹರ್ಷ ಮಂದರ್ ಮತ್ತು 13 ಕಾರ್ಯಕರ್ತರನ್ನು ಭೇಟಿಯಾಗಲು ಕುಲಪತಿ ತಾರಿಕ್ ಮನ್ಸೂರ್ ಅವರು ನಿರಾಕರಿಸಿದ್ದರು ಎಂಬ ವರದಿಯನ್ನು ರವಿವಾರ ತಿರಸ್ಕರಿಸಿರುವ ಅಮು ವಕ್ತಾರ ಉಮರ್ ಪೀರ್ ಝಾದಾ ಅವರು, ಮಂದರ್ ಭೇಟಿಯ ಬಗ್ಗೆ ಪೂರ್ವಮಾಹಿತಿ ಇರಲಿಲ್ಲ ಎಂದು ತಿಳಿಸಿದ್ದಾರೆ.
ಅಂದು ಕುಲಪತಿಗಳು ದಿಲ್ಲಿಯಲ್ಲಿದ್ದರು ಮತ್ತು ಮಂದರ್ ಅವರು ಕುಲಸಚಿವ,ನಿಯಂತ್ರಕರು ಹಾಗೂ ಶಿಸ್ತುಪಾಲನಾ ಅಧಿಕಾರಿಗಳನ್ನು ಭೇಟಿಯಾಗಿದ್ದರು ಎಂದ ಅವರು,ಕುಲಪತಿಗಳು ಉದ್ದೇಶಪೂರ್ವಕವಾಗಿ ಮಂದರ್ ಅವರನ್ನು ಭೇಟಿಯಾಗಿರಲಿಲ್ಲ ಎನ್ನುವುದು ನಿಜವಲ್ಲ ಎಂದರು.