ಪಟ್ಟಣ ವ್ಯಾಪಾರ ಸಮಿತಿಗೆ ಸಿಐಟಿಯು ಬೆಂಬಲಿತರ ಅವಿರೋಧ ಆಯ್ಕೆ
![ಪಟ್ಟಣ ವ್ಯಾಪಾರ ಸಮಿತಿಗೆ ಸಿಐಟಿಯು ಬೆಂಬಲಿತರ ಅವಿರೋಧ ಆಯ್ಕೆ ಪಟ್ಟಣ ವ್ಯಾಪಾರ ಸಮಿತಿಗೆ ಸಿಐಟಿಯು ಬೆಂಬಲಿತರ ಅವಿರೋಧ ಆಯ್ಕೆ](https://www.varthabharati.in/sites/default/files/images/articles/2019/12/29/225685-1577638967.jpg)
ಮಂಗಳೂರು, ಡಿ.29: ಮಂಗಳೂರು ಮಹಾನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಿಐಟಿಯು ಬೆಂಬಲಿತ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರತಿನಿಧಿಗಳ ಗುಂಪು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
10 ಸ್ಥಾನಗಳಿಗಾಗಿ ನಡೆಯಬೇಕಿದ್ದ ಪಟ್ಟಣ ವ್ಯಾಪಾರ ಸಮಿತಿಯ ಮೊದಲ ಚುನಾವಣೆಗೆ ಸಿಐಟಿಯು ಬೆಂಬಲಿತ 10 ಅಭ್ಯರ್ಥಿಗಳ ಹೊರತು ಬೇರೆ ಯಾರೂ ಸ್ಪರ್ಧೆ ಮಾಡದೆ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದು, ಮುಂದಿನ ಐದು ವರ್ಷಗಳ ಅವಧಿವರೆಗೆ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರಾಗಿರುತ್ತಾರೆ.
ಮನಪಾ ಆಯುಕ್ತರ ಕೊಠಡಿಯಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಚುನಾಯಿತ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಿದರು. ಉಪ ಆಯುಕ್ತ ಮತ್ತು ಪಟ್ಟಣ ವ್ಯಾಪಾರ ಸಮಿತಿಯ ಅಧ್ಯಕ್ಷರೂ ಆಗಿರುವ ಸಂತೋಷ್ ಕುಮಾರ್ ಮತ್ತು ಬಡತನ ನಿರ್ಮೂಲನ ಕೋಶದ ಸಂಯೋಜನಾಧಿಕಾರಿ ಚಿತ್ತರಂಜನ್, ಅಚ್ಯುತ ಹಾಗೂ ದ.ಕ. ಜಿಲ್ಲಾ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸಂಘದ ಅಧ್ಯಕ್ಷ ಮುಹಮದ್ ಮುಸ್ತಫಾ, ಉಮೇಶ್ ಪೂಜಾರಿ ಉಪಸ್ಥಿತರಿದ್ದರು.