ರಾಷ್ಟ್ರಕವಿ ಕುವೆಂಪು ದಿನಾಚರಣೆ ನಿರ್ಲಕ್ಷ್ಯ ಆರೋಪ: ಸಂಘಟನೆಗಳಿಂದ ಅಧಿಕಾರಿಗಳಿಗೆ ತರಾಟೆ
ಹನೂರು, ಡಿ.29: ರವಿವಾರದ ರಜೆಯ ಗುಂಗಿನಲ್ಲಿದ್ದ ಪಟ್ಟಣದ ಕೆಲವು ಸರಕಾರಿ ಕಚೇರಿಯ ಅಧಿಕಾರಿಗಳನ್ನು ರಾಷ್ಟ್ರಕವಿ ಕುವೆಂಪು ದಿನಾಚರಣೆಯನ್ನು ಮಾಡಲಿಲ್ಲ ಏಕೆ ಎಂದು ಕೆಲ ಸಂಘಟನೆಗಳು ಪೋನ್ ಮುಖಾಂತರ ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳು ಮಧ್ಯಾಹ್ನದ ವೇಳೆ ಕಚೇರಿಗೆ ಆಗಮಿಸಿ ಆಚರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹನೂರಿನ ಹಲವು ಶಾಲೆಗಳು, ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲಧಿಕಾರಿಗಳ ಕಚೇರಿ, ಉಪನೋಂದಣಾಧಿಕಾರಿಗಳ ಕಚೇರಿ, ಪೋಲಿಸ್ ಠಾಣೆ, ಆಗ್ನಿಶಾಮಕ ಠಾಣೆ, ಅರಣ್ಯ ಇಲಾಖೆ,ಕೃಷಿ ಇಲಾಖೆ, ಪ್ರಥಮ ದರ್ಜೆ ಕಾಲೇಜು, ಚೆಸ್ಕಾಂ ಕಚೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿಶ್ವಮಾನವ ಸಂದೇಶ ಸಾರಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಯ ದಿನಾಚರಣೆಯನ್ನು ಆಚರಣೆ ಮಾಡಲು ಮರೆತಿರುವುದಕ್ಕೆ ಪಟ್ಟಣದ ಕೆಲ ಸಂಘಟನೆಗಳು ಮತ್ತು ಪ್ರಜ್ಞಾವಂತ ಯುವಕರು ಆಯಾ ಇಲಾಖೆಯ ಅಧಿಕಾರಿಗಳಿಗೆ ದೂರಾವಾಣಿ ಮುಖಾಂತರ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.
ಮುಂದಿನ ದಿನಗಳಲ್ಲಿ ಯಾವುದೇ ಗಣ್ಯರ ದಿನಾಚರಣೆಯನ್ನು ಮಾಡಲು ನಿರ್ಲಕ್ಷ್ಯ ಮಾಡಿದರೆ ಆಯಾ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ತಹಶೀಲ್ದಾರ್ ಸ್ಪಂದನೆ: ಹನೂರು ಪಟ್ಟಣದ ತಹಶೀಲ್ದಾರ್, ಕಚೇರಿಯ ಅಧಿಕಾರಿ ವೃಂದ ಮಧ್ಯಾಹ್ನ 1ಗಂಟೆಗೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಿದರು.
ಈ ವೇಳೆ ರೈತ ಮುಖಂಡರಾದ ಸಿದ್ದೇಗೌಡ, ಲಿಂಗರಾಜು, ನಟರಾಜು, ರಾಜಶ್ವನಿರೀಕ್ಷಕ ಮಾದೇಶ್, ಗ್ರಾಮ ಲೆಕ್ಕಾಧಿಕಾರಿ ಹೊಂಬಾಳೆಗೌಡ, ಶೇಷಣ್ಣ, ಕಚೇರಿ ಸಿಬ್ಬಂದಿ ರಾಜು, ನಂದಾ ಸೇರಿದಂತೆ ಹಲವರು ಹಾಜರಿದ್ದರು.