ದಟ್ಟ ಮಂಜಿನಿಂದಾಗಿ ನಾಲೆಗೆ ಬಿದ್ದ ಕಾರು: ಇಬ್ಬರು ಮಕ್ಕಳ ಸಹಿತ ಆರು ಮಂದಿ ಮೃತ್ಯು
ಐವರಿಗೆ ತೀವ್ರ ಗಾಯ
ನೋಯ್ಡಾ: ದಟ್ಟ ಮಂಜಿನಿಂದಾಗಿ ರಸ್ತೆಯಿಂದ ಜಾರಿದ ಕಾರು ಪಕ್ಕದ ನಾಲೆಗೆ ಬಿದ್ದ ಪರಿಣಾಮವಾಗಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಿಂದ ವರದಿಯಾಗಿದೆ.
ಭಾನುವಾರ ರಾತ್ರಿ 11.30ರ ವೇಳೆಗೆ ಈ ಘಟನೆ ನಡೆದಿದ್ದು, ವಾಹನದಲ್ಲಿದ್ದ ಇತರ ಐದು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮಾರುತಿ ಎರ್ಟಿಗಾ ವಾಹನದಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು. ದನ್ಕೌರ್ ಪ್ರದೇಶದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಖೆರ್ಲಿ ನಾಲೆಗೆ ಉರುಳಿದಾಗ ಕಾರಿನಲ್ಲಿದ್ದವರು ತೀವ್ರ ಗಾಯಗೊಂಡರು. 11 ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಐದು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ದಟ್ಟಮಂಜಿನಿಂದಾಗಿ ದೃಶ್ಯತೆ ಪ್ರಮಾಣ ಅತ್ಯಲ್ಪವಾಗಿದ್ದುದೇ ದುರಂತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಇದರ ಜತೆಗೆ ಇದೇ ತಂಡದ ಮತ್ತೊಂದು ಕಾರು ಕೂಡಾ ಇತ್ತು ಎನ್ನಲಾಗಿದ್ದು, ಕಾರಿನಲ್ಲಿದ್ದ ಎಲ್ಲರೂ ಸಂಭಾಲ್ ಜಿಲ್ಲೆಯ ನಿವಾಸಿಗಳಾಗಿದ್ದು, ದೆಹಲಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮಹೇಶ್ (35), ಕೃಷ್ಣಲಾಲ್ (50), ನೀರೇಶ್ (17), ರಾಮ್ ಖಿಲಾಡಿ (75), ಮಲ್ಲು (12) ಮತ್ತು ನೇತ್ರಪಾಲ್ (40) ಮೃತಪಟ್ಟಿದ್ದಾರೆ.