ಬ್ಯಾರಿ ಭಾಷೆಗೆ ಸಿಗದ ಸ್ಥಾನಮಾನ : ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಪರಿಷ್ಕರಿಸಿ ನಮೂದಿಸಲು ಆಗ್ರಹ
ಮಂಗಳೂರು, ಡಿ.30: ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಬ್ಯಾರಿ ಭಾಷೆಯನ್ನು ಪರಿಷ್ಕರಿಸಿ ನಮೂದಿಸಲು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ದ.ಕ.ಜಿಲ್ಲಾಧಿಕಾರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕರಾವಳಿ ಕರ್ನಾಟಕದ ಪ್ರಮುಖ ಜನಾಂಗವಾಗಿರುವ ಬ್ಯಾರಿ ಜನಾಂಗದ ಮಾತೃಭಾಷೆ ಬ್ಯಾರಿ. ಈ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಬ್ಯಾರಿ ಸಾಹಿತ್ಯ ಅಕಾಡಮಿಯನ್ನು 2007ರಲ್ಲೇ ಸ್ಥಾಪಿಸಿದೆ.
ಕಳೆದ 12 ವರ್ಷಗಳಲ್ಲಿ ಅಕಾಡಮಿಯು ಕರಾವಳಿ ಕರ್ನಾಟಕ ಮಾತೃವಲ್ಲದೆ ರಾಜ್ಯದ ವಿವಿಧ ಕಡೆ ಹಾಗೂ ಹೊರ ರಾಜ್ಯಗಳಲ್ಲಿ ರುವ ಬ್ಯಾರಿ ಸಮುದಾಯದ ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜಾನಪದ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ವಿಶ್ವದಾದ್ಯಂತ ಇರುವ 30 ಲಕ್ಷ ಬ್ಯಾರಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಪ್ರಮುಖವಾಗಿ ದ.ಕ. ಜಿಲ್ಲೆಯಲ್ಲಿ ಸುಮಾರು 12 ಲಕ್ಷ, ಉಡುಪಿ ಜಿಲ್ಲೆಯಲ್ಲಿ ಸುಮಾರು 8 ಲಕ್ಷ, ಚಿಕ್ಕಮಗಳೂರು ಜಿಲ್ಲೆಯಲ್ಲಿ 4 ಲಕ್ಷ, ಮಡಿಕೇರಿಯಲ್ಲಿ 1.5 ಲಕ್ಷ, ಶಿವಮೊಗ್ಗ ಜಿಲ್ಲೆಯಲ್ಲಿ 1.5 ಲಕ್ಷ, ಉತ್ತರ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ ಬ್ಯಾರಿ ಭಾಷೆ ಮಾತನಾಡುವ ಜನರಿದ್ದಾರೆ. ಇಷ್ಟೆಲ್ಲಾ ಪ್ರಮುಖ ಅಂಶಗಳಿದ್ದರೂ ಕೂಡ ಈಗಾಗಲೇ ಬಿಡುಗಡೆಯಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಬ್ಯಾರಿ ಭಾಷೆಯನ್ನು ನಮೂದಿಸಿಲ್ಲ. ಈಗಾಗಲೇ ಬ್ಯಾರಿ ಭಾಷೆ ಮುಂದಿನ ಶೈಕ್ಷಣಿಕ ವರ್ಷದಿಂದ ಆರನೇ ತರಗತಿಯಿಂದ ಪಿಯುಸಿ ತನಕ ತೃತೀಯ ಭಾಷೆಯಾಗಿ ಬ್ಯಾರಿ ಭಾಷೆಯನ್ನು ಅನುಮೋದಿಸಲು ಸರಕಾರದಿಂದ ಮಾನ್ಯತೆ ಸಿಕ್ಕ್ತಿದೆ ಮತ್ತು 2019-20ನೇ ಸಾಲಿನಲ್ಲಿ ಬ್ಯಾರಿ ಅಕಾಡಮಿಗೆ ನೂತನ ಕಟ್ಟ ಬ್ಯಾರಿ ಭವನ ನಿರ್ಮಾಣಕ್ಕೆ 6 ಕೋ.ರೂ.ನ ಮಂಜೂರಾತಿ ಸಿಕ್ಕಿದೆ. ಇಷ್ಷೆಲ್ಲಾ ಇದ್ದರೂ ಬ್ಯಾರಿ ಭಾಷೆಯನ್ನು ಜನಗಣತಿ ನೋಂದಣಿಯಲ್ಲಿ ನಮೂದಿಸದಿರುವುದು ಖೇದಕರ. ಇದಕ್ಕಿಂತ ಕಡಿಮೆ ಭಾಷೆ ಮಾತನಾಡುವ ಅರೆಭಾಷೆ ಹಾಗೂ ಕೊಡವ ಭಾಷೆಯು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿರು ತ್ತದೆ ಎಂದು ರಹೀಂ ಉಚ್ಚಿಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಾಸರಗೋಡಿನ ಚಂದ್ರಗಿರಿಯಿಂದ ಉಡುಪಿ ಜಿಲ್ಲೆಯ ಬಾರ್ಕೂರು ತನಕದ ಈ ವ್ಯಾಪ್ತಿಯು ಬ್ಯಾರಿ ಭಾಷೆಯ ಉಗಮ ಸ್ಥಾನವಾಗಿದೆ. ಈ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಲಾಗಿದೆ. ತಾವುಗಳು ಸಂಬಂಧಪಟ್ಟ ಇಲಾಖೆಗೆ ಈ ಕುರಿತು ಮಾಹಿತಿಯನ್ನು ನೀಡಿ ಬ್ಯಾರಿ ಭಾಷೆಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಪರಿಷ್ಕರಿಸಿ ನಮೂದಿಸಲು ಬೇಕಾಗುವ ಎಲ್ಲಾ ಸೂಕ್ತ ಕ್ರಮಕೈಗೊಳ್ಳುವಂತೆ ರಹೀಂ ಉಚ್ಚಿಲ್ ಒತ್ತಾಯಿಸಿದ್ದಾರೆ.