‘ಪೇಜಾವರಶ್ರೀಗಳ ಆದರ್ಶ ಪಾಲಿಸುವುದೇ ದೊಡ್ಡ ಶೃದ್ಧಾಂಜಲಿ’

ಉಡುಪಿ, ಡಿ.30: ಪೇಜಾವರಶ್ರೀಗಳು ಇಂದು ನಮ್ಮ ಕಣ್ಣ ಮುಂದೆ ಇರದಿರಬಹುದು, ಆದರೇ ಅವರ ಆದರ್ಶಗಳು ನಮ್ಮೊಂದಿಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿ ಪಾಲಿಸುವುದೇ ನಾವು ಅವರಿಗೆ ನೀಡಬಹುದಾದ ಅತಿ ದೊಡ್ಡ ಶೃದ್ಧಾಂಜಲಿ ಎಂದು ಹಿರಿಯ ವೈದ್ಯ,ಉಡುಪಿ ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್ ಹೇಳಿದ್ದಾರೆ.
ರವಿವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ತುಳುಕೂಟದ ವತಿಯಿಂದ ನಡೆದ ಶೃದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಪೇಜಾವರಶ್ರೀಗಳು, ಬಹುಶಃ ದಲಿತರಿಗೂ ದೇವರಿಗೆ ಭಕ್ತಿ ತೋರಿಸುವ ಅಧಿಕಾರ ಇದೆ ಎಂದು ತೋರಿಸಿದ ಪ್ರಥಮ ಮಠಾಧಿಪತಿ ಇವರಾಗಿದ್ದಾರೆ. ಅವರಿಗೆ ಮಠದ ಅನೇಕ ಕಟ್ಟುಪಾಡುಗಳಿದ್ದವು. ಆದರೂ ಅವರು ದಲಿತರ ಕಲ್ಯಾಣಕ್ಕೆ ಶ್ರಮಿಸಿ ಜಯಿಸಿದವರು ಎಂದ ಡಾ.ಕುಮಾರ್, ತಾನು ವೈದ್ಯನಾಗಿ ದ್ದಾಗ, ಪೇಜಾವರಶ್ರೀಗಳು ಯಾವ ಜಾತಿ ಧರ್ಮದವರೇ ಇರಲಿ ಅವರಿಗೆ ಸಮಾನತೆಯಿಂದ ಚಿಕಿತ್ಸೆ ನೀಡಿ ಎಂದು ಹೇಳಿದ್ದನ್ನು ನೆನಪಿಸಿಕೊಂಡರು.
ತುಳುಕೂಟದ ಸಲಹೆಗಾರರಾದ ಮುರಳೀಧರ ಉಪಾಧ್ಯಾಯ ಹಿರಿಯಡ್ಕ ಮಾತನಾಡಿ, ಗಾಂಧಿವಾದಿಗಳಾಗಿದ್ದ ಪೇಜಾವರಶ್ರೀ ಗಳು, ರಾತ್ರಿ ಹಗಲಾಗು ವುದರೊಳಗೆ ಸಮಾಜವನ್ನು ತಿದ್ದುವುದು ಸಾಧ್ಯವಿಲ್ಲ, ಅದರೇ ಸಣ್ಣಸಣ್ಣ ಪ್ರಯತ್ನಗಳನ್ನು ಮಾಡುವು ದನ್ನು ನಿಲ್ಲಿಸುವುದಿಲ್ಲ ಎಂದಿದ್ದರು ಎಂದು ಹೇಳಿದರು.
ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಅವರು, ಪೇಜಾವರ ಶ್ರೀಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ಸೌಹಾರ್ದದ ರಾಯಭಾರಿ ಯಾಗಿದ್ದರು. ನಿಜವಾದ ಅರ್ಥದಲ್ಲಿ ವಿಶ್ವಮಾನವರಾಗಿದ್ದರು ಎಂದು ಗುಣಗಾನ ಮಾಡಿದರು. ವೇದಿಕೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ತಾರಾ ಉಮೇಶ್ ಆಚಾರ್ಯ, ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಎಂ.ಚೈತನ್ಯ, ಪದಾಧಿಕಾರಿಗಳಾದ ಪ್ರಭಾಕರ ಭಂಡಾರಿ, ಯು.ದೇವಾಡಿಗ, ವಿದ್ಯಾ ರಮೇಶ್, ವೇದಾವತಿ ಶೆಟ್ಟಿ, ಯಶೋಧಾ ಕೇಶವ್ ಹಾಗೂ ಸರೋಜಾ ಯಶವಂತ್ ಉಪಸ್ಥಿತರಿದ್ದರು. ಯಾಧವ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.







