ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಐದು ಜಾಗ ಗುರುತಿಸಿದ ಉತ್ತರ ಪ್ರದೇಶ ಸರಕಾರ
ಲಕ್ನೋ, ಡಿ.31: ಉತ್ತರ ಪ್ರದೇಶ ಸರಕಾರವು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಐದು ಸಂಭವನೀಯ ಜಾಗಗಳನ್ನು ಗುರುತಿಸಿದೆ.
ಮಸೀದಿ ನಿರ್ಮಾಣದ ಉದ್ದೇಶಕ್ಕಾಗಿ ಯುಪಿ ಸರಕಾರವು ಮಿರ್ಝಾಪುರ, ಶಂಶುದ್ದೀನ್ಪುರ್ ಮತ್ತು ಚಾಂದಪುರದಲ್ಲಿ ಐದು ಜಾಗಗಳನ್ನು ಗುರುತಿಸಿದೆ. ಇವೆಲ್ಲವೂ 'ಪಂಚಕೋಸಿ ಪರಿಕ್ರಾಮ' ದ ಹೊರಗಿದೆ. ಇದು 15 ಕಿ.ಮೀ ಪರಿಧಿಯಲ್ಲಿ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.
ಇತ್ತೀಚಿನ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಅನುಸರಿಸಿ ಸರಕಾರ ಈ ನಿರ್ಧಾರ ಕೈಗೊಂಡಿದೆ. 1992ರಲ್ಲಿ ಕರಸೇವಕರು ಬಾಬರಿ ಮಸೀದಿಯನ್ನು ನಾಶಪಡಿಸಿದರು, ಇದು ದೇಶಾದ್ಯಂತ ಗಲಭೆಗೆ ಕಾರಣವಾಗಿತ್ತು. ರಾಮನ ಜನ್ಮಸ್ಥಳವಾಗಿರುವ ಆಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.
ಸುನ್ನೀ ವಕ್ಫ್ ಮಂಡಳಿಗೆ ಅಯೋಧ್ಯೆಯೊಳಗೆ 5 ಎಕರೆ ಜಾಗವನ್ನು ಪರ್ಯಾಯವಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ನವೆಂಬರ್ 9 ರ ತೀರ್ಪಿನಲ್ಲಿ ತಿಳಿಸಿತ್ತು.
ಸುಪ್ರೀಂ ಕೋರ್ಟ್ ನ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಹದಿನೆಂಟು ರಿವ್ಯೂ ಅರ್ಜಿಗಳನ್ನು ಸಲ್ಲಿಸಲಾಗಿದ್ದರೂ, ಅವೆಲ್ಲವನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 12 ರಂದು ವಜಾಗೊಳಿಸಿತ್ತು.