ಪೌರತ್ವ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ
ತಿರುವನಂತಪುರಂ, ಡಿ.31: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಾಪಸ್ ಪಡೆಯುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಕೇರಳ ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ನಿರ್ಣಯ ಅಂಗೀಕರಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ವಿಧಾನಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಂಡಿಸಿದರು.
ಸಿಪಿಐ (ಎಂ) ಶಾಸಕ ಜೇಮ್ಸ್ ಮ್ಯಾಥ್ಯೂ ಅವರು ಪೌರತ್ವ ವಿರುದ್ಧ ವಿಜಯನ್ ಮಂಡಿಸಿದ ನಿರ್ಣಯವನ್ನು ಬೆಂಬಲಿಸಿದರು
ಈ ಕಾಯ್ದೆಯನ್ನು ಅಂಗೀಕರಿಸುವ ಮೂಲಕ ರಾಷ್ಟ್ರವನ್ನು ಕೋಮು ಮಾರ್ಗವಾಗಿ ವಿಭಜಿಸುವ ಆರ್ಎಸ್ಎಸ್ ಕಾರ್ಯಸೂಚಿಯನ್ನು ಬಿಜೆಪಿ ಸರಕಾರ ಜಾರಿಗೆ ತಂದಿದೆ ಎಂದು ವಿಜಯನ್ ಆರೋಪಿಸಿದರು.
“ಕೇರಳದಲ್ಲಿ ಯಾವುದೇ ದಿಗ್ಬಂಧನ ಕೇಂದ್ರ (ಡಿಟೆನ್ಶನ್ ಸೆಂಟರ್ ) ತೆರೆಯುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಕೇರಳಕ್ಕೆ ಜಾತ್ಯತೀತೆಯ ಸುದೀರ್ಘ ಇತಿಹಾಸವಿದೆ, ಗ್ರೀಕರು, ರೋಮನ್ನರು, ಅರಬ್ಬರು, ಎಲ್ಲರೂ ನಮ್ಮ ಭೂಮಿಯನ್ನು ತಲುಪಿದ್ದಾರೆ. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಆರಂಭದಲ್ಲಿಯೇ ಕೇರಳವನ್ನು ತಲುಪಿದರು. ನಮ್ಮ ಸಂಪ್ರದಾಯವನ್ನು ಜೀವಂತವಾಗಿರಿಸಬೇಕಾಗಿದೆ. ” ಎಂದು ಹೇಳಿದರು
ಸಿಎಎ ಅನುಷ್ಠಾನವನ್ನು "ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆ" ಎಂದು ಕರೆದ ಕೇರಳ ಸಿಎಂ, "ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ಸಿಎಎ 2019 ವಿವಿಧ ಸಮುದಾಯಗಳಲ್ಲಿ ಕಳವಳವನ್ನು ಉಂಟುಮಾಡಿದೆ, ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆದಿದೆ. ಕೇರಳದಲ್ಲಿ ಸಾಮಾನ್ಯವಾಗಿ ಸಿಎಎ ವಿರುದ್ಧ ಶಾಂತಿಯುತ ಮತ್ತು ಸಂಘಟಿತ ಆಂದೋಲನ ನಡೆದಿದೆ. ಪೌರತ್ವ ನೀಡಲು ಹೊಸ ಮಾರ್ಗಸೂಚಿಗಳನ್ನು ರೂಪಿಸಿರುವ ಈ ಕಾಯ್ದೆಯು ಸಂವಿಧಾನದ ಮೂರನೇ ಭಾಗದಲ್ಲಿ ಉಲ್ಲೇಖಿಸಿರುವಂತೆ ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ”
ಡಿಸೆಂಬರ್ 11 ರಂದು ರಾಜ್ಯಸಭೆಯಲ್ಲಿ ಪೌರತ್ವ ಮಸೂದೆ ಅಂಗೀಕರಿಸಲ್ಪಟ್ಟ ಒಂದು ದಿನದ ನಂತರ, ವಿಜಯನ್ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು ಮತ್ತು "ಅಸಂವಿಧಾನಿಕ ಮಸೂದೆಗೆ" ಕೇರಳದಲ್ಲಿ ಸ್ಥಾನವಿಲ್ಲ ಮತ್ತು ರಾಜ್ಯವು ಅದನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಯಾವುದೇ ಕಾರಣಕ್ಕೂ ಕೇರಳದಲ್ಲಿ ಸಿಎಎಯನ್ನು ಜಾರಿಗೆ ತರುವುದಿಲ್ಲ ಎಂದು ಸದನದಲ್ಲಿ ಪುನರುಚ್ಚರಿಸಿದರು.
ಭಾರತವು ವಿವಿಧ ಜಾತಿ, ಮತ ಮತ್ತು ಧರ್ಮಗಳಿಗೆ ಸೇರಿದ ಜನರು ಸಾಮರಸ್ಯದಿಂದ ಒಟ್ಟಿಗೆ ವಾಸಿಸುವ ರಾಷ್ಟ್ರವಾಗಿ ಪ್ರಸಿದ್ಧಿ ಪಡೆದಿದೆ ಎಂದು ಅವರು ಹೇಳಿದರು.
ಭಾರತೀಯ ಸಂವಿಧಾನವು ನಾಗರಿಕರ ಹಕ್ಕುಗಳ ಹೋರಾಟದಲ್ಲಿ ಒಂದು ಮೈಲಿಗಲ್ಲು ಮತ್ತು ಸಮಾನತೆಯನ್ನು ಆಧರಿಸಿದ ಸಮಾಜವಾಗಿದೆ ಮತ್ತು ಇದು ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾನತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಆಧರಿಸಿದೆ ಎಂದು ಹೇಳಿದರು.
ಆಧುನಿಕ ಪ್ರಜಾಪ್ರಭುತ್ವದ ಮೂಲತತ್ವ ಮತ್ತು ಅಂತಹ ಚಳುವಳಿಗಳಿಂದ ಜಾತ್ಯತೀತ ದೃಷ್ಟಿಕೋನಗಳೊಂದಿಗೆ ಭಾರತೀಯ ಸಂವಿಧಾನ ರೂಪುಗೊಂಡಿತು. ಭಾರತೀಯ ರಾಷ್ಟ್ರೀಯತೆ ವಿವಿಧ ಸಮುದಾಯಗಳ ಜೀವನ ಮತ್ತು ಸಂಸ್ಕೃತಿಗಳನ್ನು ಆಧರಿಸಿದೆ. ಸಂವಿಧಾನವು ವೈವಿಧ್ಯತೆಯಲ್ಲಿ ಏಕತೆಯ ಕಲ್ಪನೆಯನ್ನು ಎತ್ತಿಹಿಡಿದಿದೆ, ”ಎಂದು ಅವರು ಹೇಳಿದರು.
ವಿಪಕ್ಷ ಕಾಂಗ್ರೆಸ್ ಮತ್ತು ಸಿಪಿಐ (ಎಂ) ಎರಡೂ ರಾಜ್ಯ ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಬೆಂಬಲಿಸಿದವು. ಕಾಂಗ್ರೆಸ್ ನ ವಿ.ಡಿ ಸತೀಸನ್ ಅವರು, “ಎನ್ಆರ್ಸಿ ಮತ್ತು ಸಿಎಎ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಸಿಎಎ ಸಂವಿಧಾನದ 13,14 ಮತ್ತು 15 ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ” ಎಂದರು