ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಹೊಸ ಗಡುವು !
ನವಯುಗ್ ಕಂಪನಿ ನಿರ್ದೇಶಕ- ಸಿಬ್ಬಂದಿ ವಿರುದ್ಧ ಎಫ್ಐಆರ್

ಮಂಗಳೂರು, ಡಿ. 31: ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುವ ಪಂಪ್ವೆಲ್ ಮೇಲ್ಸೇತುವೆಯ ಕಾಮಗಾರಿ ಸಂಸದರು ಈ ಹಿಂದೆ ನೀಡಿರುವ ಹೇಳಿಕೆಯಂತೆ ಜನವರಿ ಮೊದಲ ವಾರದಲ್ಲಿ ಪೂರ್ಣಗೊಳ್ಳದಿರುವುದು ಖಚಿತವಾಗಿದೆ. ಈ ನಡುವೆಯೇ, ಗುತ್ತಿಗೆ ವಹಿಸಿರುವ ಕಂಪನಿ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಮತ್ತೊಂದು ಹೊಸ ಲಿಖಿತ ಗಡುವು ನೀಡಿದೆ!
ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ್ ಸಂಸ್ಥೆಯ ಪ್ರತಿನಿಧಿಗಳ ಸಭೆಯಲ್ಲಿ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೊಸ ಲಿಖಿತ ಭರವಸೆಯನ್ನು ನವಯುಗ್ ಸಂಸ್ಥೆ ನೀಡಿದೆ.
ಗುತ್ತಿಗೆದಾರ ಕಂಪನಿಯ ವಿರುದ್ಧ ತೀವ್ರ ಹತಾಶೆಯನ್ನು ವ್ಯಕ್ತಪಡಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಕಳೆದ ಎರಡು ವರ್ಷಗಳಿಂದ ಕಂಪನಿಗೆ ಸಾಲದ ನೆರವಿನ ಜತೆಗೆ ಎಲ್ಲಾ ರೀತಿಯ ಸಹಕಾರವನ್ನೂ ನೀಡಿದ್ದರೂ ಕಂಪನಿಯು ತನ್ನ ಲಿಖಿತ ಭರವಸೆ ಈಡೇರಿಸುವಲ್ಲಿ ವಿಫಲವಾಗಿರುವ ಬಗ್ಗೆ ‘‘ಸಂಸದರಾಗಿ ಇನ್ನು ತಮ್ಮಿಂದೇನು ಮಾಡಲು ಸಾಧ್ಯ’’ ಎಂಬ ಅಸಹಾಯಕತೆ ಯನ್ನೂ ಸಭೆಯಲ್ಲಿ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕಂಪನಿಯು ಕಳೆದ ಸುಮಾರು ಎರಡು ವರ್ಷಗಳಿಂದೀಚೆಗೆ ನೀಡಲಾದ 6ನೆ ಗಡುವು ಇದಾಗಿದೆ. ಕಳೆದ ಅಕ್ಟೋಬರ್ನಲ್ಲಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಲಿಖಿತ ಭರವಸೆಯನ್ನು ಕಂಪನಿ ನೀಡಿತ್ತು. ಮಾತ್ರವಲ್ಲದೆ, ಒಂದು ವೇಳೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕಂಪನಿಯ ಮುಖ್ಯಸ್ಥರು ಸಭೆಯಲ್ಲಿ ತಿಳಿಸಿದ್ದರು. ಆದರೆ ಮತ್ತೆ ಸಮಯ ಕೇಳುತ್ತಿದ್ದಾರೆ. ಹಾಗಾಗಿ ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ ಇನ್ನು ಮುಂದೆ ಇದರ ಉಸ್ತುವಾರಿಯನ್ನು ನೀವು ವಹಿಸಿ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗೆ ಮೇಲುಸ್ತುವಾರಿ ವಹಿಸಿಕೊಳ್ಳುವಂತೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್, ಕಂದಾಯ ಇಲಾಖೆಯ ತಹಶೀಲ್ದಾರ್ ಮೂಲಕ ದಿನನಿತ್ಯದ ಕಾಮಗಾರಿಯ ನಿಗಾ ವಹಿಸಿ ಮುಂದಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸಿಂಧು ರೂಪೇಶ್ಗೆ ಸಂಸದ ನಳಿನ್ ನಿರ್ದೇಶನ ನೀಡಿದರು.
ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಲಿಖಿತ ಪತ್ರವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾಧಿಕಾರಿ ಹಾಗೂ ನವಯುಗ್ ಸಂಸ್ಥೆಯ ನಿರ್ದೇಶಕರ ಸಹಿಯೊಂದಿಗೆ ಜಿಲ್ಲಾಧಿಕಾರಿಗೆ ಈ ಸಂದರ್ಭ ನೀಡಲಾಯಿತು. ಈಗಾಗಲೇ ಸಾರ್ವಜನಿಕ ಹಿತಾಸಕ್ತಿಯಡಿ ಕಂಪನಿಯ ನಿರ್ದೇಶಕರು ಹಾಗೂ ಸಿಬ್ಬಂದಿ ಮೇಲೆ ಕ್ರಿಮಿನಲ್ ಪ್ರಕರಣದಡಿ ದಾಖಲಾಗಿರುವ ಎಫ್ಐಆರ್ ಪ್ರತಿಯನ್ನು ಡಿಸಿಪಿ ಅರುಣಾಂಶಗಿರಿ ಅವರಿಗೆ ನೀಡಿ, ಮುಂದಿನ ಕ್ರಮ ಕೈಗೊಳ್ಳಿ ಎಂದು ಸಂಸದ ನಳಿನ್ ಕುಮಾರ್ ಸೂಚಿಸಿದರು.
ಜ.1ರಿಂದ ತಲಪಾಡಿ ಟೋಲ್ ನೀಡದೆ ವಾಹನ ಸಂಚಾರ !
ಜನರ ಭಾವನೆ ಜತೆ ನಾವಿದ್ದೇವೆ ಎಂದ ಸಂಸದ- ಶಾಸಕರು
ಇತ್ತ ಪಂಪ್ವೆಲ್ ಮೇಲ್ಸೇತುವೆ ಲೋಕಾರ್ಪಣೆಗೊಳ್ಳುವುದು ವಿಳಂಬಗೊಳ್ಳುತ್ತಿರುವಂತೆಯೇ ಸಾರ್ವಜನಿಕ ವಾಹನಗಳು ಸೇರಿದಂತೆ ವಾಹನ ಚಾಲಕರು ತಲಪಾಡಿಯಲ್ಲಿ ಟೋಲ್ ನೀಡದೆ ಸಂಚರಿಸಲು ನಿರ್ಧರಿಸಿದ್ದಾರೆ. ಸಂಸದನಾಗಿ ಜನರ ಭಾವನೆಗಳ ಜತೆ ನಾವಿದ್ದೇವೆ ಎಂದು ಹೇಳುವ ಮೂಲಕ ಇಂದು ನಡೆದ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ವೇದವ್ಯಾಸ ಕಾಮತ್ರವರು ಟೋಲ್ ನೀಡದೆ ಸಂಚಾರ ಮಾಡುವ ಜನರ ತೀರ್ಮಾನನ್ನು ಪರೋಕ್ಷವಾಗಿ ಬೆಂಬಲಿಸಿದರು.
ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಹಾಗೂ ಸೇರಿದ್ದ ವಿವಿಧ ವಾಹನ ಚಾಲಕ ಮಾಲಕರ ಸಂಘಗಳ ಪ್ರತಿನಿಧಿಗಳು ಜನವರಿ 1ರಿಂದ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ತಲಪಾಡಿ ಟೋಲ್ನಲ್ಲಿ ಶುಲ್ಕ ನೀಡದೆ ಸಂಚರಿಸುವುದಾಗಿ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ಡಿಸಿಪಿ ಅರುಣಾಂಶಗಿರಿ ಉಪಸ್ಥಿತರಿದ್ದರು.
ಜನರಿಗಾಗಿ ನಾವು ಕೇಸು ಹಾಕಿಸಿಕೊಳ್ಳಲೂ ಸಿದ್ಧ
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ವೇದವ್ಯಾಸ ಕಾಮತ್ರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ್ ಕಂಪನಿಯ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಗಡುವಿನ ಮೇಲೆ ಗಡುವನ್ನು ಕೇಳುತ್ತಾ ಸಾಗುತ್ತಿದ್ದೀರಿ. ಸಂಸದರು ನಿಮಗೆ ಸಾಲದ ನೆರವನ್ನೂ ಒದಗಿಸಿದ್ದಾರೆ. ಪಂಪ್ನಿಂದ ಡೀಸೆಲ್ ವ್ಯವಸ್ಥೆಯನ್ನೂ ವಾಹನಗಳಿಗೆ ಮಾಡಿದ್ದಾರೆ. ಆದರೆ ನಿಮ್ಮ ಕೆಲಸವನ್ನು ನೀವು ಮಾಡದೆ ಇದೀಗ ಜನರು ನಮ್ಮನ್ನು ಪ್ರಶ್ನಿಸುವಂತಾಗಿದೆ. ಹಾಗಾಗಿ ಜನರು ಟೋಲ್ನಲ್ಲಿ ಹಣ ನೀಡದೆ ಸಂಚರಿಸಲಿ. ನಾವು ಅವರ ಜತೆಗಿದ್ದೇವೆ. ನಮ್ಮ ಜನತೆಗಾಗಿ ನಾವು ಪ್ರಕರಣ ಎದುರಿಸಲೂ ಸಿದ್ಧ ಎಂದು ಹೇಳಿದರು.







