ಸಿಎಎಗೆ ರಾಜ್ಯಗಳ ವಿರೋಧ: ಆನ್ ಲೈನ್ ಮೂಲಕ ಪೌರತ್ವ ನೀಡಲು ಕೇಂದ್ರ ಚಿಂತನೆ
ಹೊಸದಿಲ್ಲಿ, ಡಿ.31: ಪೌರತ್ವ ತಿದ್ದುಪಡಿ ಕಾಯ್ದೆಗೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪೌರತ್ವ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಆನ್ ಲೈನ್ ಮೂಲಕ ನಡೆಸಲು ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಕೇರಳ ಸೇರಿದಂತೆ ಹಲವಾರು ರಾಜ್ಯಗಳು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ವಿಚಾರದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕ ಪೌರತ್ವಕ್ಕಾಗಿ ಅರ್ಜಿಗಳನ್ನು ಪಡೆಯುವ ಬದಲಿಗೆ ಹೊಸ ಪ್ರಾಧಿಕಾರವನ್ನು ನೇಮಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ ಮತ್ತು ಭಾರತೀಯ ಪೌರತ್ವ ನೀಡುವ ಸಂಪೂರ್ಣ ಪ್ರಕ್ರಿಯೆ ಆನ್ ಲೈನ್ ಮೂಲಕ ನಡೆಸಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ ಲೈನ್ ಮೂಲಕ ನಡೆದರೆ, ಯಾವುದೇ ಹಂತದಲ್ಲೂ ರಾಜ್ಯ ಸರಕಾರದ ಹಸ್ತಕ್ಷೇಪ ಇರುವುದಿಲ್ಲ ಎನ್ನುವುದು ಕೇಂದ್ರದ ಯೋಚನೆಯಾಗಿದೆ. ಅಲ್ಲದೆ, ಸಂವಿಧಾನದ 7ನೇ ಪರಿಚ್ಚೇದಡಿಯಲ್ಲಿ ಶಾಸನವನ್ನು ಜಾರಿಗೆ ತಂದಿದ್ದರಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ತಿರಸ್ಕರಿಸುವ ಅಧಿಕಾರ ರಾಜ್ಯ ಸರಕಾರಗಳಿಗೆ ಇಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು indiatoday.in ವರದಿ ತಿಳಿಸಿದೆ.
ಕೇಂದ್ರ ಸರಕಾರದ ಕಾನೂನಿನ ಅನುಷ್ಠಾನವನ್ನು ನಿರಾಕರಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದು ಗೃಹ ಸಚಿವಾಲಯದ ಉನ್ನತ ಅಧಿಕಾರಿ ಹೇಳಿದ್ದಾರೆ.
ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಅಲ್ಲಿನ ಧಾರ್ಮಿಕ ಕಿರುಕುಳವನ್ನು ಸಹಿಸಲಾರದೆ 2014ರ ಡಿಸೆಂಬರ್ 31 ರವರೆಗೆ ಭಾರತದಲ್ಲಿ ಬಂದು ನೆಲೆಸಿರುವ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಸದಸ್ಯರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುವುದಿಲ್ಲ. ಆದರೆ ಅವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ.
ಆರು ಸಮುದಾಯಗಳ ನಿರಾಶ್ರಿತರಿಗೆ 11 ವರ್ಷಗಳ ಹಿಂದಿನ ಬದಲು ಐದು ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ ಅವರಿಗೆ ಭಾರತೀಯ ಪೌರತ್ವ ನೀಡಲಾಗುವುದು ಎಂದು ಕಾಯ್ದೆ ಹೇಳುತ್ತದೆ.
ಕೇರಳ ವಿಧಾನ ಸಭೆ ಮಂಗಳವಾರ ವಿವಾದಾತ್ಮಕ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿತು. ಆಡಳಿತಾರೂಢ ಎಲ್ ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷ ಯುಡಿಎಫ್ ಈ ನಿರ್ಣಯವನ್ನು ಬೆಂಬಲಿಸಿದರೆ, ಬಿಜೆಪಿಯ ಏಕೈಕ ಶಾಸಕ ಮತ್ತು ಮಾಜಿ ಕೇಂದ್ರ ಸಚಿವ ಒ ರಾಜಗೋಪಾಲ್ ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ನಿರ್ಣಯವನ್ನು ಸದನವು ಬಹುಮತದಿಂದ ಅಂಗೀಕರಿಸಿತು. ವಿಜಯನ್ ತಮ್ಮ ರಾಜ್ಯದಲ್ಲಿ ಸಂವಿಧಾನ ವಿರೋಧಿ ಕಾನೂನಿಗೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ, ಪಂಜಾಬ್, ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತಮ್ಮ ಧ್ವನಿಯೆತ್ತಿದ್ದಾರೆ. ಈ ಕಾನೂನು ಅಸಂವಿಧಾನಿಕ ಎಂದು ಈಗಾಗಲೇ ಘೋಷಿಸಿದ್ದಾರೆ. ಮತ್ತು ಆಯಾ ರಾಜ್ಯಗಳಲ್ಲಿ ಜಾರಿಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.