ಸಂವಿಧಾನಕ್ಕೆ ಧಕ್ಕೆಯಾದರೆ ದೇಶದಲ್ಲಿ ರಕ್ತಕ್ರಾಂತಿ: ರಾಜರತ್ನ ಅಂಬೇಡ್ಕರ್

ಅಫಜಲಪುರ: ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರು ಬುದ್ಧನ ನೆಲದಿಂದ ಬಂದಿದ್ದೇನೆಂದು ಹೇಳುತ್ತಾರೆ. ಭಾರತಕ್ಕೆ ಬಂದಾಗ ರಾಮಮಂದಿರ ನಿರ್ಮಿಸುವ ಮಾತನಾಡುತ್ತಿದ್ದಾರೆ. ಗೋದ್ರಾ ಹತ್ಯಾಕಾಂಡದ ಪ್ರಮುಖ ಆರೋಪಿಗಳಾದ ನರೇಂದ್ರ ಮೋದಿ, ಪ್ರಜ್ಞಾ ಸಿಂಗ್, ಗಡಿಪಾರು ಆರೋಪಿ ಅಮಿತ್ ಷಾ ಅಂತಹ ನಾಯಕರ ಕೈಯಲ್ಲಿ ಸಂವಿಧಾನವಿದ್ದು, ರಾಮಲಲ್ಲಾ ಮೈದಾನದಲ್ಲಿ ಸಂವಿಧಾನ ಪ್ರತಿ ಸುಡುವ ಮೂಲಕ ನಾಲಾಯಕರಾಗಿದ್ದಾರೆ ಎಂದು ಅಂತರಾಷ್ಟ್ರೀಯ ಬೌದ್ಧ ಮಹಾಸಭಾದ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ಹೇಳಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಅಫಜಲಪುರ ಘಟಕದ ವತಿಯಿಂದ ಆಯೋಜಿಸಿದ ಶೋಷಿತರ ನಡೆ ಬುದ್ಧ ಮಾರ್ಗದ ಕಡೆ ಬೃಹತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಸಂವಿಧಾನ ಬದಲಾವಣೆ ಮಾಡಲು ಹೊರಟ ಆರೆಸ್ಸೆಸ್ ಸಂಘಟನೆ ಕಿತ್ತೊಗೆದಾಗ ನಮಗೆ ನ್ಯಾಯ ಸಿಗುತ್ತದೆ. ಸಂವಿಧಾನಕ್ಕೆ ಧಕ್ಕೆ ಬಂದರೆ ಎಲ್ಲರೂ ತ್ಯಾಗಕ್ಕೆ ಸಿದ್ಧರಾಗಬೇಕು. ಒಂದು ವೇಳೆ ಸಂವಿಧಾನಕ್ಕೆ ಧಕ್ಕೆಯಾದರೆ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ. ಶೋಷಿತರೆಲ್ಲರೂ ಬುದ್ಧನ ವಿಚಾರ ಮತ್ತು ಅಂಬೇಡ್ಕರ್ ವಿಚಾರಗಳಿಗೆ ಮತ್ತು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಅವರ ಹಾಕಿಕೊಟ್ಟ ಮಾರ್ಗದತ್ತ ನಡೆದು ಕೋಮುವಾದಿಗಳಿಗೆ ಬುದ್ಧಿ ಕಲಿಸಬೇಕೆಂದು ಕರೆ ನೀಡಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿದೇಶದಲ್ಲಿ ಬೌದ್ಧ ಬಂತೇಜಿಯೆಂದು ಹೇಳಿಕೊಂಡು ಹಣ ತರುತ್ತಿದ್ದಾನೆ. ಇದೆ ರೀತಿ ಪ್ರಧಾನಿ ಮೋದಿಯವರು ಕೂಡಾ ದೇಶದ ಶ್ರೀಮಂತರಾದ ಅದಾನಿ, ಅಂಬಾನಿಯವರಿಗೆ ಹಣ ಕೊಟ್ಟಿದ್ದಾರೆ. ಈ ಕುರಿತು ವಿದೇಶದಲ್ಲಿ ಎಲ್ಲ ನಾಯಕರ ಮುಂದೆ ಅವರ ಬಂಡವಾಳ ಬಯಲು ಮಾಡಿದ್ದೇನೆಂದು ತಿಳಿಸಿದರು.
ಈಗಾಗಲೆ ಎನ್.ಆರ್.ಸಿ ಮತ್ತು ಸಿಎಎ ಕಾಯ್ದೆ ಜಾರಿಗೆ ತಂದಿದ್ದಾರೆ. ದೇಶದಲ್ಲಿರುವ ನೂರು ಕೋಟಿ ಜನ ಹೊರಹೋಗಬೇಕೆಂದು ಹೇಳುತ್ತಿರುವ ಆರೆಸ್ಸೆಸ್ ಮುಖಂಡ ಮೋಹನ ಭಾಗವತ್ ಹೊರಗಿನಿಂದ ಬಂದಿದ್ದಾನೆ. ಮೊದಲು ಆತನನ್ನು ಹೊರಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧರನ್ನು ಗುರಿಯಾಗಿಸಿಕೊಂಡು ಕಾನೂನು ಜಾರಿಗೆ ತಂದಿದ್ದಾರೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಈ ಸಮುದಾಯ ಹೋರಾಟ ಮತ್ತು ತ್ಯಾಗ ಬಲಿದಾನ ಮಾಡಿದ್ದು, ಈ ಸಮುದಾಯದ ಜನ ದೇಶ ಬಿಟ್ಟು ಹೋಗಲು, ಇದು ಅವರ ಅಪ್ಪನ ದೇಶವಲ್ಲ ಎಂದರು.
ಭಾರತದ ಪಾರ್ಲಿಮೆಂಟ್ನಲ್ಲಿ ಸುಮಾರು ಮೂರು ನೂರು ಜನಕ್ಕಿಂತ ಹೆಚ್ಚಿನ ಸಂಸದರು ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದು, ಪೌರತ್ವದ ಕಾಯ್ದೆ ಬಗ್ಗೆ, 371 ರದ್ದು ಕುರಿತು ಯಾವುದೇ ಪ್ರಶ್ನೆ ಕೇಳದೆ ಬಿಜೆಪಿಯ ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ. ಅಂಬೇಡ್ಕರ್ ರವರು ಕೆರೆಯ ನೀರು ಮುಟ್ಟುವ, ಮಂದಿರ ಪ್ರವೇಶದಂತಹ ಆಂದೋಲನ ಹಮ್ಮಿಕೊಂಡು ಹಿಂದು ಧರ್ಮದಲ್ಲಿರುವ ಮೂಢನಂಬಿಕೆ ಮತ್ತು ಕಂದಾಚಾರ, ಜಾತಿ ವ್ಯವಸ್ಥೆ ಬಗ್ಗೆ ದಲಿತ, ಶೋಷಿತರ ಬಗ್ಗೆ ಇರುವ ಭೇದ ಭಾವ ತಿಳಿಸಿ, ಜಾಗೃತಿ ಮೂಡಿಸಿದರು. ಹಿಂದು ಧರ್ಮದ ಗೊಡ್ಡು ಆಚರಣೆಗಳ ವಿರುದ್ಧ ಸಿಡಿದೆದ್ದು, ಬೌದ್ಧ ಧರ್ಮದ ಕಡೆ ಒಲವು ತೋರಿದರು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ವಿದೇಶಕ್ಕೆ ಹೋಗಿ ಬುದ್ಧನ ನೆಲದಿಂದ ಬಂದಿದ್ದೇನೆ ಎಂದು ಹೇಳುತ್ತಾರೆ. ಆದರೆ ಭಾರತ ದೇಶಕ್ಕೆ ಬಂದ ನಂತರ ರಾಮಮಂದಿರ ಕಟ್ಟಲು ಹೊರಟಿದ್ದಾರೆಂದು ಕಿಡಿಕಾರಿದ ಅವರು, ಅಂಬೇಡ್ಕರ್ ವಿಚಾರಗಳಿಗೆ ಕೊಡಲಿ ಪೆಟ್ಟು ಹಾಕುತ್ತಿರುವ ಕೋಮುವಾದಿ ಆರೆಸ್ಸೆಸ್ ನವರಿಗೆ ಪ್ರಶ್ನೆ ಹಾಕಿದ ಅವರು, ಸಂವಿಧಾನ ಸುಟ್ಟು ಹಾಕುವ ಮೂಲಕ ಈ ದೇಶದ ಜನತೆಗೆ ಮೋಸ ಮಾಡುತ್ತಿದ್ದಾರೆ. ಮೋದಿ ಮತ್ತು ಅಮಿತ್ ಶಾ ಮೇಲೆ ಆರೆಸ್ಸೆಸ್ ಹಿಡಿತವಿದೆ. ಮೊದಲು ಆರೆಸ್ಸೆಸ್, ಭಜರಂಗ ದಳ, ವಿಶ್ವ ಹಿಂದು ಪರಿಷತ್ ಅಂತಹ ಸಂಘಟನೆಗಳನ್ನು ಬೇರು ಸಮೇತ ಕಿತ್ತು ಹಾಕಬೇಕು. ಪೌರತ್ವ ಕಾಯ್ದೆ ಆಧಾರದ ಮೇಲೆ ದೇಶದಲ್ಲಿನ ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ದೇಶದಿಂದ ಹೊರಹಾಕುವ ಹುನ್ನಾರ ಹಣೆದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೋಮುವಾದಿ ಪಕ್ಷದ ವಿರುದ್ಧವಾಗಿ ನಿಲ್ಲಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜೆ.ಎಂ ಕೊರಬು, ದಲಿತ ಸಂಘರ್ಷ ಸಮಿತಿ ಮುಖಂಡ ರಾಜು ಆರೇಕರ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ಮತೀನ ಪಟೇಲ ಅವರು ರಾಜರತ್ನ ಅವರಿಗೆ ಬೆಳ್ಳಿ ಖಡ್ಗ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಗಾನಂದ ಬಂತೇಜಿ ಅವರು ತ್ರಿಸರಣ ಪಂಚಶೀಲ ಪ್ರತಿಜ್ಞಾ ವಿಧಿ ಭೋದಿಸಿದರು.
ವೇದಿಕೆಯಲ್ಲಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ತಾ.ಪಂ.ಸದಸ್ಯ ರಾಜು ಬಬಲಾದ, ಪುರಸಭೆ ಸದಸ್ಯರಾದ ಯಮನಪ್ಪ ಭಾಸಗಿ, ನಿಂಗಪ್ಪ ಚಲವಾದಿ, ಮುಖಂಡರಾದ ಬಾಬಾಗೌಡ ಪಾಟೀಲ ಮಾಶಾಳ, ಶಿವಪುತ್ರಪ್ಪ ಸಂಗೋಳಗಿ, ಜೆ.ಎಂ ಕೊರಬೊ, ಪಪ್ಪು ಪಟೇಲ, ಮತೀನ ಪಟೇಲ, ಎಂ.ಎಲ್.ಪಟೇಲ ಬಳೂಂಡಗಿ, ಪ್ರಕಾಶ ಜಮಾದಾರ, ದಯಾನಂದ ಡೊಡ್ಮನಿ, ಶರಣು ಕುಂಬಾರ, ನಾಗಪ್ಪ ಆರೇಕರ, ಸಿದ್ದಾರ್ಥ ಬಸರಿಗಿಡ, ನಾಗೇಶ ಕೊಳ್ಳಿ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಕ್ರಾಂತಿ, ಸುರೇಶ ಹಾದಿಮನಿ, ಬೀರಣ್ಣಾ ಕಲ್ಲೂರ, ಚಂದ್ರಕಾಂತ ಇಂಗಳೆ ಸೋಲಾಪೂರ, ರಾಜು ಆರೇಕರ, ಪ್ರಕಾಶ ಮೂಲಭಾರತಿ, ಎ.ಬಿ ಹೊಸಮನಿ, ರವಿ ಗೌರ, ರಮೇಶ ಸೂಲೇಕರ, ಅರವಿಂದ ದೊಡ್ಮನಿ, ಸಿದ್ದು ದಿಕ್ಸಂಗಾ, ಅಶೋಕ ಗುಡ್ಡಡಗಿ, ಗುಂಡಪ್ಪ ಲಂಡನಕರ, ಮಹಾನಿಂಗ ಅಂಗಡಿ, ಮಹಾಂತೇಶ ಗಾಯಕವಾಡ, ಮಲ್ಲಿಕಾರ್ಜುನ ಗೌರ, ಸೋಮು ಬ್ಯಾಡಗಿಹಾಳ, ಹಣಮಂತ ಕೋರವಾರ, ಸಾಹಿತಿಗಳಾದ ಸುಭಾಷ ನಾಯ್ಕೋಡಿ, ಹಿರಿಯ ಸಾಹಿತಿ ಬಿ.ಎಂ ರಾವ ಇತರರಿದ್ದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಜಗತ್ತಿನಲ್ಲಿ ದೊಡ್ಡ ವಿದ್ವಾಂಸ ಮತ್ತು ದೇಶದ ಕುರಿತು ಚಿಂತನೆ ನಡೆಸಿದ ಶ್ರೇಷ್ಠ ಜ್ಞಾನಿ. ಆದ್ದರಿಂದ ಯುವಕರು ಅವರ ತತ್ವಾದರ್ಶಗಳನ್ನು ಪಾಲಿಸುವುದರ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು. ಈ ಕಾರ್ಯಕ್ರಮವೂ ಯಾವುದೇ ಪಕ್ಷ ಮತ್ತು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ಬದಲಾಗಿ ಬೌದ್ಧ ಧರ್ಮದ ತತ್ವವನ್ನು ಸಾರುವುದಾಗಿದೆ. ಬಾಬಾಸಾಹೇಬರ ಆಶಯದಂತೆ ಶೋಷಿತ ಜನಾಂಗದಲ್ಲಿರುವ ಎಲ್ಲರು ಶಿಕ್ಷಣವನ್ನು ಪಡೆಯುವುದರ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕೆಂದು ತಿಳಿಸಿದರು.
-ಎಂ.ವೈ.ಪಾಟೀಲ, ಶಾಸಕರು, ಅಫಜಲಪೂರಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ವಿಚಾರಗಳನ್ನು ಜಗತ್ತಿಗೆ ಸಾರಬೇಕು. ಕೋಮುವಾದಿಗಳನ್ನು ಈ ದೇಶದಲ್ಲಿ ಬೇರೂರಿರುವ ಕೋಮುವಾದಿಗಳನ್ನು ಬೇರು ಸಮೇತ ಕಿತ್ತೊಗೆಯಬೇಕು. ಹೀಗಾಗಿ ನಾವೆಲ್ಲರೂ ಆಯುಷ್ಮಾನ ರಾಜರತ್ನ ಅವರಿಗೆ ಬೆಂಬಲವಾಗಿ ನಿಲ್ಲಬೇಕಾಗಿದೆ.
- ಅರ್ಜುನ ಭದ್ರೆ, ಡಿಎಸ್ಎಸ್ ರಾಜ್ಯ ಸಂಚಾಲಕ







