ಪ್ರಧಾನಿ ವಿರುದ್ಧ ನಿಂದನಾತ್ಮಕ ಹೇಳಿಕೆ: ಕಾಂಗ್ರೆಸ್ ನಾಯಕ ನೆಲ್ಲೈ ಕಣ್ಣನ್ ವಿರುದ್ಧ ಪ್ರಕರಣ ದಾಖಲು
ಚೆನ್ನೈ, ಜ. 1: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕ ನೆಲ್ಲೈ ಕಣ್ಣನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಮುಗಿಸಿ ಬಿಡಿ ಎಂದು ನೆಲ್ಲೈ ಕಣ್ಣನ್ ಮುಸ್ಲಿಮರಲ್ಲಿ ಮನವಿ ಮಾಡಿದ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
‘‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಮುಸ್ಲಿಮರು ಮುಗಿಸುತ್ತಾರೆ ಎಂದು ನಾನು ಬಯಸಿದ್ದೆ. ಆದರೆ, ಯಾರೊಬ್ಬರೂ ಅದನ್ನು ಮಾಡಿಲ್ಲ’’ ಎಂದು ಕಣ್ಣನ್ ಎಸ್ ಡಿಪಿಐ ಸಭೆಯಲ್ಲಿ ಹೇಳಿದ್ದರು. ಗೃಹ ಸಚಿವ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕಣ್ಣನ್ ವಿವಾದಾತ್ಮಕ ಭಾಷಣ ಮಾಡಿದ ದಿನದ ಬಳಿಕ, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ, ಪ್ರಧಾನಿ ಹಾಗೂ ಗೃಹ ಸಚಿವರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ಕಣ್ಣನ್ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದರು.
‘‘ಪ್ರಧಾನಿ ಹಾಗೂ ಗೃಹ ಸಚಿವರನ್ನು ಮುಗಿಸುವಂತೆ ನೆಲ್ಲೈ ಕಣ್ಣನ್ ತನ್ನ ಭಾಷಣದಲ್ಲಿ ಮುಸ್ಲಿಮರನ್ನು ಉತ್ತೇಜಿಸಿದ್ದಾರೆ. ವ್ಯಾಟ್ಸ್ ಆ್ಯಪ್ ಹಾಗೂ ಆನ್ಲೈನ್ ಮೂಲಕ ನಾನು ತಮಿಳುನಾಡು ಡಿಜಿಗೆ ದೂರು ನೀಡಿದ್ದೇನೆ. ಕೂಡಲೇ ಕ್ರಮ ಕೈಗೊಳ್ಳುವಂತೆ ತಮಿಳುನಾಡು ರಾಜ್ಯಪಾಲರಲ್ಲಿ ವಿನಂತಿಸಿದ್ದೇನೆ’’ ಎಂದು ಎಚ್. ರಾಜಾ ಟ್ವೀಟ್ ಮಾಡಿದ್ದಾರೆ.