ಸಿಎಎ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯುವಕನ ಹತ್ಯೆ: ಹಿಂದುತ್ವ ಸಂಘಟನೆಗಳ ಇಬ್ಬರು ಕಾರ್ಯಕರ್ತರ ಬಂಧನ
ಪಾಟ್ನಾ: ಡಿಸೆಂಬರ್ 21ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಹತ್ತು ದಿನಗಳ ನಂತರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಿಂದುತ್ವ ಸಂಘಟನೆಗಳಿಗೆ ಸೇರಿದ ಇಬ್ಬರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಇವರ ಪೈಕಿ ನಾಗೇಶ್ ಸಾಮ್ರಾಟ್ ಹಿಂದು ಪುತ್ರ ಸಂಘಟನ್ ಗೆ ಸೇರಿದವನಾಗಿದ್ದರೆ, ವಿಕಾಸ್ ಕುಮಾರ್ ಹಿಂದು ಸಮಾಜ ಸಂಘಟನೆ ಸದಸ್ಯನಾಗಿದ್ದ.
ಮೃತ ಯುವಕ, 18 ವರ್ಷದ ಅಮೀರ್ ಆರ್ ಜೆಡಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ತನ್ನ ಕೈಯ್ಯಲ್ಲಿ ರಾಷ್ಟ್ರಧ್ವಜ ಹಿಡಿದು ನಿಂತಿದ್ದನೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದವರು ಹೇಳಿದ್ದರು. ಆದರೆ ಹತ್ತು ದಿನಗಳ ನಂತರ ಆತನ ಛಿದ್ರಗೊಂಡ ಹಾಗೂ ಕೊಳೆತ ಮೃತದೇಹ ಫುಲ್ವಾರಿ ಶರೀಫ್ ಬ್ಲಾಕ್ ಕಚೇರಿಯ ಸಮೀಪದ ಚರಂಡಿಯಲ್ಲಿ ಪತ್ತೆಯಾಗಿತ್ತು.
ಪ್ರತಿಭಟನೆ ವೇಳೆ ಪೊಲೀಸರು ಗುಂಪನ್ನು ಚದುರಿಸಿದ ನಂತರ ಅಮೀರ್ ನನ್ನು ಕೆಲ ಹುಡುಗರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಆತನಿಗೆ ಇಟ್ಟಿಗೆ ಹಾಗೂ ಹರಿತವಾದ ಆಯುಧಗಳಿಂದ ಹೊಡೆಯಲಾಗಿತ್ತು ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.