ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಕೊಲೆ ಶಂಕೆ
ಶಿವಮೊಗ್ಗ, ಜ.3: ಇಲ್ಲಿನ ವಿದ್ಯಾನಗರ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಸ್ಥಳದಲ್ಲಿದ್ದ ಓಮ್ನಿ ಕಾರಿನಲ್ಲಿ ಮಹಿಳೆಯೋರ್ವರ ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುರುವಾರ ಸಂಜೆ ವರದಿಯಾಗಿದೆ.
ಕಾರಿನಿಂದ ಬರುತ್ತಿದ್ದ ದುರ್ವಾಸನೆ ಗಮನಿಸಿದ ಪಾರ್ಕಿಂಗ್ ನಿರ್ವಾಹಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದರ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲಿಸಿದಾಗ ಕಾರಿನೊಳಗೆ ಮಹಿಳೆಯ ಮೃತದೇಹವಿರುವುದು ಪತ್ತೆಯಾಗಿದೆ.
ಕಳೆದ ಡಿಸೆಂಬರ್ 22 ರಂದು ಈ ಕಾರನ್ನು ಪಾರ್ಕಿಂಗ್ ಆವರಣದಲ್ಲಿ ನಿಲ್ಲಿಸಲಾಗಿತ್ತು. ಶವವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿರುವುದು ಕಂಡುಬಂದಿದೆ. ಕೊಲೆ ಶಂಕೆ ವ್ಯಕ್ತವಾಗುತ್ತಿದೆ. ಮೃತ ಮಹಿಳೆಯ ವಿವರ ಕಲೆ ಹಾಕಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಹಾಗೂ ತನಿಖೆಯ ನಂತರವಷ್ಟೆ ಮಹಿಳೆಯ ಸಾವಿಗೆ ಸ್ಪಷ್ಟ ಕಾರಣ ತಿಳಿದುಬರಬೇಕಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story