ಧರ್ಮ ಇಲ್ಲದೆ ರಾಜಕೀಯ ಅರ್ಥಹೀನ: ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ
ವಡೋದರಾ, ಜ. 3: ಧರ್ಮ ಜನರಿಗೆ ಮಾರ್ಗದರ್ಶನ ನೀಡುವ ‘ನೀತಿ ಸಂಹಿತೆ’ಯಂತೆ ಎಂದು ಶುಕ್ರವಾರ ವ್ಯಾಖ್ಯಾನಿಸಿರುವ ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಧರ್ಮ ಇಲ್ಲದ ರಾಜಕೀಯ ಅರ್ಥಹೀನ ಎಂದಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿನಾರಾಯಣ ಪಂಥದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ರಾಜಕೀಯಕ್ಕೆ ಧರ್ಮದ ಅವಶ್ಯಕತೆ ಇದೆ ಎಂದರು. ಸಮಾಜದಲ್ಲಿ ಒಂದು ಪ್ರಶ್ನೆಯನ್ನು ಪದೇ ಪದೇ ಕೇಳಲಾಗುತ್ತದೆ. ಧರ್ಮ ಹಾಗೂ ರಾಜಕೀಯದ ನಡುವಿನ ಸಂಬಂಧ ಏನು? ಎಂಬುದು. ಧರ್ಮ ಇಲ್ಲದೆ ರಾಜಕೀಯ ವಿವೇಕ ರಹಿತ ಎಂದು ನನ್ನ ದೃಢ ನಂಬಿಕೆ. ಧರ್ಮ ಇಲ್ಲದೆ ರಾಜಕೀಯಕ್ಕೆ ಅರ್ಥ ಇಲ್ಲ. ಅದೆರಡೂ ಒಟ್ಟಾಗಿ ಸಾಗಬೇಕು ಎಂದು ನಡ್ಡಾ ಹೇಳಿದರು.
ಧರ್ಮ ಅಂದರೆ ನೀತಿ ಸಂಹಿತೆ. ಅದು ನಮಗೆ ಏನು ಮಾಡಬೇಕು. ಏನು ಮಾಡಬಾರದು ಎಂದು ಹೇಳುತ್ತದೆ. ಯಾವುದು ಉತ್ತಮ ಯಾವುದು ಅಲ್ಲ ಎಂಬ ವ್ಯತ್ಯಾಸವನ್ನು ಗುರುತಿಸುವ ವಿವೇಕವನ್ನು ಧರ್ಮ ನಮಗೆ ನೀಡುತ್ತದೆ. ರಾಜಕೀಯಕ್ಕೆ ಧರ್ಮ ಬೇಕು ಎಂದು ನಡ್ಡಾ ಹೇಳಿದರು. ಋಣಾತ್ಮಕತೆ ಹರಡುವ ಮೂಲಕ ಪ್ರಧಾನಿ ಅವರನ್ನು ನಿಲ್ಲಿಸಲು ವಿರೋಧಿಗಳು ಪ್ರಯತ್ನಿಸುತ್ತಿರುವ ಸಂದರ್ಭ ಪ್ರಧಾನಿ ಅವರು ಇನ್ನಷ್ಟು ಶಕ್ತಿಯಿಂದ ಮುಂದೆ ಸಾಗುತ್ತಾರೆ ಹಾಗೂ ಪ್ರತಿಯೊಬ್ಬರನ್ನೂ ಅಭಿವೃದ್ಧಿಯೊಂದಿಗೆ ಕರೆದೊಯ್ಯುತ್ತಾರೆ ಎಂದು ನಡ್ಡಾ ಹೇಳಿದರು.