ಮಹಾರಾಷ್ಟ್ರ ಸಚಿವ ಸಂಪುಟದ ಖಾತೆ ಹಂಚಿಕೆ: ಎನ್ಸಿಪಿಗೆ ಗೃಹ, ಹಣಕಾಸು ಸಹಿತ ಸಿಂಹಪಾಲು
ಮುಂಬೈ, ಜ.5: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳ ಬಳಿಕ ರವಿವಾರ ಅಧಿಕೃತವಾಗಿ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದೆ. ಉಪ ಮುಖ್ಯಮಂತ್ರಿಯಾಗಿರುವ ಎನ್ಸಿಪಿಯ ಅಜಿತ್ ಪವಾರ್ಗೆ ಹಣಕಾಸು ಹಾಗೂ ಯೋಜನಾ ಖಾತೆ ನೀಡಲಾಗಿದ್ದು, ಉದ್ಧವ್ ಠಾಕ್ರೆ ಪುತ್ರ ಆದಿತ್ಯಗೆ ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ಹಂಚಿಕೆ ಮಾಡಲಾಗಿದೆ.
ಗೃಹ ಸಚಿವ ಸ್ಥಾನ ಎನ್ಸಿಪಿ ಪಾಲಾಗಿದ್ದು, ನಾಗ್ಪುರದ ಪ್ರಮುಖ ನಾಯಕ ಅನಿಲ್ ದೇಶಮುಖ್ ಗೃಹ ಸಚಿವರಾಗಿರುತ್ತಾರೆ. ಶಿವಸೇನೆಯ ಏಕನಾಥ ಶಿಂಧೆ ನಗರಾಭಿವೃದ್ಧಿ ಸಚಿವಾಲಯವನ್ನು ನಿಭಾಯಿಸಲಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕ ಬಾಳಾಸಾಹೇಬ್ ಥೋರಟ್ ಕಂದಾಯ ಖಾತೆ ಗಿಟ್ಟಿಸಿಕೊಂಡಿದ್ದಾರೆ. ಸಚಿವರ ಖಾತೆ ಹಂಚಿಕೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿ ಪ್ರಮುಖ ಖಾತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಖಾತೆ ಹಂಚಿಕೆಗೆ ಸಂಬಂಧಿಸಿ ಒಮ್ಮತಕ್ಕೆ ಬಂದ ಬಳಿಕ ರವಿವಾರ ರಾಜ್ಯಪಾಲ ಬಿಎಸ್ ಕೊಶಿಯಾರಿ ಸಚಿವರಿಗೆ ಹಂಚಿರುವ ಖಾತೆಗಳ ಪಟ್ಟಿಗೆ ಅನುಮೋದನೆ ನೀಡಿದರು. ಶನಿವಾರ ಸಂಜೆ ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಅನುಮೋದನೆ ಸಿಕ್ಕಿರಲಿಲ್ಲ. ಪಟ್ಟಿಗೆ ಅನುಮೋದನೆ ನೀಡಲು ಒಂದು ದಿನ ವಿಳಂಬ ಮಾಡಿರುವ ರಾಜ್ಯಪಾಲರ ನಡೆಗೆ ಎನ್ಸಿಪಿ ಆಕ್ರೋಶ ವ್ಯಕ್ತಪಡಿಸಿತ್ತು. ಇದೇ ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದರು.ಮುಂಜಾನೆಯೇ ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದರು. ಇದೀಗ ಒಂದು ದಿನದ ಬಳಿಕ ಅನುಮೋದನೆ ನೀಡಿದ್ದು,ನಾಳೆಯಿಂದಲೆ ಸಚಿವರು ಕೆಲಸ ಶುರು ಮಾಡಲಿದ್ದಾರೆ ಎಂದು ಎನ್ಸಿಪಿ ತಿಳಿಸಿದೆ.