ಜಾಮಿಯಾದಲ್ಲಿ ಗುಂಡು ಹಾರಿಸಿದ್ದ ಪೊಲೀಸರು: ತನಿಖೆಯಿಂದ ಬಹಿರಂಗ
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ
ಹೊಸದಿಲ್ಲಿ, ಜ.5: ನಗರದ ನ್ಯೂ ಫ್ರೆಂಡ್ಸ್ ಕಾಲನಿಯಲ್ಲಿ ಡಿ.1ರಂದು ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ ನಡೆದಿದ್ದ ಹಿಂಸಾಚಾರದ ಕುರಿತು ದಿಲ್ಲಿ ಪೊಲೀಸರ ತನಿಖೆಯು ಇಬ್ಬರು ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿದ್ದನ್ನು ಬಹಿರಂಗಗೊಳಿಸಿದೆ.
ಎಸಿಪಿ ದರ್ಜೆಯ ಇನ್ನೋರ್ವ ಅಧಿಕಾರಿಯ ಉಪಸ್ಥಿತಿಯಲ್ಲಿ ಗುಂಡುಗಳನ್ನು ಹಾರಿಸಲಾಗಿತ್ತು ಎಂದೂ ತನಿಖೆಯು ಬೆಟ್ಟು ಮಾಡಿದೆ.
ಪ್ರತಿಭಟನೆ ವೇಳೆ ಗುಂಡೇಟಿನಿಂದ ಗಾಯಗೊಂಡಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ತಾವು ಗುಂಡುಗಳನ್ನು ಹಾರಿಸಿರಲಿಲ್ಲ ಎಂದು ಹೇಳಿದ್ದರು. ಗುಂಡೇಟಿನಿಂದ ಗಾಯಗೊಂಡಿದ್ದ ವಿದ್ಯಾರ್ಥಿಗಳ ಪೈಕಿ ಅಜಾಝ್ ಅಹ್ಮದ್ ಮತ್ತು ಶುಐಬ್ ಖಾನ್ ಅವರನ್ನು ಸಫ್ದರಜಂಗ್ ಆಸ್ಪತ್ರೆಗೆ ಮತ್ತು ಮುಹಮ್ಮದ್ ತೈಮಿನ್ ಎಂಬವರನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿ.15ರಂದು ಸಿಎಎ ವಿರುದ್ಧ ಪ್ರತಿಭಟನಾ ಜಾಥಾ ನಡೆಸುತ್ತಿದ್ದ ಜಾಮಿಯಾ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದಿದ್ದು,ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಹಲವಾರು ವಿದ್ಯಾರ್ಥಿಗಳು ಮತ್ತು ಪೊಲೀಸರು ಗಾಯಗೊಂಡಿದ್ದರು.
ಗುಂಡು ಹಾರಿಸಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮತ್ತು ಎಸಿಪಿಯನ್ನು ಈಶಾನ್ಯ ದಿಲ್ಲಿ ಜಿಲ್ಲಾ ಪೊಲೀಸರು ನಡೆಸಿದ್ದ ತನಿಖೆಯಲ್ಲಿ ಗುರುತಿಸಲಾಗಿದೆ ಮತ್ತು ಗುಂಡು ಹಾರಾಟ ನಡೆದಿದ್ದು ದೃಢಪಟ್ಟಿದೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಅಧಿಕಾರಿರ್ಯೋವರು ತಿಳಿಸಿದರು. ಕೆಲವು ಪ್ರತಿಭಟನಾಕಾರರು ಹಿಂಸೆಯಲ್ಲಿ ತೊಡಗಿದ್ದಾಗ ಆತ್ಮರಕ್ಷಣೆಗಾಗಿ ತಾವು ಗುಂಡು ಹಾರಿಸಿದ್ದಾಗಿ ಅಧಿಕಾರಿಗಳು ವಿವರಣೆ ನೀಡಿದ್ದಾರೆನ್ನಲಾಗಿದೆ.
ಪೊಲೀಸ್ ಅಧಿಕಾರಿಗಳ ಹೇಳಿಕೆಗಳು ಈಶಾನ್ಯ ಜಿಲ್ಲಾ ಪೊಲೀಸರ ಕೇಸ್ ಡೈರಿಯಲ್ಲಿ ದಾಖಲಾಗಿವೆ. ಆದರೆ ಗುಂಡು ಹಾರಾಟದ ಉಲ್ಲೇಖವಿರುವ ಹೇಳಿಕೆಯು ಡಿ.16ರಂದು ತನಿಖೆ ಆರಂಭಿಸಿದ್ದ ಕ್ರೈಂ ಬ್ರಾಂಚ್ ವಿಶೇಷ ತನಿಖಾ ತಂಡಕ್ಕೆ ಇನ್ನಷ್ಟೇ ರವಾನೆಯಾಗಬೇಕಿದೆ. ಈ ತಂಡವು 10 ದಂಗೆ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದೆ.
ಜಾಮಿಯಾ ನಗರ ಮತ್ತು ನ್ಯೂ ಫ್ರೆಂಡ್ಸ್ ಕಾಲನಿಯಲ್ಲಿ ನಡೆದಿದ್ದ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಮೊದಲ ಎರಡು ಎಫ್ಐಆರ್ಗಳಲ್ಲಿ ಪೊಲೀಸರಿಂದ ಗುಂಡು ಹಾರಾಟವನ್ನು ಉಲ್ಲೇಖಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲು ಡಿಸಿಪಿ ಚಿನ್ಮಯ ಬಿಸ್ವಾಲ್ ನಿರಾಕರಿಸಿದ್ದಾರೆ.
ತನ್ಮಧ್ಯೆ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಜಾಮಿಯಾದ ಮೂವರು ವಿದ್ಯಾರ್ಥಿಗಳು ಚಿಕಿತ್ಸೆಯ ಬಳಿಕ ಬಿಡುಗಡೆಗೊಂಡಿದ್ದಾರೆ. ‘ಗಾಯಾಳುಗಳ ಶರೀರದಿಂದ ಹೊರತೆಗೆಯಲಾಗಿದ್ದ ಬಾಹ್ಯ ವಸ್ತುಗಳನ್ನು ದಿಲ್ಲಿ ಪೊಲೀಸರಿಗೆ ಕಳುಹಿಸಲಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವುದಷ್ಟೇ ನಮ್ಮ ಕೆಲಸವಾಗಿದೆ ’ಎಂದು ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸುನಿಲ ಗುಪ್ತಾ ಹೇಳಿದರೆ,ಬಾಹ್ಯವಸ್ತು ಗುಂಡು ಅಥವಾ ಆಶ್ರುವಾಯು ಶೆಲ್ ಆಗಿದೆಯೇ ಎನ್ನುವುದನ್ನು ಪೊಲೀಸರು ಪರಿಶೀಲಿಸುತ್ತಾರೆ ಎಂದು ಹೋಲಿ ಫ್ಯಾಮಿಲಿ ಆಸ್ಪತ್ರೆಯ ನಿರ್ದೇಶಕ ಫಾ.ಜಾರ್ಜ್ ಪಿ.ಎ.ತಿಳಿಸಿದರು.