ಯಾದಗಿರಿ: ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ದರೋಡೆಗೈಯುತ್ತಿದ್ದ ಮೂವರ ಬಂಧನ

ಸುರಪುರ: ತಾಲೂಕಿನ ಬಿಜಾಸಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ರಾತ್ರಿ ೩:೩೦ರ ಸುಮಾರಿಗೆ ಮೂರು ಜನ ದರೋಡೆಕೋರರು ಹೆದ್ದಾರಿ ಮೇಲೆ ಹೋಗುತ್ತಿರುವ ವಾಹನಗಳ ಮೇಲೆ ದಾಳಿ ಮಾಡಿ ಗಾಡಿಯಲ್ಲಿರುವವರಿಂದ ಹಣ ಕಿತ್ತಿಕೊಳ್ಳುತ್ತಿದ್ದ ಕಳ್ಳರನ್ನು ಸುರಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರವಿವಾರ ಡಿವಾಯ್ಎಸ್ಪಿ ಶಿವನಗೌಡ ಪಾಟೀಲ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶನಿವಾರ ರಾತ್ರಿ ಬಳ್ಳಾರಿಯಿಂದ ಸಿಂಧನೂರು ಶಹಾಪುರ ಮಾರ್ಗವಾಗಿ ಜೇವರ್ಗಿಗೆ ಹೋಗುತ್ತಿದ್ದ ಲಾರಿಯೊಂದನ್ನು ಬಿಜಾಸಪುರ ಬಳಿಯ ರಸ್ತೆಯ ತಿರುವಿನಲ್ಲಿ ಲಾರಿಯ ಗ್ಲಾಸಿಗೆ ರಾಡಿನಿಂದ ಹೊಡೆದಿದ್ದಾರೆ ಹಾಗು ಕಲ್ಲು ತೂರಿ ವಾಹನದ ಚಾಲಕ ಮತ್ತು ಕ್ಲೀನರ್ನಿಂದ ನಾಲ್ಕು ಸಾವಿರ ರೂಪಾಯಿ ಕಿತ್ತಿಕೊಂಡು ಪರಾರಿಯಾಗುತ್ತಿದ್ದಾಗ ಸ್ಥಳಕ್ಕೆ ಧಾವಿಸಿದ ಪೊಲೀಸರು ತಪ್ಪಿಸಿಕೊಂಡು ಓಡುತ್ತಿದ್ದ ಮೂವರು ದರೋಡೆಕೋರರನ್ನು ಬೆನ್ನಟ್ಟಿ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಪಿ.ಐ ಆನಂದರಾವ್ ಉಪಸ್ಥಿತರಿದ್ದರು.
ಈ ವಾಹನಕ್ಕಿಂತಲು ಮೊದಲು ಎರಡು ವಾಹನಗಳ ಮೇಲೆ ಇದೇ ರೀತಿಯ ದಾಳಿ ಯತ್ನ ನಡೆಸಿ ವಿಫಲರಾಗಿದ್ದಾರೆ. ಇವರಿಂದ ತಪ್ಪಿಸಿಕೊಂಡ ವಾಹನಗಳ ಚಾಲಕರು ಹತ್ತಿಗುಡೂರು ದಾಬಾ ಬಳಿಯಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಸ್.ಪಿ ಋಷಿಕೇಶ ಭಗವಾನ ಹಾಗು ಡಿವಾಯ್ಎಸ್ಪಿ ಶಿವನಗೌಡ ಪಾಟೀಲರ ಮಾರ್ಗದರ್ಶನದಲ್ಲಿ ಪಿ.ಐ ಆನಂದರಾವ್ ಅವರು ನೇತೃತ್ವ ವಹಿಸಿ ಪಿಎಸ್ಐ ಶರಣಪ್ಪ ಹವಲ್ದಾರ, ಎ.ಎಸ್.ಐ ಸುರೇಶ , ಹೆಚ್.ಸಿ ಚಂದ್ರಶೇಖರ, ಬಸವರಾಜ, ಸುಭಾಸ ಹಾಗು ಸೋಮಯ್ಯ ಇವರುಗಳ ತಂಡವು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ನಾಲ್ಕು ಸಾವಿರ ರೂಪಾಯಿ ಒಂದು ಪಲ್ಸರ್ ಮೋಟರ್ ಬೈಕ್ ಹಾಗು ಕಳ್ಳತನಕ್ಕೆ ಬಳಸಿದ್ದ ರಾಡು ಮತ್ತು ಕಲ್ಲುಗಳನ್ನು ಜಪ್ತಿ ಮಾಡಿದ್ದಾರೆ. ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೂರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.







