ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹಿಸಿ: ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ

ಬೆಂಗಳೂರು, ಜ. 6: ಮುಂದಿನ ಮೂರು ತಿಂಗಳಲ್ಲಿ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ, ತೆರಿಗೆ ವಂಚನೆ ಬಗ್ಗೆ ಹೆಚ್ಚಿನ ಗಮನಕೊಟ್ಟು, ನಿರೀಕ್ಷೆ ಮೀರಿದ ತೆರಿಗೆ ಸಂಗ್ರಹ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ಬಜೆಟ್ ಸಿದ್ದತೆ ಪೂರ್ವಭಾವಿಯಾಗಿ ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೋಂದಣಿ-ಮುದ್ರಾಂಕ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡುತ್ತಿದ್ದರು.
ಗುರಿ ಸಾಧನೆ: ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ 76,046 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇದ್ದು, 2019ರ ಡಿಸೆಂಬರ್ ಅಂತ್ಯಕ್ಕೆ 55,984 ಕೋಟಿ ರೂ. ತೆರಿಗೆ ಸಂಗ್ರಹ ಆಗಿದ್ದು, ಶೇ. 73.6 ರಷ್ಟು ಸಾಧನೆಯಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ರಾಷ್ಟ್ರದಲ್ಲೆ ಮುಂಚೂಣಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಸಂಗ್ರಹದಲ್ಲಿ ಇಲ್ಲಿಯ ವರೆಗೆ ರಾಜ್ಯದ ಸಾಧನೆ 61,245 ಕೋಟಿ ರೂ. ಇದ್ದು, ರಾಷ್ಟ್ರದಲ್ಲೆ ಎರಡನೆ ಸ್ಥಾನದಲ್ಲಿದ್ದೇವೆ. ರಾಜ್ಯದ ಜಿಎಸ್ಟಿ ಬೆಳವಣಿಗೆ ಶೇ.14.2ರಷ್ಟು ಇದೆ ಎಂದು ಅವರು ವಿವರಿಸಿದರು.
ದೊಡ್ಡ ಪ್ರಮಾಣದಲ್ಲಿ ಬಸ್ಗಳಲ್ಲಿ ಸರಕು ಸಾಗಣೆ ಮಾಡುವ ಮೂಲಕ ಮತ್ತು ಹೊಟೇಲ್, ರೆಸ್ಟೋರೆಂಟ್ಗಳಲ್ಲಿ ಮತ್ತಿತರ ವಾಣಿಜ್ಯ ಚಟುವಟಿಕೆಗಳಲ್ಲಿ ಜಿಎಸ್ಟಿ ತೆರಿಗೆ ವಂಚನೆ ನಡೆಯುತ್ತಿರುವ ಕುರಿತೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ರಾಜ್ಯವೇ ಪ್ರಥಮ: ತಡವಾಗಿ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವ ಮತ್ತು ರಿಟರ್ನ್ಸ್ ಫೈಲ್ ಮಾಡದೇ ಇರುವವರ ವ್ಯಾಪಾರ ಸ್ಥಳಗಳಿಗೆ ಖುದ್ದು ಭೇಟಿ ನೀಡಿ 551.44 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಇ-ವೇ ತಪಾಸಣೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಸಂಚಾರಿ ಜಾಗೃತಿ ದಳಗಳ ಮೂಲಕ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
2020ರ ಎಪ್ರಿಲ್ 1ರಿಂದ ಹೊಸ ಜಿಎಸ್ಟಿ ರಿಟರ್ನ್ಸ್ ನಮೂನೆ ಜಾರಿಗೆ ಬರಲಿದೆ. ಹೊಸ ನಮೂನೆಯನ್ನು ತೆರಿಗೆದಾರರಲ್ಲಿ ಜನಪ್ರಿಯಗೊಳಿಸಲು ಕ್ರಮ ವಹಿಸಲಾಗುತ್ತಿದೆ. ನಮೂನೆ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
ಅಬಕಾರಿ ಗುರಿ ಸಾಧನೆ: ಅಬಕಾರಿ ಇಲಾಖೆಯಲ್ಲಿ ಈ ವರ್ಷ 20,950 ಕೋಟಿ ರೂ.ವಾರ್ಷಿಕ ರಾಜಸ್ವ ಸಂಗ್ರಹ ಗುರಿ ನಿಗದಿಯಾಗಿದ್ದು, ಈ ವರೆಗೆ 16,187 ಕೋಟಿ ರೂ.ರಾಜಸ್ವ ಸಂಗ್ರಹ ಆಗಿದ್ದು, ಶೇ.77.23ರಷ್ಟು ಗುರಿ ಸಾಧನೆ ಆಗಿದೆ ಎಂದರು.
ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ 1,165 ಕೋಟಿ ರೂ.ತೆರಿಗೆ ಸಂಗ್ರಹವಾಗಿದ್ದು, ಬೆಳವಣಿಗೆ ದರ ಶೇ.7.76ರಷ್ಟಿದೆ. ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ, ಗುರಿ ಸಾಧನೆ ಆಗಿದೆ ಎಂಬುದು ವಿಶೇಷ. ಅಬಕಾರಿ ಇಲಾಖೆಯ 39 ಸೇವೆಗಳು ಸಕಾಲ ಯೋಜನೆ ವ್ಯಾಪ್ತಿಗೆ ತರಲಾಗಿದ್ದು, 25ಸೇವೆಗಳನ್ನು ಆನ್ಲೈನ್ನಲ್ಲಿ ಒದಗಿಸಲಾಗುತ್ತದೆ ಎಂದರು.
ಚಿಲ್ಲರೆ ಮದ್ಯ ಮಾರಾಟ ಲೈಸನ್ಸ್ಗಳು ಹಾಗೂ ಮದ್ಯ ಉತ್ಪಾದನಾ ಘಟಕಗಳ ಲೈಸನ್ಸ್ಗಳನ್ನು ಆನ್ಲೈನ್ ಮೂಲಕ ನವೀಕರಣ ಮಾಡಲಾಗುತ್ತಿದೆ. ಅಲ್ಲದೆ, ಅಕ್ರಮ ಮಾರಾಟ, ತೆರಿಗೆ ವಂಚನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಸಾರಿಗೆ ಇಲಾಖೆಯಲ್ಲಿ 7,100 ಕೋಟಿ ರೂ.ತೆರಿಗೆ ಸಂಗ್ರಹ ಗುರಿ ಹೊಂದಿದ್ದೇವೆ. ಇಲಾಖೆಯಿಂದ 6,601 ಕೋಟಿ ರೂ. ಹಾಗೂ ಸಾರಿಗೆ ಸಂಸ್ಥೆಗಳಿಂದ 498.04 ಕೋಟಿ ರೂ.ಆದಾಯದ ಗುರಿ ಹೊಂದಲಾಗಿದೆ. ಈ ವರೆಗೆ 4864.80 ಕೋಟಿ ರೂ.ರಾಜಸ್ವ ಸಂಗ್ರಹ ಆಗಿದೆ ಎಂದರು.
ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಹಾಗೂ ತೆರಿಗೆ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದನ್ನು ಬೇರೆ ಮೂಲಗಳಿಂದ ಸರಿದೂಗಿಸಲು ಪ್ರಯತ್ನಿಸಲಾಗುವುದು ಎಂದು ಯಡಿಯೂರಪ್ಪ ವಿವರ ನೀಡಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 11,828 ಕೋಟಿ ರೂ.ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ಹೊಂದಿದ್ದು, ಈ ವರೆಗೆ 8,297 ಕೋಟಿ ರೂ.ಸಂಗ್ರಹ ಆಗಿದ್ದು, ಕಳೆದ ವರ್ಷಕ್ಕಿಂತ 410.75 ಕೋಟಿ ರೂ.ಹೆಚ್ಚಳವಾಗಿದೆ ಎಂದು ಅವರು ಮಾಹಿತಿ ನೀಡಿದರು.
ತೆರಿಗೆ ಖೋತಾ:
‘ವಾಹನಗಳ ಮಾರಾಟ ಕುಸಿದಿರುವುದರಿಂದ ಸುಮಾರು 460.20 ಕೋಟಿ ರೂ.ಕೊರತೆ ಆಗಿದೆ. ಸಾರಿಗೆ ಇಲಾಖೆಯಲ್ಲಿ ವರ್ಷಾಂತ್ಯಕ್ಕೆ ಸುಮಾರು 300 ಕೋಟಿ ರೂ.ಗಳಷ್ಟು ಕೊರತೆಯಾಗುವ ಸಾಧ್ಯತೆ ಇದೆ’
-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ







