ಪೌರತ್ವ ಕಾಯ್ದೆ ಮುಂದಿನ ನಾಗರಿಕರಿಗೆ ಮಾರಕ: ಸೆಂಥಿಲ್

ಕಲಬುರಗಿ: ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿಯೊಂದಿಗೆ ಹೊಸ ಪೌರತ್ವ ಕಾಯ್ದೆ ಜಾರಿಗೆ ಮಾಡಲು ಹೊರಟಿದೆ. ಹೊಸ ಪೌರತ್ವ ಕಾಯ್ದೆಯು ಭವಿಷ್ಯದಲ್ಲಿ ನಾಗರಿಕರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಅಭಿಪ್ರಾಯ ಪಟ್ಟರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಎ ಮತ್ತು ಎನ್ಆರ್ಸಿ ಜಾರಿಗಾಗಿ ಕೇಂದ್ರ ಎಲ್ಲಾ ರೀತಿಗಳ ತಂತ್ರ ಅನುಸರಿಸುತ್ತಿದೆ. ಸಂವಿಧಾನ ಉಳಿಯಬೇಕಾದರೆ ಎಲ್ಲರೂ ಒಂದಾಗಿ ಪೌರತ್ವ ಕಾಯ್ದೆಯನ್ನು ವಿರೋಧಿಸಬೇಕು. ಇಲ್ಲವಾದಲ್ಲಿ ಹಂತಹಂತವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ದೇಶದ ಜನರು ತಮ್ಮ ನಾಗರಿಕತ್ವವನ್ನೇ ಕಳೆದುಕೊಳ್ಳುವಂತ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ಎನ್.ಆರ್.ಸಿ ಮತ್ತು ಎನ್.ಪಿ.ಎ.ಗೆ ಯಾವುದೇ ಸಂಬಧವಿಲ್ಲ ಎಂದು ಅಪ್ಪಟ ಸುಳ್ಳು ಹೇಳುತ್ತಿದ್ದಾರೆ. ಆದರೆ ಅವರ ಮಾತಿನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ನೆರೆಹಾವಳಿಯಿಂದ ಮನೆಗಳು, ದಾಖಲೆಗಳು ಕಳೆದುಕೊಂಡಿದ್ದಾರೆ. ಈಗ ಪೌರತ್ವ ಸಾಭೀತು ಪಡಿಸಲು ಅವರ ಹತ್ತಿರು ಯಾವುದೇ ದಾಖಲೆ ಇಲ್ಲದಂತಾಗಿದೆ. ಶಾಲಾ ವಿದ್ಯಾರ್ಥಿಗಳ ದಾಖಲೆಗಳೇ ನೀರಿನಲ್ಲಿ ಕೊಚ್ಚಿ ಹೋಗಿವೆ. ನಾವು ಈ ದೇಶದ ನಾಗರಿಕರು ಎನ್ನುವದಕ್ಕೆ ಸಾಕ್ಷಿಯೇ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಕೆ. ನೀಲಾ, ಮಹೇಶ ರಾಠೋಡ ಹಾಗೂ ಇತರರು ಉಪಸ್ಥಿತರಿದ್ದರು.







