ಅಮಿತ್ ಶಾ ಜೆಎನ್ಯು ಮೇಲಿನ ದಾಳಿ ಹೊಣೆ ಹೊರಲಿ: ಹಿರೇಮಠ್ ಆಗ್ರಹ

ಹುಬ್ಬಳ್ಳಿ, ಜ.7: ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಮಾಜ ಪರಿವರ್ತನಾ ವೇದಿಕೆಯ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಎನ್ಯು ವಿವಿಯ ಕ್ಯಾಂಪಸ್ನೊಳಗೆ ನಡೆದ ಘಟನೆ ಶೈಕ್ಷಣಿಕ ವ್ಯವಸ್ಥೆಯೇ ತಲೆ ತಗ್ಗಿಸುವಂತೆ ಮಾಡಿದೆ. ಈ ಕುರಿತು ಗೃಹ ಮಂತ್ರಿ ವೌನವಹಿಸಿರುವುದು ಸರಿಯಲ್ಲ ಎಂದರು.
ಈ ನಾಡಿನ ಮೌಲ್ಯಗಳನ್ನು ಎತ್ತಿ ಹಿಡಿದಂತಹ ಶರಣರು, ಸಂತರು, ಸೂಫಿಗಳಾದ ಬುದ್ದ, ಬಸವ,ಅಂಬೇಡ್ಕರ್ ಬಾಳಿದ ಈ ನಾಡಿನಲ್ಲಿ ಸ್ವತಂತ್ರದ ಸಮಾನತೆ ಮತ್ತು ನ್ಯಾಯವನ್ನು ಗಾಳಿಗೆ ತೂರಿ ನಡೆಸಿರುವ ದಾಳಿ ಅಮಾನವೀಯ. ದಿಲ್ಲಿ ಪೊಲೀಸರು ನಡೆಸಿದ ಈ ದಾಳಿಯನ್ನು ಕಾನೂನು ಕ್ರಮ ಕೈಗೊಳ್ಳದೇ ನೋಡುತ್ತ ಕುಳಿತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕೂಡಲೇ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಲು ಹೊರಟಿರುವುದು ದುರದೃಷ್ಟಕರ ಸಂಗತಿಯಾಗಿದೆ. ಅಕ್ರಮ ಸಂಪಾದನೆ ಮಾಡಿ ಜೈಲಿನಲ್ಲಿ ಇರುವಂತವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದು ಕಿಡಿಕಾರಿದರು.







