ವಿನಯಕುಮಾರ್ ಸೊರಕೆಗೆ ಬೆದರಿಕೆ: ಬಿಲ್ಲವ ಮುಖಂಡರ ಖಂಡನೆ
ಉಡುಪಿ, ಜ.7: ಇತ್ತೀಚೆಗೆ ದೂರವಾಣಿ ಕರೆಯ ಮೂಲಕ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರನ್ನುದ್ದೇಶಿಸಿ ಕೀಳುಮಟ್ಟದ ಪದವನ್ನು ಬಳಸಿ ಮಾತಾಡಿದ ವ್ಯಕ್ತಿಯ ವಿರುದ್ಧ ಬಿಲ್ಲವ ಸಮಾಜದ ವಿವಿಧ ಮುಖಂಡರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ಸೌಹಾರ್ದ ನೆಲೆಸಬೇಕು. ಸಮಾಜದಲ್ಲಿ ಪ್ರತಿ ಜಾತಿ ಪ್ರತಿ ಧರ್ಮದವರು ಒಗ್ಗಟ್ಟಿನಲ್ಲಿ ಇರಬೇಕು. ಭವಿಷ್ಯದಲ್ಲಿ ಸಾಮರಸ್ಯ ನೆಲೆಸಬೇಕು ಎಂಬ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಎಲ್ಲಾ ಪಕ್ಷಗಳ ಬಿಲ್ಲವ ಮುಖಂಡರು ಸೇರಿ ಮಾಡಿದ ನಿರ್ಣಯದ ಪ್ರಕಾರ ಬಿಲ್ಲವ-ಮುಸ್ಲಿಂ ಸಾಮರಸ್ಯ ಸಮಾವೇಶದ ಆಯೋಜನೆ ಮಾಡಲಾಗಿದ್ದು ಇದರ ವಿರುದ್ಧ ಕೆಲವು ಸ್ಥಾಪಿತ ಹಿತಾಸಕ್ತಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಮೊಬೈಲ್ನಲ್ಲಿ ಅವಾಚ್ಯ ಶಬ್ದಗಳ ಮೂಲಕ ನಿಂದಿಸಿ ಮತ್ತು ಅವರಿಗೆ ಜೀವ ಬೆದರಿಕೆ ಹಾಕಿರುವುದು ಖಂಡನೀಯ ಹಾಗೂ ಇದೊಂದು ಹೇಡಿತನದ ಪರಮಾವಧಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಸಂಸ್ಕೃತ ಸಮಾಜದಲ್ಲಿ ಮರ್ಯಾದೆಯಿಂದ, ನಾರಾಯಣ ಗುರುಗಳ ತತ್ವವನ್ನು ಅಳವಡಿಸಿಕೊಂಡು, ಕೋಟಿ ಚೆನ್ನಯರ ಸತ್ಯವನ್ನು ಪಾಲಿಸಿಕೊಂಡು ತಮ್ಮ ಜೀವನ ನಡೆಸುವ ಬಿಲ್ಲವರ ಒಗ್ಗಟ್ಟನ್ನು ಮುರಿದು ಸಮಾಜದಲ್ಲಿ ಅಶಾಂತಿಯನ್ನು ಹರಡುವ ಶಕ್ತಿಗಳು ಇದರ ಹಿಂದೆ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಹಾಗೂ ಮುಂದಿನ ದಿನಗಳಲ್ಲಿ ಈ ಷಡ್ಯಂತ್ರ ಮಾಡುವ ಶಕ್ತಿಗಳು ಇದರ ಪರಿಣಾಮನ್ನು ಎದುರಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಿಲ್ಲವ ಮುಖಂಡರಾದ ಸದಾಶಿವ ಅಮೀನ್ಕಟ್ಟೆಗುಡ್ಡೆ, ಪ್ರಶಾಂತ್ ಪೂಜಾರಿ, ಸಾಯಿರಾಜ್ ಪೂಜಾರಿ, ತಾರಾನಾಥ ಸುವರ್ಣ, ಗಿರೀಶ್ ಕುಮಾರ್, ದಿವಾಕರ ಬೊಳ್ಜೆ, ಶೇಖರ್ ಕೋಟ್ಯಾನ್, ಚರಣ್ ವಿಠಲ್ ಕುದಿ, ಲಕ್ಷ್ಮಣ ಪೂಜಾರಿ, ದಿನೇಶ್ ಜತ್ತನ್, ಆನಂದ ಬಂಗೇರ, ಶಬರೀಶ್ ಪೂಜಾರಿ, ಮಲ್ಲಿಕಾ ಪೂಜಾರಿ, ಪುಷ್ಪಾ ಅಂಚನ್, ಭಾಸ್ಕರ್ ಕೋಟ್ಯಾನ್, ಮಿಥುನ್ ಅಮೀನ್, ಆರ್.ಕೆ. ರಮೇಶ್ ಪೂಜಾರಿ, ರಾಜೇಶ್ ಪಾಲನ್, ಧನ್ಪಾಲ್, ಸುಪ್ರೀತ್ ಸುವರ್ಣ, ವಿಜಯ ಪೂಜಾರಿ, ಸುರೇಂದ್ರ ಪೂಜಾರಿ ಮೊದಲಾದವರು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.







