‘ಉಡುಪಿ ಪರ್ಯಾಯ ನಾಡಹಬ್ಬದಂತೆ ವೈಭವದಿಂದ ನಡೆಯಲಿ’
ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ

ಉಡುಪಿ, ಜ.7: ಉಡುಪಿ ಪರ್ಯಾಯವನ್ನು ಯಾವುದೇ ಲೋಪದೋಷ ಗಳಿಲ್ಲದೇ ನಾಡಹಬ್ಬದಂತೆ ವೈಭವದಿಂದ ನಡೆಸಬೇಕು ಹಾಗೂ ಉಡುಪಿಯ ಪರ್ಯಾಯದಲ್ಲಿ ಭಾಗಿಯಾಗಲು ಹೊರ ಜಿಲ್ಲೆಯಿಂದ ಸಾಗರೋಪಾದಿಯಲ್ಲಿ ಬರುವ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳಾ ಗದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಹಾಗೂ ಸಂಬಂಧ ಪಟ್ಟ ಇಲಾಖೆಗಳಿಗೆ, ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆಗಳನ್ನು ನೀಡಿದ್ದಾರೆ.
ಮಂಗಳವಾರ ಸಂಜೆ ಉಡುಪಿಯ ರಥಬೀದಿಯಲ್ಲಿರುವ ಅದಮಾರು ಅತಿಥಿ ಗೃಹದಲ್ಲಿ ನಡೆದ ಪರ್ಯಾಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ಪರ್ಯಾಯಕ್ಕೆ ರಾಜ್ಯ ಸರಕಾರದ ವತಿಯಿಂದ 3 ಕೋಟಿ ರೂ., ಜಿಲ್ಲಾಡಳಿತ, ನಗರ ಸಭೆ ಸೇರಿದಂತೆ ಒಟ್ಟು 11 ಕೋಟಿ ರೂ. ಗಳ ಅನುದಾನ ನೀಡಲಾಗಿದ್ದು,ಯಾವುದೇ ಕುಂದುಕೊರತೆ ಬಾರದಂತೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ದೊಡ್ಡ ಪ್ರಮಾಣದಲ್ಲಿ ಅಗಮಿಸುವ ಭಕ್ತಾದಿಗಳಿಗೆ ವಸತಿ, ಕುಡಿ ಯುವ ನೀರು, ಶೌಚಾಲಯ ಹಾಗೂ ಸಂಚಾರ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಒದಗಿಸ ಬೇಕು. ಪರ್ಯಾಯಕ್ಕೆ ಪೂರಕವಾಗಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಕೆಲಸಗಳನ್ನು ನಿರ್ವಹಿಸಿ ಪರ್ಯಾಯವನ್ನು ಯಶಸ್ವಿ ಗೊಳಿಸಬೇಕು ಎಂದ ವರು ಹೇಳಿದರು.
ಶಾಸಕ ರಘಪತಿ ಭಟ್ ಮಾತನಾಡಿ, ಜ.8ರ ಬುಧವಾರದಂದು ಅಪರಾಹ್ನ 2 ಗಂಟೆಗೆ ಶ್ರೀಈಶಪ್ರಿಯ ತೀರ್ಥರು ಜೋಡುಕಟ್ಟೆ ಯಿಂದ ಮೆರವಣಿಗೆಯೊಂದಿಗೆ ಪುರ ಪ್ರವೇಶಿಸಲಿದ್ದಾರೆ. ರಾತ್ರಿ 8 ಗಂಟೆಗೆ ರಥಬೀದಿ ಯಲ್ಲಿ ಶ್ರೀಈಶಪ್ರಿಯ ತೀರ್ಥರಿಗೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾದೀಶ ತೀರ್ಥರಿಂದ ಪೌರ ಸನ್ಮಾನ ನೆರವೇರುವುದು. ಇದೇ ಮೊದಲ ಬಾರಿ ಜ.15ರಂದು ಅದಮಾರು ಮಠ ಮತ್ತು ಮಲ್ಪೆಭಾಗದಿಂದ ಮಾತ್ರ ಹೊರಕಾಣಿಕೆ ಸ್ವೀಕರಿಸಲಾಗುವುದು. ಪರ್ಯಾಯದ ಬಳಿಕ ಪ್ರತೀ 15 ದಿನಗಳಿಗೊಮ್ಮೆ (ಏಕಾದಶಿಯನ್ನ ಹೊರತು ಪಡಿಸಿ ರವಿವಾರದಂದು) ಹೊರಕಾಣಿಕೆಗಳನ್ನು ಸ್ವೀಕರಿಲಾಗುವುದು ಎಂದು ವಿವರಿಸಿದರು.
ಜ.18ರಂದು ಬೆಳಗ್ಗಿನ ಜಾವ 2 ಗಂಟೆಗೆ ಪರ್ಯಾಯ ಮೆರವಣಿಗೆ ಆರಂಭಗೊಳ್ಳಲಿದೆ. ಅಪರಾಹ್ನ 2:30ಕ್ಕೆ ಸರಿಯಾಗಿ ಪರ್ಯಾಯ ದರ್ಬಾರನ್ನು ಆಯೋಜಿಸಲಾಗಿದ್ದು, ದರ್ಬಾರಿನ ಅಧ್ಯಕ್ಷತೆಯನ್ನು ಶ್ರೀಈಶಪ್ರಿಯ ತೀರ್ಥರು ವಹಿಸಲಿದ್ದಾರೆ. ಮುಖ್ಯಮಂತ್ರಿಗಳು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕ ಗಣ್ಯರು ಬಾಗವಹಿಸಲಿದ್ದಾರೆ. ಜ.18 ರಿಂದ 22ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿಯ ಪರ್ಯಾಯದಲ್ಲಿ ಪರಿಸರ ಸ್ನೇಹಿ ಬ್ಯಾನರ್ ಗಳನ್ನು ಮಾತ್ರ ಬಳಸಲಾಗಿರುವುದು ವಿಶೇಷ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಪರ್ಯಾಯ ಹಿನ್ನಲೆ ಯಲ್ಲಿ ನಗರದ ರಸ್ತೆಗಳ ದುರಸ್ತಿ ಕಾರ್ಯ ನಡೆದಿದ್ದು, ದಾರಿ ದೀಪಗಳ ದುರಸ್ಥಿ, ನೈರ್ಮಲ್ಯ ನಿವರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನೈರ್ಮಲ್ಯತೆ ದೃಷ್ಟಿಯಿಂದ ಶೌಚಾಲಯಗಳ ನಿರ್ಮಾಣ, ಪೊಲೀಸ್ ಇಲಾಖೆಯಿಂದ ಬೆಂಗಾವಲು ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳಿಂದ ಇಲಾಖಾ ಕಾರ್ಯಕ್ರಮಗಳನ್ನು ಬಿಂಬಿಸುವ ಟ್ಯಾಬ್ಲೋಗಳನ್ನು ಸಿದ್ಧಗೊಳಿ ಸಲಾಗಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಎಲ್ಇಡಿ ಪರದೆ ಮೂಲಕ ಉಡುಪಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರದರ್ಶಿಸಲಾಗುವುದು, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದರು.
ಹೊರ ರಾಜ್ಯಗಳಿಂದ ಬರುವ ಭಕ್ತರಿಗಾಗಿ ಕೆಎಸ್ಆರ್ಟಿಸಿ ವತಿಯಿಂದ ಟೂರ್ ಪ್ಯಾಕೇಜ್ ಮಾಡುವ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಪರ್ಯಾಯಕ್ಕಾಗಿ ಕಳೆದ ಮೂರು ತಿಂಗಳಿನಿಂದ ತಯಾರಿಗಳನ್ನು ಮಾಡಲಾಗುತಿದ್ದು, ಅಂತಿಮ ಹಂತದ ಕೆಲಸಗಳನ್ನು ಶೀಘ್ರದಲ್ಲಿ ಮುಗಿಸಲಾ ಗುವುದು ಎಂದರು.
ನಗರವನ್ನು ಸುಂದರವಾಗಿರಿಸಿ, ನೈರ್ಮಲ್ಯ ಕಾಪಾಡಲು ಟೆಂಡರ್ ಕರೆದಿದ್ದು, ಕಾರ್ಯಗಳು ಭರದಿಂದ ಸಾಗುತ್ತಿದೆ.12ಸ್ಥಳಗಳಲ್ಲಿ 30ಕ್ಕಿಂತ ಹೆಚ್ಚು ಶೌಚಾಲಯ ಗಳನ್ನು ಹಾಗೂ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಿಲ್ಲಾಡಳಿತ ಪರ್ಯಾಯವನ್ನು ಯಶಸ್ವಿಗೊಳಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಜಿಪಂ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಕಾರ್ಕಳ ಶಾಸಕ ಸುನೀಲ್ಕುಮಾರ್, ಎಸ್ಪಿ ವಿಷ್ಣುವರ್ಧನ್, ನಗರಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಶ್ರೀಕೃಷ್ಣ ಸೇವಾ ಸಮಿತಿಯ ಸದಸ್ಯರು, ಮಠದ ಸಿಬ್ಬಂದಿಗಳು, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು. ಬಳಿಕ ಸಚಿವ ಬಸವರಾಜ ಬೊಮ್ಮಾಯಿ ಶಾಸಕರೊಂದಿಗೆ ಅದಮಾರು ಮಠಕ್ಕೆ ಭೇಟಿ ನೀಡಿ ಶ್ರೀವಿಶ್ವಪ್ರಿಯತೀರ್ಥರ ಆರ್ಶೀವಾದ ಪಡೆದರು.







