ಕೃಷಿಯ ಬಗ್ಗೆ ಕೀಳರಿಮೆ ಸಲ್ಲದು: ಶಾಸಕ ರಾಜೇಶ್ ನಾಯ್ಕ್
ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ಮಾಹಿತಿ ಶಿಬಿರ

ಬಂಟ್ವಾಳ, ಜ. 7: ಕೃಷಿಯ ಜೊತೆ ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡಿದರೆ ಇದಕ್ಕಿಂತ ಲಾಭದಾಯಕ ಉದ್ಯೋಗ ಮತ್ತೊಂದಿಲ್ಲ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ದ.ಕ. ಜಿಪಂ ಪಶುಸಂಗೋಪನೆ ಮತ್ರು ಪಶುವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ, ದ.ಕ. ಹಾಲು ಒಕ್ಕೂಟ ನಿ.ಕುಲಶೇಖರ ಮಂಗಳೂರು, ಹಾಲು ಉತ್ಪಾದಕರ ಸಹಕಾರ ಸಂಘ ನಿಗಮ ವಾಮದಪದವು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ನಿ. ವಗ್ಗ ಇದರ ಸಂಯುಕ್ತ ಆಶ್ರಯದಲ್ಲಿ ವಗ್ಗ-ವಾಮದಪದವು ಹರ್ಕಾಡಿ ರಾಮೊಟ್ಟು ಮೈದಾನದಲ್ಲಿ ಮಂಗಳವಾರ ನಡೆದ "ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರೈತರಿಗೆ ಮಿಶ್ರತಳಿಗಳ ಜಾರುವಾರುಗಳ ಬೇಡಿಕೆಯಿದ್ದರೂ ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೆಎಂಎಫ್ ವತಿಯಿಂದ ಹೈನುಗಾರಿಕೆಗಾಗಿ ಜಾರುವಾರುಗಳನ್ನು ಪೂರೈಕೆ ಮಾಡುವ ಕಾರ್ಯ ಮಾಡಬೇಕಾಗಿದೆ ಎಂದ ಅವರು, ಯುವ ಜನತೆಗೆ ಕೃಷಿಯ ಬಗ್ಗೆ ಹೆಚ್ಚು ಒಳವು ತೋರುವ ಕಾರ್ಯ ಆಗಬೇಕಾಗಿದ್ದು, ಕೃಷಿಯ ಬಗ್ಗೆ ಕೀಳರಿಮೆ ಸಲ್ಲದು ಎಂದರು.
ಜಿಪಂ ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ, ಕ್ಷೇತ್ರದ ಶಾಸಕರು ಓರ್ವ ಕೃಷಿಕರಾಗಿದ್ದು, ಕೃಷಿಗೆ ಯೋಗ್ಯವಿಲ್ಲದ ಪ್ರದೇಶ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ದನ, ಕರುಗಳ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸುವ ಸಲುವಾಗಿ ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ದನ, ಕರುಗಳ ಸಮ್ಮೇಳನ ಹಮ್ಮಿಕೊಳ್ಳುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಅಬ್ಬಾಸ್ ಅಲಿ, ಸದಸ್ಯರಾದ ಧನಲಕ್ಷ್ಮೀ ಸಿ. ಬಂಗೇರ, ರತ್ನಾವತಿ ಜಯರಾಮ ಶೆಟ್ಟಿ, ಚೆನ್ನೈತ್ತೋಡಿ ಗ್ರಾಪಂ ಅಧ್ಯಕ್ಷ ಯತೀಶ್ ಶೆಟ್ಟಿ, ದ.ಕ. ಹಾಲು ಒಕ್ಕೂಟ ನಿ.ಮಂಗಳೂರು ಇದರ ವ್ಯವಸ್ಥಾ ನಿರ್ದೇಶಕ ಡಾ.ಜಿ.ವಿ. ಹೆಗ್ಡೆ, ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ವಾಮದಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಚೌಟ, ವಗ್ಗ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶಿವಪ್ಪ ಗೌಡ ಎನ್., ಪಶುಸಂಗೋಪನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ದ.ಕ. ಮಂಗಳೂರು ಉಪನಿರ್ದೇಶಕ ಡಾ. ಎಸ್.ಜಯರಾಜ್, ಪ್ರಮೋದ್ ಕುಮಾರ್ ರೈ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿ ಮಿಶ್ರತಳಿ ಕರುಗಳ ಸಾಕಾಣಿಕೆ ಮತ್ತು ಲಾಭದಾಯಕ ಹೈನುಗಾರಿಕೆ ಮತ್ತು ಕಿಸಾನ್ ಸಂಪರ್ಕ ಸಭೆ ನಡೆಯಿತು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ದ.ಕ. ಬಂಟ್ವಾಳ ಸಹಾಯ ನಿರ್ದೇಶಕ ಡಾ. ಎಚ್.ಆರ್. ಲಸ್ರಾದೋ ಸ್ವಾಗತಿಸಿದರು. ಅಶೋಕ್ ಡಿಸೋಜ ವಂದಿಸಿ, ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ನಿರೂಪಿಸಿದರು.
ಪ್ರದರ್ಶನ
ಮೂರು ತಿಂಗಳೊಳಗಿನ ಸಣ್ಣ ಕರುಗಳು, ಮೂರು ತಿಂಗಳಿಂದ ಆರು ತಿಂಗಳವರೆಗಿನ ದೊಡ್ಡ ಕರುಗಳು ಕಡಸುಗಳ ಹಾಗೂ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ ಜಾರುವಾರುಗಳಿಗೆ ಸಮತೋಲನ ಪಶು ಆಹಾರ ಹಸಿವು ಮೇವು, ನೀರು ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಕರುಗಳಿಗೂ ಪೆÇ್ರೀತ್ಸಾಹಕ ಬಹುಮಾನವನ್ನು ವಿತರಿಸಲಾಯಿತು.







