ನಿವೃತ್ತ ರೋಟರಿ ಗವರ್ನರ್ ಸೂರ್ಯಪ್ರಕಾಶ್ ಭಟ್ ನಿಧನ

ಮಂಗಳೂರು, ಜ.8: ‘ಸೂರಿ’ ಎಂದೇ ಜನಪ್ರಿಯಗೊಂಡಿದ್ದ ತೆರಿಗೆ ಅಕೌಂಟೆಂಟ್ ಹಾಗೂ ನಿವೃತ್ತ ರೋಟರಿ ಡಿಸ್ಟಿಕ್ ಗವರ್ನರ್ ಸೂರ್ಯಪ್ರಕಾಶ್ ಭಟ್ (62) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು.
ಕಳೆದ ಎರಡು ವಾರಗಳಿಂದ ತೀವ್ರ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಸೂರ್ಯಪ್ರಕಾಶ್ ಭಟ್ ಅವರು ತೀವ್ರ ಅನಾರೋಗ್ಯದಿಂದ ಕೋಮಾ ಸ್ಥಿತಿಗೆ ತಲುಪಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ 9:20ಕ್ಕೆ ಕೊನೆಯುಸಿರೆಳೆದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.
ಸೂರ್ಯಪ್ರಕಾಶ್ ಮೂಲತಃ ಮಂಗಳೂರಿನವರು. ಯುವಕರಾಗಿದ್ದಾಗಲೇ ಮಂಗಳೂರು ರೋಟರಿ ಕ್ಲಬ್ನಲ್ಲಿ ಸಕ್ರಿಯ ರೋಟರಿಯನ್ ಆಗಿ ಸೇವೆ ಸಲ್ಲಿಸಲು ಆರಂಭಿಸಿದರು. ಬಳಿಕ 1989ರಲ್ಲಿ ಮಂಗಳೂರು ರೋಟರಿ ಕ್ಲಬ್ ಸೇರ್ಪಡೆಗೊಂಡರು. ಬಳಿಕ 1995-96ರ ಅವಧಿಯಲ್ಲಿ ಮಂಗಳೂರು ರೋಟರಿ ಕ್ಲಬ್ ಸೇರಿದಂತೆ ಡಿಸ್ಟಿಕ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.
1999-2000ರ ವೇಳೆ ಮಂಗಳೂರು ರೋಟರಿ ಕ್ಲಬ್ನ ಸುವರ್ಣ ಮಹೋತ್ಸವದ ಸಂದರ್ಭ ಸೂರ್ಯ ಪ್ರಕಾಶ್ ಅವರು ಕ್ಲಬ್ನ ಅಧ್ಯಕ್ಷ ಸ್ಥಾನ ಹುದ್ದೆಗೇರಿ ಸಮರ್ಥ ಸೇವೆ ಸಲ್ಲಿಸಿದರು. 2003-04ರ ಅವಧಿಯಲ್ಲಿ ರೋಟರಿ ಡಿಸ್ಟಿಕ್ 3180ರ ಗವರ್ನರ್ ಸ್ಥಾನಕ್ಕೆ ಏರಿದರು. ಅವರು ಪ್ರಸ್ತುತ ರೋಟರಿ ಜಿಲ್ಲಾ ಸಲಹಾ ಮಂಡಳಿಯ ಸದಸ್ಯರಾಗಿದ್ದರು.
ಸೂರ್ಯಪ್ರಕಾಶ್ ಅವರು ನಗರದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ತಮ್ಮ ಪ್ರೌಢ ಶಾಲಾ ಶಿಕ್ಷಣ ಪೂರೈಸಿದರು. ನಂತರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಚಾರ್ಟೆಡ್ ಅಕೌಂಟೆಡ್ಗಳಾದ ಕಾಮತ್ ಮತ್ತು ರಾವ್ ಎಂಬವರಲ್ಲಿ ಸಿ.ಎ. ಶಿಕ್ಷಣ ಪಡೆದರು. ಬಳಿಕ ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ (ಕೆಸಿಸಿಐ) ಖಜಾಂಚಿ ಹಾಗೂ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು. ಅವರು ನವದೆಹಲಿಯ ಫಿಕ್ಕಿ (FICCI) ಹಣಕಾಸು ಮತ್ತು ಬ್ಯಾಂಕಿಂಗ್ ಸಮಿತಿಯ ಸದಸ್ಯರಾಗಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಕೇಂದ್ರ ಕಸ್ಟಮ್ಸ್ನ ಸಲಹಾ ಮಂಡಳಿಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಮಂಗಳೂರಿನ ಕರಾವಳಿ ಆಟೊಮೊಟಿವ್ ಸ್ಪೋರ್ಟ್ಸ್ ಕ್ಲಬ್ನ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಮಂಗಳೂರು ಸಮೀಪದ ಸೋಮೇಶ್ವರದ ಶ್ರೀ ಸೋಮನಾಥ ದೇವಾಲಯದ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ಅವಿರತವಾಗಿ ಗುರುತಿಸಿಕೊಂಡಿದ್ದರು.
ಮೃತರ ಅಂತ್ಯ ಸಂಸ್ಕಾರವು ಮಂಗಳೂರು ನಗರದಲ್ಲಿ ಗುರುವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.







