ಪೇಜಾವರ ಶ್ರೀವಿಶ್ವೇಶತೀರ್ಥರ ಆರಾಧನೋತ್ಸವ: ಪರಿಶಿಷ್ಟ ಜನರ ಕಾಲನಿಯಲ್ಲಿ ಅನ್ನದಾನ

ಉಡುಪಿ, ಜ.9: ಗುರುವಾರ ಜ.9ರಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಮಹಾ ಸಮಾರಾಧನೋತ್ಸವದ ಪ್ರಯುಕ್ತ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ, ಉಡುಪಿಯ ಪೇಜಾವರ ಮಠ ಸೇರಿದಂತೆ ದೇಶಾದ್ಯಂತ ಇರುವ ಪೇಜಾವರ ಮಠದ ಶಾಖೆಗಳು, ಅತಿಥಿಗೃಹ ಗಳು, ಶಾಲೆ-ಕಾಲೇಜು, ಅನಾಥಾಶ್ರಮ, ಸೇವಾಧಾಮ, ವಿದ್ಯಾರ್ಥಿನಿ ನಿಲಯ ಗಳು ಸೇರಿದಂತೆ 85ಕ್ಕೂ ಅಧಿಕ ಕಡೆಗಳಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಸಾಮೂಹಿಕ ಅನ್ನ ಸಂತರ್ಪಣೆ, ವಿದ್ವತ್ಗೋಷ್ಠಿಗಳು ನಡೆದವು.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ಆರಾಧನಾ ಮಹೋತ್ಸವ ನಡೆದವು. ಅಷ್ಟಮಠಗಳ ಹಲವು ಯತಿಗಳು ಸೇರಿದಂತೆ ವಿವಿದೆಡೆಗಳಿಂದ ಆಗಮಿಸಿದ ಮಠಾಧೀಶರು ಇದರಲ್ಲಿ ಭಾಗವಹಿಸಿದ್ದರು.
ಉಡುಪಿ ಪೇಜಾವರ ಮಠದಲ್ಲೂ ಬೆಳಗ್ಗೆ ಪವಮಾನ ಹೋಮ, ಭಜನೆ, ಪಾರಾಯಣ, ಪಾದುಕಾ ಪೂಜಾ ಮಹಾಪೂಜೆ ಹಾಗೂ ಸಾವಿರಕ್ಕೂ ಅಧಿಕ ಜನರಿಗೆ ಅನ್ನಾರಾಧನೆಗಳು ನಡೆದವು. ಶ್ರೀಗಳ ಆಸನದಲ್ಲಿ ಭಾವಚಿತ್ರ, ಪಾದುಕೆ ಗಳನ್ನಿಟ್ಟು ರಜತಮಂಟಪ ಸಹಿತ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪದ್ಮನಾಭ ಭಟ್ ಕಿದಿಯೂರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಇದೇ ವೇಳೆ ಸಮಾಜದಲ್ಲಿ ಬೇರುಬಿಟ್ಟಿರುವ ಅಸ್ಪಶ್ಯತೆಯ ನಿವಾರಣೆಗಾಗಿ ಪೇಜಾವರಶ್ರೀಗಳು ಕೈಗೊಂಡ ದಲಿತರ ಕೇರಿಯಲ್ಲಿ ಪಾದಯಾತ್ರೆಯಂಥ ಕ್ರಾಂತಿಕಾರಿ ಕರ್ತವ್ಯವನ್ನು ಸ್ಮರಿಸುವ ಸಲುವಾಗಿ ಉಡುಪಿಯ ಕರಂಬಳ್ಳಿಯಲ್ಲಿ ಪರಿಶಿಷ್ಟ ಜಾತಿ ಜನರ ಕಾಲೊನಿಯಲ್ಲಿ ಶ್ರೀಗಳ ಸಂಸ್ಮರಣೆ ಸಹಿತ ಸಾಮೂಹಿಕ ಅನ್ನದಾನ ನೆರವೇರಿತು.
ಶ್ರೀವಿಶ್ವಪ್ರಸನ್ನತೀರ್ಥರ ಸೂಚನೆಯಂತೆ ವಾಸುದೇವ ಭಟ್ ಪೆರಂಪಳ್ಳಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪಕ ರಾಜಶೇಖರ ಭಟ್, ಉದ್ಯಮಿ ಭುವನೇಂದ್ರ ಕಿದಿಯೂರು, ನಗರಸಭಾ ಸದಸ್ಯ ಗಿರಿಧರ ಆಚಾರ್ಯ, ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಕುಮಾರ್, ಪ್ರಶಾಂತ್ ಶೆಟ್ಟಿ ಅಂಜಾರು, ಕಿಶೋರ್ ಸಾಲ್ಯಾನ್ ಮೊದಲಾದವರು ಇದರಲ್ಲಿ ಪಾಲ್ಗೊಂಡಿದ್ದರು. ಸುಮಾರು 200ಕ್ಕೂ ಅಧಿಕ ಮಂದಿ ಇಲ್ಲಿ ಭೋಜನ ಸ್ವೀಕರಿಸಿದರು.









