ಸಫಾಯಿ ಕರ್ಮಚಾರಿಗಳಿಗೆ ಎಲ್ಲಾ ಸೌಲಭ್ಯ ಒದಗಿಸಿ: ಜೆ.ಹಿರೇಮಣಿ

ಉಡುಪಿ, ಜ.10: ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿಗಳಿಗೆ ಸರಕಾರ ದಿಂದ ದೊರೆಯುವ ಎಲ್ಲಾ ಸೌಲ್ಯಗಳನ್ನು ಒದಗಿಸಿ, ಅವರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಅಧಿಕಾರಿ ಗಳು ಕಾರ್ಯ ನಿರ್ವಹಿಸುವಂತೆ ರಾಷ್ಟ್ರಿಯ ಸಫಾಯಿ ಕರ್ಮಚಾರಿಗಳ ಆಯೋಗ ಸದಸ್ಯ ಜಗದೀಶ್ ಹಿರೇಮಣೆ ಹೇಳಿದ್ದಾರೆ.
ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ ಅವರು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಫಾಯಿ ಕರ್ಮಚಾರಿಗಳ ಮತ್ತು ಅವರ ಅವಲಂಬಿತರ ವೈದ್ಯಕೀಯ ವೆಚ್ವವನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆ ಗಳಿಂದಲೇ ಭರಿಸುವಂತೆ ಸೂಚಿಸಿದ ಜಗದೀಶ್ ಹಿರೇಮಣಿ, ಕೆಲಸದ ಸಂದರ್ಭದಲ್ಲಿ ಸುರಕ್ಷತಾ ಸಾಧನಗಳನ್ನು ಬಳಸುವಂತೆ ಅವರಿಗೆ ಪ್ರೇರೇಪಿಸಬೇಕು. ಅಂಬೇಡ್ಕರ್ ಅಭಿವೃಧ್ದಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲ್ಯಗಳ ಬಗ್ಗೆ ಅವರಿಗೆ ಮಾಹಿತಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಫಾಯಿ ಕರ್ಮಚಾರಿಗಳು ವಿವಿಧ ಸೌಲಭ್ಯ ಪಡೆಯಲು ಪ್ರಮಾಣಪತ್ರದ ಅಗತ್ಯವಿರುವುದನ್ನು ಮನಗಂಡ ಜಗದೀಶ ಹಿರೇಮಣಿ, ಎಲ್ಲಾ ಸ್ಥಳಿಯ ಸಂಸ್ಥೆಗಳು ತಮ್ಮಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳಿಗೆ ಅವರ ಕುಟುಂಬ ಸದಸ್ಯರ ಹೆಸರನ್ನು ಸೇರಿಸಿ ಪ್ರಮಾಣಪತ್ರ ವಿತರಿಸುವಂತೆ ಮತ್ತು ಜಿಲ್ಲೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕ ಹುದ್ದೆಗಳನ್ನು ಜಿಲ್ಲಾ ಹಂತದಲ್ಲೇ ನೇಮಕಾತಿ ಮೂಲಕ ತುಂಬುವಂತೆ ಸೂಚನೆಗಳನ್ನು ನೀಡಿದರು.
ಸಫಾಯಿ ಕರ್ಮಚಾರಿಗಳಿಗೆ ವಸತಿ ವ್ಯವಸ್ಥೆ ಒದಗಿಸುವಂತೆ ಸೂಚಿಸಿದ ಅವರು, ಉಡುಪಿಯ ಪೌರಕಾರ್ಮಿಕರ ವಸತಿಗೃಹದಲ್ಲಿ ವಾಸವಿರುವವರಿಗೆ ಆ ವಸತಿ ಗೃಹವನ್ನು ಅವರ ಹೆಸರಿಗೆ ನೊಂದಣಿ ಮಾಡಿಕೊಡುವಂತೆ ಹಾಗೂ ಪಂಚಾಯತ್ಗಳಲ್ಲಿ ಕಾರ್ಯ ನಿರ್ವಹಿಸುವ ಸಫಾಯಿ ಕರ್ಮಚಾರಿಗಳಿಗೂ ಸಹ ನಿಯಮಾನುಸಾರ ಕನಿಷ್ಠ ವೇತನ ನೀಡುವ ಕುರಿತಂತೆ ಕ್ರಮ ಕೈಗೊಳ್ಳಲು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ತಿಳಿಸಿದರು.
ನಗರ ಪ್ರದೇಶದಲ್ಲಿ ಮ್ಯಾನ್ಯುವೆಲ್ ಸ್ಕಾವೆಂಜರ್ಸ್ ಇಲ್ಲದಿದ್ದರೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಇದು ನಡೆಯುತ್ತಿದೆ. ಈ ಬಗ್ಗೆ ಎಲ್ಲಾ ಪಿಡಿಓಗಳಿಗೆ ಕಾರ್ಯಾಗಾರ ಏರ್ಪಡಿಸಿ ಅರಿವು ಮೂಡಿಸಿ. ಮ್ಯಾನ್ಯುವೆಲ್ ಸ್ಕಾವೆಂಜರ್ ಕಂಡುಬಂದಲ್ಲಿ ಈ ಕಾರ್ಯ ಮಾಡುವ ವ್ಯಕ್ತಿ, ಆ ಕಾರ್ಯಕ್ಕೆ ನಿಯೋಜಿಸಿದವರು ಮತ್ತು ಸಂಬಂದಪಟ್ಟ ಅಧಿಕಾರಿಗಳು ಸಹ ಶಿಕ್ಷಾರ್ಹರು ಎಂದರು.
ಗ್ರಾಮೀಣ ಪ್ರದೇಶದಲ್ಲಿರುವ ಮ್ಯಾನ್ಯುವೆಲ್ ಸ್ಕಾವೆಂಜರ್ಗಳನ್ನು ಗುರುತಿಸಿ ಅವರಿಗೆ ಸಕ್ಕಿಂಗ್ ಯಂತ್ರ ಖರೀದಿಸಲು ಮುದ್ರಾ ಯೋಜನೆ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ಒದಗಿಸಿ. ಕನಿಷ್ಠ ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿ ಒಂದು ಸಕ್ಕಿಂಗ್ ಯಂತ್ರಗಳಿದ್ದಲ್ಲಿ ಮ್ಯಾನ್ಯುಯಲ್ ಸ್ಕಾವೆಂಜರ್ಗಳಿಗೆ ಪರ್ಯಾಯ ಉದ್ಯೋಗ ಒದಗಿಸಲು ಹಾಗೂ ಗ್ರಾಮೀಣ ಪ್ರದೇಶದಲ್ಲೂ ಈ ಪದ್ಧತಿ ಕೊನೆಗಾಣಿಸಲು ಸಾಧ್ಯ, ಈ ಕುರಿತಂತೆ ಜಿಲ್ಲಾ ಲೀಡ್ ಬ್ಯಾಂಕ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಹಿರೇಮಣಿ ಸೂಚಿಸಿದರು.
ಜಿಲ್ಲೆಯಲ್ಲಿ 298 ಮಂದಿ ಸಫಾಯಿ ಕರ್ಮಚಾರಿಗಳಿದ್ದು,ಅವರ ವೈದ್ಯಕೀಯ ಸೌಲ್ಯಕ್ಕಾಗಿ 13.77 ಲಕ್ಷ ರೂ., ಸುರಕ್ಷತಾ ಉಪಕರಣಗಳಿಗಾಗಿ 23.69 ಲಕ್ಷ ರೂ. ಹಾಗೂ ಉಪಹಾರ ವೆಚ್ಚಕ್ಕಾಗಿ 15.20 ಲಕ್ಷ ರೂ. ಮೀಸಲಿಡ ಲಾಗಿದೆ. ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಒದಗಿಸಲಾ ಗುತಿದ್ದು, ಅಗತ್ಯ ಸುರಕ್ಷತಾ ಉಪಕರಣಗಳನ್ನು ವಿತರಿಸಲಾಗಿದೆ. ಪೌರ ಕಾರ್ಮಿಕರ ಗೃಹಬಾಗ್ಯ ಯೋಜನೆಯಡಿ 9 ಮನೆ ಮಂಜೂರಾಗಿದ್ದು, 4 ಮನೆ ಪೂರ್ಣಗೊಂಡಿವೆ. ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ವಿದ್ಯಾರ್ಥಿವೇತನ ಸಹ ನೀಡಲಾಗುತ್ತಿದೆ ಎಂದು ಜಿಲ್ಲಾ ನಗರಾಭಿವೃದ್ದಿ ಕೋಶದ ನಿರ್ದೇಶಕ ಅರುಣಪ್ರಭ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಪ್ರೀತಿ ಗೆಹ್ಲೋಟ್, ಎಸ್ಪಿವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಸಹಾಯಕ ಕಮಿಷನರ್ ರಾಜು, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಮೇಶ್, ವಿವಿಧ ಇಲಾಖೆಯ ಅಧಿಕಾರಿಗಳು, ಸಫಾಯಿ ಕರ್ಮಚಾರಿಗಳ ಜಿಲ್ಲಾ ಸಮಿತಿ, ಉಪವಿಭಾಗ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.









