'ನಮ್ಮನ್ನು ತಾರತಮ್ಯವಿಲ್ಲದ ಬೇರೆ ದೇಶಕ್ಕೆ ಗಡೀಪಾರುಗೊಳಿಸಿ': ಉನಾ ಸಂತ್ರಸ್ತನಿಂದ ರಾಷ್ಟ್ರಪತಿಗೆ ಪತ್ರ

ಅಹ್ಮದಾಬಾದ್: ದೇಶಾದ್ಯಂತ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗಳು ಮುಂದುವರಿದಿರುವಂತೆಯೇ ಉನಾ ದೌರ್ಜನ್ಯ ಪ್ರಕರಣದಲ್ಲಿನ ಸಂತ್ರಸ್ತರೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದು ತಾನು ಹಾಗೂ ತನ್ನ ಸೋದರರನ್ನು ಯಾವುದೇ ತಾರತಮ್ಯ ಎದುರಿಸದಂತಹ ಬೇರೆ ಯಾವುದಾದರೂ ದೇಶಕ್ಕೆ ತಮ್ಮನ್ನು ಗಡೀಪಾರು ಮಾಡಿ ಎಂದು ಮನವಿ ಮಾಡಿದ್ದಾರೆ.
ಸ್ವಘೋಷಿತ ಗೋರಕ್ಷಕರಿಂದ ದೌರ್ಜನ್ಯಕ್ಕೀಡಾಗಿದ್ದ ಏಳು ದಲಿತರ ಪೈಕಿ ಒಬ್ಬರಾಗಿರುವ ವಶ್ರಮ್ ಸರ್ವಯ್ಯ ತನ್ನ ಪತ್ರದಲ್ಲಿ "ನಾವು ಸಿಎಎ ವಿರೋಧಿಸುತ್ತೇವೆ. ಆದರೂ ಅವರು ಅದನ್ನು ಜಾರಿಗೊಳಿಸಲು ನಿರ್ಧರಿಸಿದರೆ ದಲಿತರನ್ನು ಸಮಾನ ನಾಗರಿಕರೆಂದು ಪರಿಗಣಿಸಲ್ಪಟುವ ಬೇರೆ ದೇಶಕ್ಕೆ ಗಡೀಪಾರುಗೊಳಿಸಬೇಕು'' ಎಂದು ಬರೆದಿದ್ದಾರೆ.
"ನಮ್ಮನ್ನು ಭಾರತದಲ್ಲಿ ನಾಗರಿಕರಂತೆ ಕಾಣಲಾಗುತ್ತಿಲ್ಲ. ಹಿಂದು ಸಮುದಾಯದಲ್ಲಿ ದಲಿತರ ವಿರುದ್ಧ ತಾರತಮ್ಯ ತೋರಲಾಗುತ್ತದೆ. ಇದೇ ಕಾರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದೇನೆ" ಎಂದು ಅವರು ಹೇಳಿದ್ದಾರೆ.
``ಘಟನೆ ನಡೆದಾಗ ಗುಜರಾತ್ ಸಿಎಂ ಆಗಿದ್ದ, ಈಗ ಉತ್ತರ ಪ್ರದೇಶದ ರಾಜ್ಯಪಾಲೆಯಾಗಿರುವ ಆನಂದಿಬೆನ್ ಪಟೇಲ್ ನಮ್ಮನ್ನು 2016ರಲ್ಲಿ ಭೇಟಿಯಾಗಿ ಉದ್ಯೋಗದ ಭರವಸೆ ನೀಡಿದ್ದರು. ಒಂದು ತಿಂಗಳೊಳಗಾಗಿ ಮತ್ತೆ ಭೇಟಿಯಾಗುವುದಾಗಿ ತಿಳಿಸಿದ್ದರು. ಆದರೆ ಆಕೆ ಬರಲೇ ಇಲ್ಲ ಹಾಗೂ ನಮಗೆ ನೌಕರಿಯನ್ನೂ ನೀಡಿಲ್ಲ" ಎಂದರು.
ವಶ್ರಮ್ ಈ ಹಿಂದೆ ಕೂಡ 2018ರಲ್ಲಿ ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮತಿ ಕೋರಿದ್ದರು.







