ಮಹಿಳಾ ಮೀನುಗಾರರಿಂದ ಸಂಸದ ಅನಂತ ಕುಮಾರ ಹೆಗಡೆ, ಶಾಸಕಿ ಫೋಟೊಗಳಿಗೆ ಸೆಗಣಿ, ಚಪ್ಪಲಿಯೇಟು
ಕಾರವಾರ ಬಂದರು ವಿಸ್ತರಣೆ ಕಾಮಗಾರಿಗೆ ಮುಂದುವರಿದ ವಿರೋಧ
ಕಾರವಾರ, ಜ.14: ಸಾಗರಮಾಲಾ ಯೋಜನೆಯಡಿ ಕಾರವಾರ ವಾಣಿಜ್ಯ ಬಂದರ್ ವಿಸ್ತರಣೆ ಕಾಮಗಾರಿಗೆ ಮೀನುಗಾರರ ವಿರೋಧ ಮಂಗಳವಾರವೂ ಮುಂದುವರಿದಿದೆ. ಇಂದು ನಗರದ ಮೀನು ಮಾರುಕಟ್ಟೆ ಬಂದರ್ ಮಾಡಿ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಹಿಳಾ ಮೀನುಗಾರರು ಸಂಸದ ಅನಂತ ಕುಮಾರ ಹೆಗಡೆ ಮತ್ತು ಸ್ಥಳೀಯ ಶಾಸಕಿ ರೂಪಾಲಿ ನಾಯ್ಕಾ ಅವರ ಭಾವಚಿತ್ರಕ್ಕೆ ಸೆಗಣಿ ಎರಚಿದರು ಮತ್ತು ಚಪ್ಪಲಿಯಿಂದ ಹೊಡೆದು, ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮೀನುಗಾರರ ಭಾರೀ ವಿರೋಧದಿಂದಾಗಿ ಕೆಲವು ದಿನ ಮುಂದೂಡಲಾಗಿದ್ದ ಸಾಗರಮಾಲಾ ಯೋಜನೆಯಡಿಯಲ್ಲಿ ನಡೆಯುವ ಬ್ರೇಕ್ ವಾಟರ್ ಕಾಮಗಾರಿ ಸೋಮವಾರದಿಂದ ಮತ್ತೆ ಪ್ರಾರಂಭಗೊಂಡಿತ್ತು. ಇದರ ವಿರುದ್ಧ ಮತ್ತೆ ಸಿಡಿದೆದ್ದ ಸ್ಥಳೀಯರು, ಮೀನುಗಾರರು ಏಕಾಏಕಿ ಕಾರವಾರ್ ಬಂದ್ ಮಾಡಿ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಇಂದು ಕೂಡಾ ಮುಂದುವರಿದಿದ್ದು, ಸಂಸದ ಮತ್ತು ಸ್ಥಳೀಯ ಶಾಸಕಿ ವಿರುದ್ಧ ಮಹಿಳಾ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.