ತಲೆಗೆ ಗುಂಡೇಟು ಬಿದ್ದರೂ 7 ಕಿಮೀ ದೂರ ವಾಹನ ಚಲಾಯಿಸಿ ದೂರು ನೀಡಿದ ಮಹಿಳೆ !
ಸಾಂದರ್ಭಿಕ ಚಿತ್ರ
ಚಂಡೀಗಢ : ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ ತನ್ನ ಸೋದರನ ಹದಿಹರೆಯದ ಪುತ್ರನಿಂದ ಗುಂಡೇಟಿಗೆ ಒಳಗಾಗಿ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದರೂ ಧೃತಿಗೆಡದೆ ಏಳು ಕಿಮೀ ದೂರದಲ್ಲಿದ್ದ ಪೊಲೀಸ್ ಠಾಣೆಗೆ ವಾಹನ ಚಲಾಯಿಸಿಕೊಂಡು ಹೋಗಿ 42 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಘಟನೆ ಮುಕ್ತಸರ್ ಗ್ರಾಮದಲ್ಲಿ ನಡೆದಿದೆ.
ಸುಮೀತ್ ಕೌರ್ ಎಂಬ ಹೆಸರಿನ ಈ ಮಹಿಳೆ ನೀಡಿದ ದೂರಿನಲ್ಲಿ ಆಕೆ ಹಾಗೂ ಆಕೆಯ ತಾಯಿ ಸುಖಬಿಂದರ್ ಕೌರ್ ಒಡೆತನದ ಜಮೀನಿನ ಮೇಲೆ ಹಕ್ಕು ಸ್ಥಾಪಿಸಲು ಸೋದರ ಹರೀಂದರ್ ಕೌರ್ ಯತ್ನಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ತಂದೆಯ ಮರಣಾ ನಂತರ ಸುಮೀತ್ ಕೌರ್ ಮತ್ತಾಕೆಯ ತಾಯಿಗೆ 16 ಎಕರೆ ಜಮೀನು ದೊರಕಿತ್ತೆನ್ನಲಾಗಿದ್ದು, ಇದನ್ನು ತನ್ನ ಸ್ವಾಧೀನ ಪಡಿಸಲು ಆಕೆಯ ಸೋದರ ಯತ್ನಿಸುತ್ತಿದ್ದ ಎಂದು ದೂರಲಾಗಿದೆ.
ಆರೋಪಿ ಬಾಲಕ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ದೂರು ನೀಡಿದ ನಂತರ ಮಹಿಳೆ ಮತ್ತಾಕೆಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ವೈದ್ಯರು ಆಕೆಯ ದೇಹ ಹೊಕ್ಕಿದ್ದ ಗುಂಡುಗಳನ್ನು ಹೊರತೆಗೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹರೀಂದರ್ ಮತ್ತಾತನ ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.