ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಲು ಅವರೇನು ಯುಗ ಪುರುಷರೇ: ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು, ಜ.17: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಸೂಲಿಬೆಲೆ ಚಕ್ರವರ್ತಿ ಅವರ ಹತ್ಯೆಗೆ ಸಂಚು ಎಂಬ ಸುದ್ದಿ ಕೇಳಿದೆ. ಆದರೆ, ಅವರಿಬ್ಬರೂ ಯುಗ ಪುರಷರೇ, ಅವರ ಸಾಧನೆಯಾದರೂ ಏನು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಶುಕ್ರವಾರ ನಗರದ ಮಿಲ್ಲರ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದ ಮಸೀದಿ ಸಭಾಂಗಣದಲ್ಲಿ ಕರ್ನಾಟಕ ಜಯಂಟ್ ಆಕ್ಷನ್ ಕಮಿಟಿ ಆಯೋಜಿಸಿದ್ದ ಸಿಎಎ, ಎನ್ಆರ್ ಸಿ, ಹಾಗೂ ಎನ್ ಪಿಆರ್ ಕುರಿತು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೇಜಸ್ವಿ ಸೂರ್ಯ ಮತ್ತು ಸೂಲಿಬೆಲೆ ಚಕ್ರವರ್ತಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎನ್ನುತ್ತಾರೆ. ಆದರೆ, ಅವರು ಬೆಂಗಳೂರಿಗೆ, ಸಮಾಜಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಇತ್ತೀಚೆಗೆ ಆರೆಸ್ಸೆಸ್ ಕಾರ್ಯಕರ್ತ ವರುಣ್ ಮೇಲಿನ ಹಲ್ಲೆ ವೈಯುಕ್ತಿಕ ಕಾರಣಕ್ಕೆ ಎಂದು ಕೆಲ ಪೊಲೀಸರು ಹೇಳಿದ್ದರು. ಇದೀಗ ಎಸ್ಡಿಪಿಐ ಕಾರ್ಯಕರ್ತರು ಎನ್ನುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಹಿಡಿಯಬೇಕು. ಆದರೆ, ಒಂದು ಸಮುದಾಯವನ್ನು ಗುರಿಯಾಗಿಸಿ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.