ಸಿಎಎ ಬೆಂಬಲಕ್ಕಾಗಿ ಬಿಜೆಪಿಯಿಂದ ಪರ್ಯಾಯೋತ್ಸವದ ದುರ್ಬಳಕೆ: ಖಂಡನೆ
ಕುಂದಾಪುರ, ಜ.18: ಉಡುಪಿಯಲ್ಲಿ ನಡೆದ ಪರ್ಯಾಯ ಉತ್ಸವದಲ್ಲಿ ಸೇರಿದ್ದ ಶ್ರದ್ಧಾವಂತ ಭಕ್ತಸಮೂಹವನ್ನು ತಮ್ಮ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿ ಪರ್ಯಾಯಕ್ಕೆ ರಾಜಕೀಯ ಬಣ್ಣ ಬಳಿದ ಬಿಜೆಪಿ ಹಾಗೂ ಇದಕ್ಕೆ ಅನುಮತಿ ನೀಡಿದ ಜಿಲ್ಲಾಡಳಿತದ ನಡೆಯನ್ನು ಕುಂದಾಪುರದ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.
ಜ.17ರಂದು ಉಡುಪಿ ನಗರದಲ್ಲಿ ಪರ್ಯಾಯೋತ್ಸವ ನಡೆಯುತ್ತಿರುವಾಗ ಬಿಜೆಪಿ ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಕ್ಕಾಗಿ ಸಹಿಸಂಗ್ರಹ ಮತ್ತು ಪೋಸ್ಟ್ ಕಾರ್ಡ್ ಅಭಿಯಾನ ನಡೆಸಿದೆ. ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಭಕ್ತರ ಸೌಜನ್ಯವನ್ನು ದುರ್ಬಳಕೆ ಮಾಡಿಕೊಂಡು ಪೋಸ್ಟ್ ಕಾರ್ಡ್ಗೆ ಸಹಿ ಹಾಕಿಸಿಕೊಂಡಿದೆ. ತನ್ಮೂಲಕ ಹಿಂದೂಗಳ ಶ್ರದ್ಧಾ, ಭಕ್ತಿಯ ಉತ್ಸವ ವೊಂದನ್ನು ತನ ರಾಜಕೀಯ ಬೇಳೆ ಬೇಯಿಸಲು ಬಳಸಿಕೊಂಡಿದೆ. ಇದು ಅತ್ಯಂತ ಖಂಡನೀು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಸಿಎಎ ಮತ್ತು ಎನ್ಆರ್ಸಿ ವಿರೋಧಿ ಹೋರಾಟದ ಪ್ರತಿಭಟನಾ ಸಭೆ ಗಳಿಗೆ ಅನುಮತಿ ನಿರಾಕರಿಸುವ ಪೊಲೀಸರು ಪರ್ಯಾಯದಂತಹ ಸೂಕ್ಷ್ಮ ಸಂದರ್ಭದಲ್ಲಿ ಸಿಎಎ ಕಾಯ್ದೆಯ ಪ್ರಚಾರಕ್ಕೆ ಮತ್ತು ಅಭಿಯಾನಕ್ಕೆ ಬಿಜೆಪಿಗೆ ಅನುಮತಿ ನೀಡಿರುವುದು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ತಾರತಮ್ಯ ನೀತಿಯನ್ನು ಪ್ರರ್ಶಿಸುತ್ತಿದೆ ಎಂದು ಸಮಿತಿ ಟೀಕಿಸಿದೆ.