ನಗರ ಪ್ರದೇಶಗಳ ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ: ಡಾ.ಎಂ.ಎಂ.ಕುಟ್ಟಿ
ಪೆಟ್ರೋಕೆಮಿಕಲ್ ತಂತ್ರಜ್ಞಾನ ಕುರಿತ ಜಾಗತಿಕ ಸಮ್ಮೇಳನ

ಬೆಂಗಳೂರು, ಜ19: ಪರಿಸರ ಸಂರಕ್ಷಣೆ ಉದ್ದೇಶದಿಂದ ನಗರ ಪ್ರದೇಶ, ಕೈಗಾರಿಕೆಗಳಿಂದ ಉತ್ಪತಿಯಾಗುವ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಳಸಿ ಇಂಧನ ಉತ್ಪಾದನೆ ಮಾಡುವ ತಂತ್ರಜ್ಞಾನಕ್ಕೆ ಸರಕಾರ ಆದ್ಯತೆ ನೀಡಿದ್ದು, ಈ ತಂತ್ರಜ್ಞಾನ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ಎಂ.ಕುಟ್ಟಿ ಹೇಳಿದ್ದಾರೆ.
ರವಿವಾರ ನಗರದ ತುಮಕೂರು ರಸ್ತೆಯ ಅಂತರ್ರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಎಂಆರ್ಪಿಎಲ್ ಸಹಯೋಗದಲ್ಲಿ ಆಯೋಜಿಸಲಾಗಿರುವ 24ನೇ ರಿಪೈನಿಂಗ್ ಅಂಡ್ ಪೆಟ್ರೋ ಕೆಮಿಕಲ್ ಟೆಕ್ನಾಲಜಿ ಕುರಿತ ಮೂರು ದಿನಗಳ ಜಾಗತಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇಂಧನ ಕಾರ್ಯಕ್ಷಮತೆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ತೈಲ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದನ್ನು ಬಳಸಿ ಇಂಧನ ಉತ್ಪಾದಿಸಿದರೆ ತ್ಯಾಜ್ಯ ಲೇವಾರಿ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಜತೆಗೆ ಪ್ಲಾಸ್ಟಿಕ್ ನಿಂದಲೂ ಇಂಧನ ಉತ್ಪಾದಿಸಿದರೆ ಪರಿಸರ ರಕ್ಷಣೆಗೂ ಒತ್ತು ನೀಡಿದಂತಾಗುತ್ತದೆ ಎಂದರು. ಕೇಂದ್ರ ಸರಕಾರ ಪರಿಸರ ಸ್ನೇಹಿ, ಶುದ್ಧ ಇಂಧನ ಉತ್ಪಾದನೆಗೆ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಸಿಎನ್ಜಿ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ದೆಹಲಿಯಲ್ಲಿ ಸಿಎನ್ಜಿ ಬಳಕೆಯಲ್ಲಿದ್ದು, ಇದನ್ನು ದೇಶದ ಇತರೆ ರಾಜ್ಯಗಳಿಗೆ ವಿಸ್ತರಣೆ ಮಾಡಿದರೆ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಿಎನ್ಜಿ ಉತ್ಪಾದನೆ ಮಾಡಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ವಾಹನಗಳಿಂದ ಉಂಟಾಗುವ ಮಾಲಿನ್ಯ ಕಡಿಮೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಗಾಗಿ ಸಂಶೋಧನಾ ಚಟುವಟಿಕೆಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಗಳಾಗುತ್ತಿವೆ. ಕಳೆದ 2018ರಲ್ಲಿ ದೆಹಲಿಯಲ್ಲಿ ಮಾಲಿನ್ಯ ಮಟ್ಟ ಕಡಿಮೆ ಮಾಡಲು ಆಧುನಿಕ ಬಿಎಸ್ -6 ಪೆಟ್ರೋಲ್ ಮತ್ತು ಬಿಎಸ್-6 ಡೀಸೆಲ್ ಮಾರಾಟ ಮಾಡುತ್ತಿದ್ದು, ಇದನ್ನು ಇತರೆ ನಗರಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುತ್ತಿದ್ದು, ಬರುವ 2030ರ ವೇಳೆಗೆ ಪೆಟ್ರೋಲ್ನಲ್ಲಿ ಶೇ.20ರಷ್ಟು, ಡೀಸೆಲ್ನಲ್ಲಿ ಶೇ.5 ರಷ್ಟು ಜೈವಿಕ ಇಂಧನ ಮಿಶ್ರಣ ಮಾಡುವ ಗುರಿ ಹೊಂದಲಾಗಿದೆ. ಎಥನಾಲ್ ಜತೆಗೆ ಗೃಹ ಬಳಕೆಗಾಗಿ ಬಯೋಗ್ಯಾಸ್ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಹಿರಿಯ ವಿಜ್ಞಾನಿ ಡಾ.ಅನಿಲ್ ಕಾಕೋಡ್ಕರ್ ಮಾತನಾಡಿ, ದೇಶದ ಅರ್ಥ ವ್ಯವಸ್ಥೆ ಅನಿಲ ಆಧಾರಿತ ಇಂಧನ ಕ್ಷೇತ್ರದ ಮೇಲೆ ಅವಲಂಬಿತವಾಗಿದ್ದು, ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಯೋಜನೆ ಮತ್ತು ನೀತಿ ನಿರೂಪಣೆಗಳನ್ನು ಮರು ವಿನ್ಯಾಸಗೊಳಿಸಬೇಕಾಗಿದೆ. ಕಲ್ಲಿದ್ದಲಿನಿಂದ ಇಂಧನ ಉತ್ಪಾದಿಸುವ ಕ್ಷೇತ್ರದ ಸಂಶೋಧನೆಯಿಂದ ಯಾವುದೇ ಪ್ರಯೋಜನವಿಲ್ಲ. ಪರಿಸರ ಸ್ನೇಹಿ ಇಂಧನ ಇಂದಿನ ಅಗತ್ಯವಾಗಿದೆ ಎಂದರು.
ಕೇಂದ್ರ ತೈಲ ಸಂಸ್ಕರಣೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿ, ಭಾರತೀಯ ಸಂಸ್ಕರಣಾ ಕ್ಷೇತ್ರದಲ್ಲಿ ಪೆಟ್ರೋ ಕೆಮಿಕಲ್ ಉತ್ಪಾದನೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು. ನಷ್ಟವನ್ನು ಕಡಿಮೆ ಮಾಡಿ, ಲಾಭದಾಯಕ ಕ್ರಮಗಳತ್ತ ಗಮನಹರಿಸಬೇಕು. ಇಂಧನ ಉತ್ಪಾದನೆಯಲ್ಲಿ ಸ್ವಚ್ಛ, ಸುರಕ್ಷಿತ, ಸ್ಮಾರ್ಟ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಪ್ರಾಸ್ತಾಕವಾಗಿ ಮಾತನಾಡಿ, ಕಳೆದ ಕೆಲ ವರ್ಷಗಳಲ್ಲಿ ತೈಲ ಕ್ಷೇತ್ರ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಬರುವ ದಿನಗಳಲ್ಲಿ ಸಂಸ್ಕರಣೆ ಕ್ಷೇತ್ರ ಸವಾಲುಗಳನ್ನು ಎದುರಿಸಲು ಸೂಕ್ತ ಕಾರ್ಯತಂತ್ರ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಈ ಸಮ್ಮೇಳನದಲ್ಲಿ ದೇಶ, ವಿದೇಶಗಳ 1500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. 17 ವಿದೇಶಿ ಸೇರಿದಂತೆ 27 ಪ್ರಮುಖ ಜಾಗತಿಕ ತೈಲ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.
24ನೇ ರಿಪೈನಿಂಗ್ ಅಂಡ್ ಪೆಟ್ರೋ ಕೆಮಿಕಲ್ ಟೆಕ್ನಾಲಜಿ ಕುರಿತ ಮೂರು ದಿನಗಳ ಜಾಗತಿಕ ಸಮ್ಮೇಳನದಲ್ಲಿ 17 ತೈಲ ಸಂಸ್ಥೆಗಳು ಪ್ರದರ್ಶನ ಮಳಿಗೆಗಳನ್ನು ತೆರೆದಿದ್ದು, ಇದರಲ್ಲಿ 10 ವಿದೇಶಿ ಕಂಪೆನಿಗಳು ಸೇರಿರುವುದು ವಿಶೇಷವಾಗಿದೆ. ಈ ಸಮ್ಮೇಳನದಲ್ಲಿ 15 ತಾಂತ್ರಿಕ ಗೋಷ್ಟಿಗಳನ್ನು ಆಯೋಜಿಸಿದ್ದು, 82 ತಾಂತ್ರಿಕ ಮಾಹಿತಿಯನ್ನು ಮಂಡಿಸಲಾಗುತ್ತಿದೆ. 24 ಮಂದಿ ವಿದೇಶಿ ತಜ್ಞರು ಗೋಷ್ಟಿಯಲ್ಲಿ ತೈಲ ಕ್ಷೇತ್ರದ ಆಧುನಿಕ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದಾರೆ.






.jpg)
.jpg)
.jpg)

