ತಾಯಿ ಇಲ್ಲದ ಮಕ್ಕಳನ್ನು ಬಿಟ್ಟು ಮಲತಂದೆ ಪರಾರಿ; ಮಕ್ಕಳ ರಕ್ಷಣೆ
ಉಡುಪಿ, ಜ.23: ಬಿಜಾಪುರ ಮೂಲದ ರಾಜು ಎಂಬಾತ ಅದೇ ಊರಿನ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದು, ಆಕೆಯು ಅನಾರೋಗ್ಯದಿಂದ 6 ತಿಂಗಳ ಹಿಂದೆ ಸಾವನ್ನಪ್ಪಿದ್ದಳು. ರಾಜು ಆಕೆಯ ಮೊದಲ ಗಂಡನ ಇಬ್ಬರು ಮಕ್ಕಳೊಂದಿಗೆ (ಬಾಲಕ ಮತ್ತು ಬಾಲಕಿ) ಹೆಜಮಾಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಪ್ರಸ್ತುತ ಹೈಸ್ಕೂಲ್ನಲ್ಲಿ ಕಲಿಯುತ್ತಿರುವ ಇಬ್ಬರು ಮಕ್ಕಳನ್ನು 10 ದಿನಗಳ ಹಿಂದೆ ಬಾಡಿಗೆ ಮನೆಯಲ್ಲಿಯೇ ಬಿಟ್ಟು ಇದೀಗ ಮಲತಂದೆ ಪರಾರಿಯಾಗಿದ್ದಾನೆ.
ಇದನ್ನು ಅರಿತ ಹೆಜಮಾಡಿ ಗ್ರಾಪಂನ ಉಪಾಧ್ಯಕ್ಷ ಸುಧಾಕರ್ ಕರ್ಕೇರ, ಮಾನವೀಯತೆ ನೆಲೆಯಲ್ಲಿ ತಮ್ಮ ಮನೆಯಲ್ಲಿಯೇ ತಾತ್ಕಾಲಿಕವಾಗಿ ಊಟ ಮತ್ತು ವಸತಿ ನೀಡಿದ್ದಾರೆ. ಇಬ್ಬರು ಮಕ್ಕಳು ಅಪ್ರಾಪ್ತ ವಯಸ್ಕರಾಗಿರುವುದರಿಂದ (18 ವರ್ಷದೊಳಗಿನ) ಸುಧಾಕರ್ ಅವರು ಉಡುಪಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಿದರು.
ಈ ಮಾಹಿತಿಯನ್ನು ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಹಾಗೂ ಸಮಾಜ ಕಾರ್ಯಕರ್ತೆ ಗ್ಲೀಶಾ ಮೊಂತೇರೊ ಗ್ರಾಪಂ ಉಪಾಧ್ಯಕ್ಷರ ಮನೆಗೆ ಭೇಟಿ ನೀಡಿ ಮಾಹಿತಿ ಯನ್ನು ಪಡೆದು, ಮಕ್ಕಳ ಪಾಲನೆ ಮತ್ತು ಪೋಷಣೆ ಹಾಗೂ ಪುನರ್ವವಸತಿ ಅಗತ್ಯತೆ ಮನಗಂಡು ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದರು.
ಅವರ ಆದೇಶದಂತೆ ಇದೀಗ ಬಾಲಕನಿಗೆ ಉಡುಪಿಯ ಸಿಎಸ್ಐ ಬಾಯ್ಸಾ ಹೋಮ್ ಹಾಗೂ ಬಾಲಕಿಗೆ ನಿಟ್ಟೂರಿನ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಯಿು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ