'ಸಚಿವ ಸ್ಥಾನ ಸಿಗದಿದ್ದರೆ....': ಎಚ್.ವಿಶ್ವನಾಥ್ ಹೇಳಿದ್ದು ಹೀಗೆ..
ಮೈಸೂರು,ಜ.25: ವಿದೇಶ ಪ್ರವಾಸದಿಂದ ವಾಪಸ್ ಆದ ಬೆನ್ನಲ್ಲೇ ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್.ವಿಶ್ವನಾಥ್, 17 ಮಂದಿಗೂ ಸ್ಥಾನಮಾನ ನೀಡಬೇಕು. ಕೊಡದಿದ್ರೆ ಮುಂದೆ ನೋಡೋಣ ಎಂದು ಹೇಳಿದ್ದಾರೆ.
ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ನೀಡುವುದಾಗಿ ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್ ಅವರು, ಯಡಿಯೂರಪ್ಪ ಮಾತಿನ ಮೇಲೆ ನಿಲ್ಲುವ ನಾಯಕ. ಕೊಟ್ಟ ಮಾತು ಉಳಿಸಿಕೊಳ್ಳುವ ವಿಶ್ವಾಸವಿದೆ. ನಿಮ್ಮಿಂದಲೇ ಸರ್ಕಾರ ಬಂದಿದೆ ಎಂದು ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ಕೊಟ್ಟ ಎಲ್ಲಾ 17 ಮಂದಿಗೂ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಹಿಂದೆ ಹುಣಸೂರಲ್ಲಿ ಬಿಜೆಪಿ ಎಲ್ಲಿತ್ತು. ನಾನು ಸೋತಿರಬಹುದು. ಮೊದಲು 5 ರಿಂದ 6 ಸಾವಿರ ಮತಗಳು ಬರುತ್ತಿದ್ದವು. ಈಗ ನಾನು 54 ಸಾವಿರ ಮತ ಪಡೆದಿದ್ದೇನೆ. ಪಕ್ಷ ಬೆಳೆದಿದೆ. ಈ ನಡುವೆ ಎಲ್ಲಾ 17 ಮಂದಿಗೂ ಸ್ಥಾನಮಾನ ನೀಡಲಿ. ಕೊಡದಿದ್ರೆ ಏನಾಗುತ್ತೆ ಅಂತ ಮುಂದೆ ನೋಡೋಣ ಎಂದು ಎಚ್ಚರಿಸಿದರು.