ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ದಿನೇಶ್ ಗುಂಡೂರಾವ್ ಗೆ ಹೈಕಮಾಂಡ್ ಸೂಚನೆ ?
ಬೆಂಗಳೂರು, ಜ.28: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದಿನೇಶ್ ಗುಂಡೂರಾವ್ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಯಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ನಾವು ಹೇಳೋವರೆಗೂ ಅಧ್ಯಕ್ಷರಾಗಿ ಮುಂದುವರೆಯಿರಿ ಎಂದು ಕಾಂಗ್ರೆಸ್ ಹೈಕಮಾಂಡ್ ಗುಂಡೂರಾವ್ ಅವರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಹೀಗಾಗಿ ದಿನೇಶ್ ಗುಂಡೂರಾವ್ ಪಕ್ಷದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಅಲ್ಲದೇ, ಕಾಂಗ್ರೆಸ್ ಕಚೇರಿಯಲ್ಲಿ ಬೆಂಗಳೂರು ಜಿಲ್ಲಾಧ್ಯಕ್ಷರು ಹಾಗು ಪ್ರಮುಖರ ಜೊತೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಪಕ್ಷಕ್ಕೆ ಸಂಬಂಧಿಸಿದ ವಿಚಾರ ಅಲ್ಲ, ಅದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ರಾಜ್ಯದ ಜನರಿಗೆ ಸಂಬಂಧಿಸಿದ ವಿಚಾರ ಹಲವಾರು ಯೋಜನೆಗಳು, ಕೆಲಸಗಳು ಆಗಬೇಕಿದೆ. ಬಿಜೆಪಿ ಆಂತರಿಕ ವಿಚಾರದಲ್ಲಿ ನಾನೇನು ಮಾತಾಡಿಲ್ಲ. ಮುಖ್ಯಮಂತ್ರಿ ಅವರ ನಿರ್ಧಾರದಿಂದ ಹೀಗೆಲ್ಲಾ ಆಗ್ತಿದೆ. ಅಧಿವೇಶನ ಅದಷ್ಟು ಬೇಗ ಮಾಡಿದರೆ ಒಳ್ಳೆಯದು ಎಂದು ಹೇಳಿದರು.
ಪರಿಷತ್ ಚುನಾವಣೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ನಮಗೆ ಬಹುಮತ ಇಲ್ಲದ ಕಾರಣ ನಾವು ಅಭ್ಯರ್ಥಿಯನ್ನು ಹಾಕಲ್ಲ ಎಂದು ಸ್ಪಷ್ಟಪಡಿಸಿದರು.